ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬೃಹತ್ ಗುಂಡಿ, ಸಂಚಾರದ ದಿಕ್ಕು ಬದಲು
ಬೆಂಗಳೂರು,ನವೆಂಬರ್ 2: ಸುಮನಹಳ್ಳಿ ಬಳಿಯ ಮೇಲ್ಸೇತುವೆ ಮೇಲೆ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ವಾಹನಗಳ ಸಂಚಾರದ ದಿಕ್ಕು ಬದಲಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ರಸ್ತೆಯ ಪರಿಶೀಲನೆ ನಡೆಸುತ್ತಿದ್ದಾರೆ. ವಾಹನ ಸಂಚಾರಕ್ಕೆ ಪರ್ಯಾಯವಾಗಿ ಸರ್ವಿಸ್ ರಸ್ತೆಗೆ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ರಸ್ತೆಯಲ್ಲಿ ಗುಂಡಿಬಿದ್ದ ವಿಚಾರವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಚಿಂತನೆ ನಡೆಸಿದೆ. ಗುತ್ತಿಗೆದಾರರ ವಿರುದ್ಧ ಪೊಲೀಸರಿಗೆ ದೂರು ನೀಡಿ ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಿರುವುದಾಗಿ ಮೇಯರ್ ಗೌತಮ್ ಕುಮಾರ್ ಜೈನ್ ತಿಳಿಸಿದ್ದಾರೆ.
ನುರಿತ ತಜ್ಞರು ಮತ್ತು ಬಿಬಿಎಂಪಿ ಎಂಜಿನಿಯರ್ಗಳು ಮೇಲ್ಸೇತುವೆಯ ಪರಿಶೀಲನೆ ನಡೆಸಿದ್ದಾರೆ. ಆರ್ಆರ್ ನಗರ ವಲಯ ಮುಖ್ಯ ಅಭಿಯಂತರ ವಿಜಯಕುಮಾರ್, ಲಗ್ಗೆರೆ ಉಪವಲಯ ಸಹಾಯಕ ಅಭಿಯಂತರ ಉಮೇಶ್ ಮೊದಲಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುಂಡಿ ಬಿದ್ದ ಸ್ಥಳದಲ್ಲಿನ ಕೆಲ ಅವಶೇಷಗಳನ್ನ ಲ್ಯಾಬ್ಗೆ ಕಳುಹಿಸಿ, ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತಿದೆ. ರಸ್ತೆ ಗುಂಡಿ ನಿರ್ಮಾಣವಾಗಲು ನಿಖರ ಕಾರಣವೇನೆಂದು ಪತ್ತೆ ಮಾಡಲಾಗುತ್ತಿದೆ.
ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ನಾಯಂಡಳ್ಳಿ-ಗೊರಗುಂಟೆಪಾಳ್ಯ ರಸ್ತೆ ಮೇಲ್ಸೇತುವೆಯ ಹಾದಿಯಲ್ಲಿ ಬರುವ ಸುಮನಹಳ್ಳಿ ಬಳಿಯ ಬ್ರಿಡ್ಜ್ನಲ್ಲಿ ರಸ್ತೆ ಗುಂಡಿ ನಿರ್ಮಾಣವಾಗಿದೆ. ಹೆಚ್ಚೂ ಕಡಿಮೆ 6 ಅಗಡಿ ಅಗಲದಷ್ಟು ರಸ್ತೆ ಹಾಳಾಗಿ, ಡಾಂಬರು ಮತ್ತು ಕಾಂಕ್ರೀಟ್ ಕಿತ್ತು ಹೋಗಿ ಸೇತುವೆಯ ಕಂಬಿಗಳು ಹೊರಗೆ ಕಾಣುತ್ತಿವೆ.