Bengaluru-Mysuru Expressway: ಸ್ಪೀಡ್ ರೂಲ್ಸ್ ಬ್ರೇಕ್ ಮಾಡಲು ಸವಾರರಿಂದ 'ಆಪ್' ಬಳಕೆ
ಬೆಂಗಳೂರು, ಆಗಸ್ಟ್ 15: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಸಾರ್ವಜನಿಕರಿಗೆ ಮುಕ್ತವಾದ ನಂತರ ಅತ್ಯಧಿಕ ವೇಗದಲ್ಲಿ ವಾಹನಗಳು ಸಂಚರಿಸುವ ಪರಿಣಾಮ ಹಲವಾರು ಅಪಘಾತಗಳು ವರದಿ ಆದವು. ನಂತರ ಸಂಚಾರಿ ಪೊಲೀಸರು ವಾಹನಗಳಿಗೆ ವೇಗದ ಮಿತಿ ನಿಗದಿ ಮಾಡಿದರು. ಇದನ್ನು ಉಲ್ಲಂಘಿಸುವವರ ವಿರುದ್ಧ ದಂಡ, ಎಫ್ಐಆರ್ ಕ್ರಮಕ್ಕೆ ಮುಂದಾದರು. ಇದೀಗ ಇದೆಲ್ಲ ತಪ್ಪಿಸಲು ವಾಹನ ಸವಾರರು ಪೊಲೀಸರಿಗಿಂತ ಒಂದು ಹೆಜ್ಜೆ ಮುಂದೆ ಆಲೋಚಿಸಿದ್ದಾರೆ.
ಹೌದು, ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ 2023ರಲ್ಲಿ ಸಾರ್ವಜನಿಕರಗೆ ಮುಕ್ತಗೊಳಿಸಿದ ಆರಂಭದಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 130ಇತ್ತು. ಅಪಘಾತ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ಪ್ರತಿ ಗಂಟೆಗೆ 100 ಕಿಲೋ ಮೀಟರ್ಗೆ ಸಿಮೀತಗೊಳಿಸಿ ನಿಯಮ ಜಾರಿಗೆ ತರಲಾಯಿತು.

ಯಾರೂ ಈ ನಿಮಯ ಉಲ್ಲಂಘಿಸುತ್ತಾರೋ ಅದನ್ನು ಪತ್ತೆ ಮಾಡಲು ಈ ಹೆದ್ದಾರಿಯಲ್ಲಿ ಅಲ್ಲಲ್ಲಿ 'ವೆಹಿಕಲ್ ಸ್ಪೀಡ್ ಡೆಟೆಕ್ಟಿಂಗ್ ಕ್ಯಾಮೆರಾ' ವನ್ನು ಸಂಚಾರಿ ಪೊಲೀಸರು ಅಳವಡಿಸಿದ್ದಾರೆ. ಇದರಿಂದ ಮಿತಿಗಿಂತಲೂ ಹೆಚ್ಚಿನ ವೇಗದಲ್ಲಿ ಬರುವ ವಾಹನಗಳನ್ನು ಗುರುತಿಸಿ ದಂಡ ವಸೂಲಿ ಮಾಡಲಾಗುತ್ತಿದೆ. ಇದನ್ನು ತಪ್ಪಿಸಿಕೊಳ್ಳಲು ವಾಹನ ಸವಾರರು ಪೊಲೀಸರ ಈ 'ಸ್ಪೀಡ್ ಡೆಟೆಕ್ಟಿಂಗ್ ಕ್ಯಾಮೆರಾ' ಎಲ್ಲೆಲ್ಲಿ ಇವೆ ಎಂದು ಮುಂಚಿತವಾಗಿಯೇ ತಿಳಿಯಲು ಆಪ್ (Application)ವೊಂದನ್ನು ಬಳಕೆ ಮಾಡುತ್ತಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ.
ಹೆದ್ದಾರಿಯಲ್ಲಿ ಯಾವ ಆಪ್ ಬಳಕೆ?
ಈ ಆಪ್ ಸಹಾಯದಿಂದ ವಾಹನ ಸವಾರರು ಪೊಲೀಸರು ಅಳವಡಿಸಿರುವ ಕ್ಯಾಮೆರಾ ಸಮೀಪ ಸಾಗುತ್ತಿದ್ದಂತೆ ವಾಹನದ ಸ್ಪೀಡ್ ಕಡಿಮೆ ಮಾಡುತ್ತಾರೆ. ಮತ್ತೆ ಕ್ಯಾಮೆರಾ ಸ್ಥಳ ದಾಟಿದ ನಂತರ ಮತ್ತೆ ಹೆಚ್ಚಿನ ಸ್ಪೀಡ್ನಲ್ಲಿ ಚಲಿಸಲು 'ಸ್ಪೀಡ್ ಕ್ಯಾಮೆರಾ ಡಿಟೆಕ್ಟಿಂಗ್ ಆಪ್' ಬಳಸುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಮತ್ತು ಮೈಸೂರು ಮಧ್ಯೆ 140 ಕಿಲೋ ಮೀಟರ್ ಹೆದ್ದಾರಿಯಲ್ಲಿ ಸಂಚಾರಿ ಪೊಲೀಸರ ಸುಮಾರು 60 ಕ್ಯಾಮೆರಾ ಅಳವಡಿಸಿದ್ದಾರೆ. ಒಂದು ವೇಳೆ ಗಂಟೆಗೆ 100 ಕಿಮೀ ಗಿಂತಲೂ ಹೆಚ್ಚು ವೇಗದಲ್ಲಿ ಸಾಗಿದರೆ ಅಂತವರನ್ನು ಗುರುತಿಸಿ 1000 ರೂ. ದಂಡ ವಸೂಲಿ ಮಾಡಲಾಗುತ್ತಿದೆ. ಗಂಟೆಗೆ 130 ವೇಗದಲ್ಲಿ ಪ್ರಯಾಣಿಸಿದರೆ ಅಂತವಾಹನಗಳ ಮೇಲೆ ಎಫ್ಐಆರ್ ದಾಖಲಿಸಲಾಗುತ್ತಿದೆ.

ಇದೆಲ್ಲ ದಂಡ, ಶಿಕ್ಷೆ ತಪ್ಪಿಸಲು ವಾಹನ ಸವಾರರು ಕ್ಯಾಮೆರಾ ಡಿಟೆಕ್ಟಿಂಗ್ ಆಪ್ ಬಳಸುತ್ತಿರುವುದು ಕಂಡು ಬಂದಿದೆ. ಈ ಹಿಂದೆ ಟೋಲ್ ಗೇಟ್ ತಪ್ಪಿಸಲು ವಾಹನ ಸವಾರರು, ಟೋಲ್ ಸಮೀಪಿಸುತ್ತಿದ್ದಂತೆ ಸರ್ವೀಸ್ ರಸ್ತೆಯಲ್ಲಿ ವಾಹನ ಓಡಿಸುವುದು, ನಂತರ ಟೋಲ್ ದಾಟಿದ ಕೂಡಲೇ ಮತ್ತೆ ಎಕ್ಸ್ಪ್ರೆಸ್ ವೇ ಮೇಲೆ ಓಡಿಸುತ್ತಿದ್ದರು. ಇದೀಗ ಅದಕ್ಕೂ ಕಡಿವಾಣ ಹಾಕಲಾಗಿದೆ. ಇದೀಗ ಪೊಲೀಸರಿಗೆ ಈ ಆಪ್ ಹೊಸ ತಲೆ ನೋವು ತರುತ್ತಿದೆ. ಅಲ್ಲದೇ ನಿಯಮ ಮೀರಿ ಹೆಚ್ಚು ವೇಗದಲ್ಲಿ ವಾಹನ ಓಡಿಸಿದಲ್ಲಿ ಅಪಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?
ಹೆದ್ದಾರಿಗಳಲ್ಲಿ ಆಪ್ ಬಳಕೆ ಬಗ್ಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ), ಸಂಚಾರ ಮತ್ತು ರಸ್ತೆ ಸುರಕ್ಷತೆ, ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸ್ಪೀಡ್ ಪತ್ತೆಯ ಕ್ಯಾಮೆರಾಗಳು ಮಾತ್ರವಲ್ಲದೇ, ನಾವು ವಿಭಾಗೀಯ ವೇಗವನ್ನು ಪತ್ತೆಹಚ್ಚುವ ವ್ಯವಸ್ಥೆ ಹೊಂದಿದ್ದೇವೆ. ಅಂದರೆ ಒಂದು ವಾಹನ ಈ ಹೆದ್ದಾರಿಯಲ್ಲಿ ಬಂದರೆ ಅದರ ಒಟ್ಟು ಸರಾಸರಿ ವೇಗವನ್ನು ಈ ವ್ಯವಸ್ಥೆಯಿಂದ ಕಂಡು ಹಿಡಿಯಬಹುದು. ಹೀಗಾಗಿ ಸವಾರರು ಬಳಸುವ ಆಪ್ ಅಷ್ಟಾಗಿ ಅವರಿಗೆ ಬಳಕೆಗೆ ಆಗುವುದಿಲ್ಲ. ಹೆದ್ದಾರಿ ಬಳಕೆದಾರರು ವೇಗದ ಮಿತಿಯನ್ನು ಡಕ್ ಮಾಡಲು ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications