ಎಮ್ಮೆಗೆ ಜ್ವರ ಬಂದ್ರೆ ಎತ್ತಿಗೆ ಬರೆ: ಕೊರೊನಾ ಕಾಲರ್ ಟ್ಯೂನ್ ಬಗ್ಗೆ ಡಿಕೆಶಿ ವ್ಯಂಗ್ಯ!
ಬೆಂಗಳೂರು, ಮಾರ್ಚ್ 10: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಭಾರತಕ್ಕೂ ವಕ್ಕರಿಸಿರುವುದರಿಂದ ಮೊಬೈಲ್ ಕಾಲರ್ ಟ್ಯೂನ್ ಗಳ ಮುಖಾಂತರ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
Recommended Video
ಬಹುತೇಕ ಎಲ್ಲಾ ನೆಟ್ ವರ್ಕ್ ಗಳು ಇದನ್ನು ಜಾರಿಗೆ ತಂದಿದ್ದು, ಯಾರು ಯಾರಿಗೇ ಕರೆ ಮಾಡಿದರೂ... ಮೊದಲು ಕೆಮ್ಮು ಬಂದು.. ಬಳಿಕ ಡೆಡ್ಲಿ ಕೊರೊನಾ ವೈರಸ್ ಕುರಿತು ಮಾಹಿತಿ ನೀಡಲಾಗುತ್ತಿದೆ.
ಕಾಲರ್ ಟ್ಯೂನ್ ಗಳ ಮುಖಾಂತರ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯೇ. ಆದ್ರೆ, ಪ್ರತಿ ಬಾರಿ ಫೋನ್ ಮಾಡಿದಾಗಲೂ ಕೆಮ್ಮು ಮತ್ತು ಕೊರೊನಾ ಕೇಳಿ ಕೇಳಿ ಕೆಲವರಿಗೆ ಕಿರಿಕಿರಿ ಉಂಟಾಗಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಕೊರೊನಾ ಕಾಲರ್ ಟ್ಯೂನ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
|
ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್
''ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ'' ಹಾಕಿದಂತಾಗಿದೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ದೂರವಾಣಿ ಕರೆಗಳ ಆರಂಭದಲ್ಲಿ ನೀಡುತ್ತಿರುವ ಕೊರೊನಾ ಕುರಿತ ಮುನ್ನೆಚ್ಚರಿಕೆ ಸಂದೇಶ. ದೇಶದ ಜನ ಇದರಿಂದ ತಲ್ಲಣಿಸಿ ಹೋಗಿದ್ದಾರೆ. ಹಣ್ಣು, ತರಕಾರಿಯಿಂದ ಹಿಡಿದು ಷೇರುಗಳವರೆಗೆ ಸರ್ವ ಮಾರುಕಟ್ಟೆಯೂ ಪಾತಾಳಕ್ಕೆ ಕುಸಿದಿದೆ'' ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
|
ಸಮಸ್ಯೆ ಇರುವ ಕಡೆ ಕ್ರಮ ಕೈಗೊಳ್ಳಿ
''ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಸಮಸ್ಯೆ ಇರುವೆಡೆ ಕ್ರಮ ಕೈಗೊಳ್ಳಬೇಕೇ ಹೊರತು ಈ ರೀತಿ ಸಾಮೂಹಿಕವಾಗಿ ಜನರನ್ನು ಹೆದರಿಸುವುದು ಸಲ್ಲದು'' ಎಂದು ಡಿ.ಕೆ.ಶಿವಕುಮಾರ್ ಟ್ವೀಟಿಸಿದ್ದಾರೆ.

ಪರ-ವಿರೋಧ ಚರ್ಚೆ
ಕೊರೊನಾ ಕಾಲರ್ ಟ್ಯೂನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕಾಲರ್ ಟ್ಯೂನ್ ಬೇಡ ಅಂತ ಹಲವರು ಪಟ್ಟು ಹಿಡಿದಿದ್ದಾರೆ. ಇನ್ನೂ ಕೆಲವರು ಕಾಲರ್ ಟ್ಯೂನ್ ಗಳಲ್ಲಿ ಇಂಗ್ಲೀಷ್ ನಲ್ಲಿ ಮಾತ್ರ ಕೊರೊನಾ ಕುರಿತಾದ ಮಾಹಿತಿ ಬರುತ್ತಿರುವುದರಿಂದ, ಪ್ರಾದೇಶಿಕ ಭಾಷೆಗಳಲ್ಲೂ ಕೊರೊನಾ ಕುರಿತಾದ ಮಾಹಿತಿ ಬರಲಿ ಎಂದು ಆಗ್ರಹಿಸುತ್ತಿದ್ದಾರೆ.

ಭಾರತದಲ್ಲಿ ಕೊರೊನಾ ಪ್ರಕರಣ
ಭಾರತದಲ್ಲಿ ಇಲ್ಲಿಯವರೆಗೂ 47 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಕೊರೊನಾ ಸೋಂಕಿನಿಂದ ಭಾರತದಲ್ಲಿ ಇಲ್ಲಿಯವರೆಗೂ ಯಾರೂ ಮೃತಪಟ್ಟಿಲ್ಲ. ಕರ್ನಾಟಕದಲ್ಲಿ ಒಬ್ಬರಿಗೆ ಮಾತ್ರ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.












Click it and Unblock the Notifications