ಅಲಯನ್ಸ್ ವಿವಿ ಮಾಜಿ ಉಪ ಕುಲಪತಿ ಅಯ್ಯಪ್ಪ ದೊರೆ ಹತ್ಯೆ
ಬೆಂಗಳೂರು, ಅಕ್ಟೋಬರ್ 16 : ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಹತ್ಯೆ ನಡೆದಿದೆ. ಆರ್. ಟಿ. ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಆರ್. ಟಿ. ನಗರದಲ್ಲಿರುವ ನಿವಾಸದ ಬಳಿ ಮಂಗಳವಾರ ರಾತ್ರಿ ಅಯ್ಯಪ್ಪ ದೊರೆ ಹತ್ಯೆ ನಡೆದಿದೆ. ಊಟ ಮುಗಿಸಿ ವಾಕಿಂಗ್ ಹೋಗಿದ್ದ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಪ್ರತಿದಿನ ಊಟವಾದ ಬಳಿಕ ಅಯ್ಯಪ್ಪ ವಾಕಿಂಗ್ ಹೋಗುತ್ತಿದ್ದರು. ಮಂಗಳವಾರ ರಾತ್ರಿಯೂ ಸಹ ವಾಕಿಂಗ್ ಹೋಗಿದ್ದರು ಎಷ್ಟು ಹೊತ್ತಾದರೂ ವಾಪಸ್ ಬಂದಿರಲಿಲ್ಲ. ಆಗ ಮನೆಯವರು ಹುಡುಕಾಟ ಆರಂಭಿಸಿದ್ದರು. ಆಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದೆ.
ಡಾ. ಅಯ್ಯಪ್ಪ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ರೈತ ಪರವಾದ ಹೋರಾಟದಲ್ಲಿಯೂ ತೊಡಗಿಕೊಂಡಿದ್ದರು. ಯಡಿಯೂರಪ್ಪ ವಿರುದ್ಧ ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಶನ್ ಕುರಿತು ದೂರನ್ನು ಸಲ್ಲಿಸಿದ್ದರು.
2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಳಸಾ ಬಂಡೂರಿ ಹೋರಾಟಗಾರನ್ನು ಸೇರಿಸಿ 'ಜನ ಸಮಾನ್ಯ ಪಕ್ಷ" ಎಂಬ ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದರು. ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದ ಅಯ್ಯಪ್ಪ, ಅಲಯನ್ಸ್ ವಿವಿ ಮಾಜಿ ಕುಲಪತಿಯಾಗಿದ್ದರು.












Click it and Unblock the Notifications