ನಂಜಾವಧೂತರಿಂದ ಬೋನಲ್ಲಿನ ಹುಲಿ- ಪುಣ್ಯಕೋಟಿ ಎರಡೂ ಹೋಲಿಕೆ ಡಿಕೆಶಿಗೆ
ಬೆಂಗಳೂರು, ಸೆಪ್ಟೆಂಬರ್ 11: "ನನ್ನ ಮನೆ ಹಿರಿಯರ ಕಾರ್ಯ ಇದೆ. ಪಿತೃ ಕಾರ್ಯ ಮುಗಿಸಿ, ವಾಪಸ್ ವಿಚಾರಣೆಗೆ ಬರುತ್ತೀನಿ ಎಂದು ಡಿ. ಕೆ. ಶಿವಕುಮಾರ್ ಅವರು ಹೇಳಿದರೂ ಇ. ಡಿ. ಅಧಿಕಾರಿಗಳು ಅವಕಾಶ ನೀಡಲಿಲ್ಲ. ನಮಗೆ ಪುಣ್ಯಕೋಟಿ ಕಥೆ ಗೊತ್ತಿದೆ. ತನ್ನ ಕರುವಿಗೆ ಹಾಲುಣಿಸಿ, ವಾಪಸ್ ಬಂದು ನಿನಗೆ ಆಹಾರ ಆಗ್ತೀನಿ ಅಂದಾಗ ಘೋರ ವ್ಯಾಘ್ರ ಕೂಡ ಅದನ್ನು ನಂಬುತ್ತದೆ..."
ಡಿ. ಕೆ. ಶಿವಕುಮಾರ್ ಬಂಧನ ವಿರೋಧಿಸಿ, ಒಕ್ಕಲಿಗ ಸಮಾಜದ ಪರವಾಗಿ ಸಂಘಟನೆಗಳು ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ನಂಜಾವಧೂತ ಸ್ವಾಮೀಜಿ ನೀಡಿದ ಉದಾಹರಣೆ ಮೇಲ್ಕಂಡದ್ದು. ಅದರ ನಂತರ, ಹುಲಿ ಹೊರಗಿದ್ದರೂ ಆಥವಾ ಬೋನಿನಲ್ಲಿದ್ದರೂ ಹುಲಿಯೇ ಅಂತಲೂ ಹೇಳಿದ್ದಾರೆ.
ಇಂಥ ಹಲವು ಹೇಳಿಕೆಗಳ ಮೂಲಕ ಹೆಚ್ಚು ಗಮನ ಸೆಳೆದ ಸ್ವಾಮೀಜಿ, ನನಗೆ ಈ ಪ್ರತಿಭಟನೆಗೆ ಆಹ್ವಾನ ಇರಲಿಲ್ಲ. ಆದರೆ ಅಧ್ಯಾತ್ಮ ವಲಯ ನಮ್ಮನ್ನು ಕೈ ಬಿಟ್ಟಿದೆ ಎಂದು ಒಕ್ಕಲಿಗ ಸಮಾಜಕ್ಕೆ ಅನಿಸಬಾರದು ಎಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು ನಂಜಾವಧೂತ ಸ್ವಾಮೀಜಿ.

ಮುಂದುವರಿದು, ಸದ್ದು ಮಾಡುವ ಸಮಯದಲ್ಲಿ ಸುಮ್ಮನಿದ್ದರೆ ಆಗಲ್ಲ. ಅಕಾಲದ ಮೌನ ಒಳ್ಳೆಯದಲ್ಲ. ಇತ್ತೀಚೆಗೆ ಒಕ್ಕಲಿಗ ಸಮಾಜ ಹಾಗೆ ಆಗಿದೆ. ಎಲ್ಲಿ ಸದ್ದು ಮಾಡಬೇಕೋ ಮಾಡುತ್ತಿಲ್ಲ. ಆ ಬಗ್ಗೆ ವಿವೇಚನೆ ಬಹಳ ಮುಖ್ಯ ಎಂದ ಅವರ ಮಾತಿನ ಅರ್ಥ ಕುಮಾರಸ್ವಾಮಿ ಅವರ ಸರಕಾರ ಪತನ, ಸಿದ್ಧಾರ್ಥ ಆತ್ಮಹತ್ಯೆ ಬಗ್ಗೆ ಮಾತ್ರ ಇರಲಿಲ್ಲ.
ಒಕ್ಕಲಿಗ ಸಮಾಜ ಆಯಾ ಕಾಲಕ್ಕೆ ಎಲ್ಲ ರಾಜಕೀಯ ಪಕ್ಷಗಳ ಜತೆಗೂ ನಿಂತಿದೆ. ಆದರೆ ಬಿಜೆಪಿಯಲ್ಲಿ ಅಶ್ವಥ್ ನಾರಾಯಣ್, ಸಿ. ಟಿ. ರವಿ ಇವರಿಗೆ ಚಿಕ್ಕ ವಯಸ್ಸು. ಅವರಿನ್ನೂ ಬೆಳೆಯಬೇಕು. ಆದರೆ ಆರ್. ಅಶೋಕ್ ಅವರಿಗೆ ಹೆಚ್ಚಿನ ಸ್ಥಾನ ಮಾನ ಸಿಗಬೇಕಿತ್ತು. ಆದರೆ ಸಿಗಲಿಲ್ಲ ಎಂದರು ಸ್ವಾಮೀಜಿ.
ಚಿನ್ನಪ್ಪ ರೆಡ್ಡಿ ವರದಿ ವಿರುದ್ಧ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ನಡೆಸಿದ ಹೋರಾಟ ನಮಗೆ ಆದರ್ಶವಾಗಿ ಉಳಿದಿದೆ ಎಂದ ಸ್ವಾಮೀಜಿ, ನರೇಂದ್ರ ಮೋದಿ ಅವರು ಇನ್ನೂ ಬೆಳಗಲಿ. ಪ್ರಖರವಾಗಲಿ. ಆದರೆ ಆ ಬೆಳಕಿನ ಅಡಿಯಲ್ಲೇ ಇರುವ ಕತ್ತಲ ಕಡೆಗೂ ಗಮನ ಹರಿಸಲಿ ಎಂದರು.












Click it and Unblock the Notifications