ಮುಂಗಾರು ಆರಂಭ: ಬೆಂಗಳೂರಿನಲ್ಲಿ ಇಳಿದ ತರಕಾರಿ ಬೆಲೆ
ಬೆಂಗಳೂರು, ಜೂನ್ 4: ಕಳೆದ ಎರಡು ತಿಂಗಳಿನಿಂದ ಮುಂಗಾರು ಪೂರ್ವ ಮಳೆ ಸುರಿಯುತ್ತಲೇ ಇತ್ತು. ಕೆಲವು ಕಡೆ ಆಲಿಕಲ್ಲು ಮಳೆ ಬಿದ್ದಿತ್ತು. ಇದರಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗಿತ್ತು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿತ್ತು.
ಇದೀಗ ಮುಂಗಾರು ಆರಂಭವಾಗಿದ್ದು ಕೆಲ ದಿನಗಳಿಂದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದ ಬಹುತೇಕ ತರಕಾರಿಗಳು ಅಗ್ಗವಾಗಿ ಮಾರಾಟವಾಗುತ್ತಿವೆ. ಕೆ.ಆರ್ ಮಾರುಕಟ್ಟೆಯಲ್ಲಿ ಬದನೆ ಕಾಯಿ, ಸೀಮೆ ಬದನೆ, ಬೀಟ್ರೋಟ್, ನವಿಲುಕೋಸು, ಹೀರೆಕಾಯಿ, ಆಲೂಗಡ್ಡೆ ದರಗಳು ಪ್ರತಿ ಕೆಜಿಗೆ 20ರಿಂದ 30ರೂ ಆಸುಪಾಸಿನಲ್ಲಿದ್ದವು. ಈಗ ಅವುಗಳ ದರ 10ರಿಂದ 20ರೂ.ಗೆ ಇಳಿಕೆಯಾಗಿದೆ.
ದಿಢೀರ್ ಮಳೆಗೆ ಘಾಸಿಕೊಂಡ ತರಕಾರಿಗಳು: ಬೆಲೆ ದುಪ್ಪಟ್ಟು
ಡಬ್ಬಲ್ ಬೀನ್ಸ್, ಬಟಾಣಿ ಕೆಲ ತರಕಾರಿಗಳು 100ರೂ. ಗಡಿ ದಾಟಿದೆ. ಇಪ್ಪತ್ತು ದಿನಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 7 ರಿಂದ 8 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೋ ಕೆಜಿಗೆ 10ಕ್ಕೆ ಮಾರಾಟವಾಗುತ್ತಿದೆ.
ಆಂಧ್ರಪ್ರದೇಶ, ತಮಿಳುನಾಡು, ಚಿಕ್ಕಬಳ್ಳಾಪುರಗಳಿಂದ ಬೆಂಗಳೂರಿಗೆ ತರಕಾರಿ ಸರಬರಾಜಾಗುತ್ತಿದೆ. ಕೆಲವು ದಿನಗಳ ಹಿಂದೆ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ಕಂಗೆಡಿಸಿದ್ದ ಈರುಳ್ಳಿ ಇದೀಗ 6 ಕೆಜಿಗೆ 100 ರೂನಂತೆ ಮಾರಾಟವಾಗುತ್ತಿದೆ. ಆಂಧ್ರಪ್ರದೇಶ ಮಹಾರಾಷ್ಟ್ರದಲ್ಲಿ ಕೆಜಿ ಈರುಳ್ಳಿಗೆ 10 ರಿಂದ 15 ರೂಗಳಿಗೆ ಮಾರಾಟವಾಗುತ್ತಿದೆ.
ಹಾಪ್ಕಾಮ್ಸ್ ತರಕಾರಿಗಳ ದರ: ಬೀನ್ಸ್ 50 ರೂ, ಬದನೆಕಾಯಿ 21ರೂ, ಕ್ಯಾರೇಟ್ 28 ರೂ., ಡಬ್ಬಲ್ ಬೀನ್ಸ್ 135 ರೂ., ಆಲೂಗಡ್ಡೆ 31ರೂ., ಟೊಮೆಟೋ 14 ರೂ. ಗೆ ಮಾರಾಟವಾಗುತ್ತಿದೆ.