ಡಬಲ್ ಡೆಕ್ಕರ್ ಬಸ್ ಖರೀದಿಗೆ ಬಿಎಂಟಿಸಿ ಆಡಳಿತ ಮಂಡಳಿ ಅಸ್ತು
ಬೆಂಗಳೂರಿನಲ್ಲಿ ಮತ್ತೆ ಡಬಲ್ ಡೆಕ್ಕರ್ ಬಸ್. ಬಿಎಂಟಿಸಿ ಅಧಿಕೃತ ಪ್ರಕಟಣೆ. ಬಿಎಂಟಿಸಿ ಆಡಳಿತ ಮಂಡಳಿಯಿಂದ ಐದು ಬಸ್ ಖರೀದಿಗೆ ಒಪ್ಪಿಗೆ.
ಬೆಂಗಳೂರು, ಆಗಸ್ಟ್ 1: ಇಂಗ್ಲೀಷ್ ನಲ್ಲಿ ಹಿಸ್ಟರಿ ರಿಪೀಟ್ಸ್ ಎಂಬ ಮಾತಿದೆ. ಅಂದರೆ, ಹಿಂದೆ ಜರುಗಿದ ಘಟನೆಗಳು, ಸನ್ನಿವೇಶಗಳು ಇತ್ಯಾದಿ ಕಾಲ ಕಳೆದಂತೆ ಯಾವುದೋ ಒಂದು ರೂಪದಲ್ಲಿ ಪುನರಾವರ್ತನೆಗೊಳ್ಳುತ್ತವೆ ಎಂಬುದು ಅದರ ತಾತ್ಪರ್ಯ.
ಎರಡು ದಶಕಗಳ ಹಿಂದೆ, ಬೆಂಗಳೂರಿನ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಕರ, ಮಕ್ಕಳ ಮನಸ್ಸು ಸೆಳೆಯುತ್ತಿದ್ದ ಮಹಡಿ ಬಸ್ ಗಳ (ಡಬಲ್ ಡೆಕ್ಕರ್) ಬಸ್ ಗಳ ಸಂಚಾರ ಮತ್ತೆ ಆರಂಭವಾಗಲಿದ್ದು, ಇದು ಪ್ರಯಾಣಿಕರಲ್ಲಿ ಮತ್ತಷ್ಟು ಪುಳಕ ತಂದಿದೆ. ಹೊಸ ಬಸ್ ಗಳ ಖರೀದಿಗಾಗಿ ಬಿಎಂಟಿಸಿ ಆಡಳಿತ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕಿದೆ.
80 ಮತ್ತು 90ರ ದಶಕದಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ಗಳದ್ದೇ ಕಾರುಬಾರು. ಬೆಂಗಳೂರು ನಗರ ಬೆಳೆಯುತ್ತಾ ಹೋದಂತೆ ಮಹಾನಗರದ ರಸ್ತೆಗಳಿಂದ ಡಬ್ಬಲ್ ಡೆಕ್ಕರ್ ಬಸ್ಗಳು ಕಾಣೆಯಾದವು. ಇದೀಗ ಮತ್ತೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲು ಡಬ್ಬಲ್ ಡೆಕ್ಕರ್ ಬಸ್ಗಳು ಬರುತ್ತಿವೆ.
ಪ್ರಮುಖವಾಗಿ ಯುವಕರು ಮತ್ತು ಮಕ್ಕಳಿಗೆ ಬೆಂಗಳೂರಿನ ಹಳೆಯ ಐತಿಹಾಸಿಕ ವೈಭವವನ್ನು ಪರಿಚಯ ಮಾಡಿಕೊಡುವ ಉದ್ದೇಶವು ಕೂಡ ಇದೆ. ಪ್ರಸ್ತುತ ಭಾರತದಲ್ಲಿ ಮುಂಬೈನಲ್ಲಿ ಮಾತ್ರ ಡಬ್ಬಲ್ ಡೆಕ್ಕರ್ ಬಸ್ಗಳ ಓಡಾಟವಿದೆ. ಈ ಐದು ಬಸ್ಗಳ ಮೂಲಕ ಬೆಂಗಳೂರಿನ ರಸ್ತೆಗಳಿಗೆ ಡಬ್ಬಲ್ ಬಸ್ಗಳು ಬಂದಿಳಿಯಲಿವೆ.
ಡಬಲ್ ಡೆಕ್ಕರ್ ಬಸ್ ನ ಹೊಸ ವಿನ್ಯಾಸ ಹೇಗಿರುತ್ತೆ, ಇದರ ಹಿಂದಿನ ಉದ್ದೇಶವೇನು, ಈ ಬಗ್ಗೆ ಸಾರಿಗೆ ಸಚಿವರು ಏನಂತಾರೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.
(ಚಿತ್ರಗಳು: ಸಾಂದರ್ಭಿಕ)

ಪ್ರವಾಸೋದ್ಯಮ ಉತ್ತೇಜನಕ್ಕೆ ಒತ್ತು
ಬೆಂಗಳೂರಿನ ಹಳೆಯ ಐತಿಹಾಸಿಕ ವೈಭವವನ್ನು ಮರಳಿ ತರುವುದು ಸರ್ಕಾರದ ಪ್ರಮುಖ ಉದ್ದೇಶ. ಇದಲ್ಲದೆ, ಪ್ರತಿನಿತ್ಯ ಬೆಂಗಳೂರು ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಡಬ್ಬಲ್ ಡೆಕ್ಕರ್ ಬಸ್ ಮೂಲಕ ಬೆಂಗಳೂರಿನ ಐತಿಹಾಸಿಕ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡುವುದರ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನು ಕೂಡಾ ಹೊಂದಲಾಗಿದೆ.

ಬಸ್ ತಯಾರಿಕಾ ಕಂಪನಿಗಾಗಿ ಹುಡುಕಾಟ
ಸದ್ಯದ ಮಟ್ಟಿಗೆ, ಐದು ಡಬ್ಬಲ್ ಡೆಕ್ಕರ್ ಬಸ್ಗಳನ್ನು ಖರೀದಿಸಲು ಬಿಎಂಟಿಸಿ ಮುಂದಾಗಿದೆ. ಜೂನ್ 30ರಂದು ನಡೆದಿರುವ ಬಿಎಂಟಿಸಿ ಆಡಳಿತ ಮಂಡಳಿಯ ಮಹಾಸಭೆಯಲ್ಲಿ ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ. ಈಗ, ಈ ಬಸ್ ಗಳ ತಯಾರಿಕಾ ಕಂಪನಿಯ ಹುಡುಕಾಟದಲ್ಲಿ ಬಿಎಂಟಿಸಿ ತೊಡಗಿದೆ ಎಂದು ಹೇಳಲಾಗಿದೆ.

ಮೆಟ್ರೋ ಮಾರ್ಗಗಳಲ್ಲಿ ಸಂಚರಿಸಲ್ಲ
ಹೇಳಿ ಕೇಳಿ ಡಬಲ್ ಡೆಕ್ಕರ್ ಬಸ್ ಗಳು ಎತ್ತರವಾಗಿರುವುದರಿಂದ ಮೆಟ್ರೋ ರೈಲು ಮಾರ್ಗವಿರುವ, ಅಗಲ ಕಡಿಮೆಯಾಗಿರುವ ಹಾಗೂ ಭಾರೀ ಟ್ರಾಫಿಕ್ ಇಲ್ಲದಿರುವ ಹಾಗೂ ಮರ ಗಿಡಿ ಮುಂತಾದ ಯಾವುದೇ ಅಡಿ ತಡೆಗಳು ಇಲ್ಲದಿರುವ ಮಾರ್ಗಗಳಲ್ಲಿ ಮಾತ್ರ ಈ ಬಸ್ ಗಳು ಸಂಚಾರ ಮಾಡಲಿವೆ.

ಪ್ರವಾಸಿಗರಿಗೆ, ಮಕ್ಕಳಿಗೆ ಆದ್ಯತೆ: ಸಚಿವರು
ಈ ಬಗ್ಗೆ ವಿವರಣೆ ನೀಡಿರುವ ರಾಮಲಿಂಗಾ ರೆಡ್ಡಿ, ''ಪ್ರವಾಸೋದ್ಯಮ ಅಭಿವೃದ್ಧಿಗಾಗಿಯೇ ಈ ಬಸ್ ಗಳನ್ನು ಖರೀದಿಸಲಾಗುತ್ತಿದೆ. ಹಾಗಾಗಿ, ಪ್ರವಾಸಿಗರಿಗೆ ಇದರಲ್ಲಿ ಪ್ರಯಾಣಿಸಲು ಮೊದಲ ಆದ್ಯತೆ ನೀಡಲಾಗುವುದು. ಇನ್ನುಳಿದಂತೆ, ಮಕ್ಕಳಿಗೆ ಇದು ಆಕರ್ಷಣೀಯವಾಗಿ ಕಾಣುವುದರಿಂದ ಅವರಿಗೂ ಈ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಬಿಎಂಟಿಸಿಗೆ ಸೂಚಿಸಿದ್ದೇನೆ'' ಎಂದು ತಿಳಿಸಿದ್ದಾರೆ.












Click it and Unblock the Notifications