ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ; ಡಾ. ರಾಜು ಕ್ಲಿನಿಕ್ ಪುನರಾರಂಭ
ಬೆಂಗಳೂರು, ಮೇ 19: ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆರೋಪದಲ್ಲಿ ಮುಚ್ಚಲಾಗಿದ್ದ ಬೆಂಗಳೂರಿನ ವೈದ್ಯ ಡಾ. ರಾಜು ಕೃಷ್ಣಮೂರ್ತಿಯವರ ಕ್ಲಿನಿಕ್ ಅನ್ನು ಬುಧವಾರ ಪುನರಾರಂಭಿಸಲಾಗಿದೆ.
ಬೆಂಗಳೂರಿನ ಮೂಡಲ ಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ನಲ್ಲಿ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದಕ್ಕೆ ಆಕ್ಷೇಪಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳು ಸೋಮವಾರ ವೈದ್ಯರಿಗೆ ನೋಟೀಸ್ ನೀಡಿದ್ದರು. ಆನಂತರ ಮಂಗಳವಾರ ಅವರ ಕ್ಲಿನಿಕ್ ಅನ್ನು ಮುಚ್ಚಲಾಗಿತ್ತು.
ಕೊರೊನಾ ಸೋಂಕಿಗೆ ಮಾಸ್ಕ್ ಬೇಕಿಲ್ಲ ಎಂದ ವೈದ್ಯನ ವಿರುದ್ಧ ವಿಚಾರಣೆ
ಈಚೆಗೆ ಡಾ. ರಾಜು ಕೃಷ್ಣಮೂರ್ತಿಯವರು ಟಿ.ವಿಗಳಲ್ಲಿ ಸಂದರ್ಶನ ನೀಡಿದ್ದು, ಮಾಸ್ಕ್ ಧರಿಸದೇ ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದರು. ಕೊರೊನಾ ಸೋಂಕಿತರಿಗೆ ಮಾಸ್ಕ್ ಬೇಕಿಲ್ಲ. ಸ್ಯಾನಿಟೈಸರ್ ಹಾಕಬೇಕಿಲ್ಲ. ಕೊರೊನಾ ಬಂದಾಗಲೇ ನನಗೆ ಧೈರ್ಯ ಎಂಬ ಮೆಡಿಸಿನ್ ಸಿಕ್ಕಿಬಿಟ್ಟಿತು ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ರೋಗಿಗಳಿಗೆ ಧೈರ್ಯ ತುಂಬಲು ತಾವು ಮಾಸ್ಕ್ ಧರಿಸದೇ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ವೈದ್ಯಕೀಯ ವಲಯದಲ್ಲಿ ಆಕ್ಷೇಪ ವ್ಯಕ್ತಗೊಂಡಿತ್ತು. ಮುಂದೆ ಓದಿ...
ವೈದ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದ ಮೆಡಿಕಲ್ ಕೌನ್ಸಿಲ್
ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಅಪಾಯ ಎದುರಾಗುತ್ತದೆ. ಹೀಗಾಗಿ ವೈದ್ಯ ಡಾ. ರಾಜು ಕೃಷ್ಣಮೂರ್ತಿ ಅವರನ್ನು ವೈದ್ಯ ವೃತ್ತಿಯಿಂದ ನಿಷೇಧಗೊಳಿಸುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಶಿಫಾರಸು ಮಾಡಿತ್ತು. ಕರ್ನಾಟಕ ಖಾಸಗಿ ಮೆಡಿಕಲ್ ಎಸ್ಟಾಬ್ಲಿಷನ್ ಮೆಂಟ್ ಆಕ್ಟ್ ಪ್ರಕಾರ ರಾಜು ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಅಲ್ಲಿಯವರೆಗೂ ವೈದ್ಯ ವೃತ್ತಿ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ ರಿಜಿಸ್ಟ್ರಾರ್ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದರು.
ಕ್ಲಿನಿಕ್ ಮುಚ್ಚಿರುವುದರ ವಿರುದ್ಧ ಸಾರ್ವಜನಿಕರಿಂದ ಪ್ರತಿಭಟನೆ
ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ. ಶ್ರೀನಿವಾಸ್ ನೇತೃತ್ವದ ತಂಡ ಕ್ಲಿನಿಕ್ಗೆ ಬೀಗ ಹಾಕಿತ್ತು. ಆದರೆ ಡಾ. ರಾಜು ಅವರ ಕ್ಲಿನಿಕ್ ಮುಚ್ಚಿರುವುದಕ್ಕೆ ಸಾರ್ವಜನಿಕರು ಹಾಗೂ ರೋಗಿಗಳು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಕ್ಲಿನಿಕ್ ಮುಚ್ಚಿಸಿದರೆ ರೋಗಿಗಳಿಗೆ ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಚಿಕಿತ್ಸೆ ಮುಂದುವರೆಸಲು ಆಗ್ರಹಿಸಿದ್ದ ಜನರು
ವೈದ್ಯರು ಕೊರೊನಾ ಬಗ್ಗೆ ಭಯ ದೂರ ಮಾಡಿ ಆತ್ಮವಿಶ್ವಾಸ ತುಂಬುತ್ತಿದ್ದರು. ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದಾರೆ. ಅವರ ಕ್ಲಿನಿಕ್ ಮುಚ್ಚಿರುವುದು ಸರಿಯಲ್ಲ. ಅವರಿಗೆ ಚಿಕಿತ್ಸೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.
Recommended Video
ಬುಧವಾರ ಮತ್ತೆ ತೆರೆದ ಕ್ಲಿನಿಕ್
ಬುಧವಾರ ಸ್ಥಳೀಯ ಮಾಜಿ ಕಾರ್ಪೊರೇಟರ್ ದಾಸೇಗೌಡ ಅವರ ಮುಂದಾಳತ್ವದಲ್ಲಿ ಕ್ಲಿನಿಕ್ ತೆರೆಯಲಾಗಿದೆ. ಇನ್ನು ಮುಂದೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಕುರಿತು ಕ್ಷೇತ್ರದ ಶಾಸಕ ಸೋಮಣ್ಣ ಅವರೊಂದಿಗೆ ಮಾತನಾಡಿದ್ದೇವೆ. ಅವರು ಡಿಎಚ್ಒ ಜೊತೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.