ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಐದೂ ಕ್ಷೇತ್ರಗಳಲ್ಲೂ ಗೆಲುವು: ದಿನೇಶ್
ಬೆಂಗಳೂರು, ಅಕ್ಟೋಬರ್ 15: ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಐದೂ ಕ್ಷೇತ್ರಗಳಲ್ಲೂ ಗೆಲುವು ಸಿಗುವುದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಮಗೆ ಹೆಚ್ಚು ಮತಗಳು ಬಂದಿದ್ದರೂ ಕೂಡ ಅಲ್ಲಿ ನಾವು ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದೇವೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ಚುನಾವಣೆಯನ್ನು ಎದುರಿಸುತ್ತೇವೆ ಜಯ ನಮ್ಮದೇ ಎಂದರು.
ನಾವು ಈ ಹಿಂದೆ ಜೆಡಿಎಸ್ ವಿರುದ್ಧವೂ ಹೋರಾಡಿದ್ದೇವೆ, ಹೀಗಾಗಿ ಕೆಲವು ಕಡೆ ಭಿನ್ನಾಭಿಪ್ರಾಯ ಇರುತ್ತದೆ, ಅದಕ್ಕೆ ನಾವು ಏನೂ ಮಾಡಲಾಗುವುದಿಲ್ಲ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮಾತು ಬರುವುದಿಲ್ಲ.
ಆಯಾ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಕೆಲವು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ, ಅವರವರ ನೋವನ್ನು ಅವರು ವ್ಯಕ್ತಪಡಿಸುತ್ತಾರೆ ಆದರೆ ಸಂದರ್ಭವನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಅನವಶ್ಯಕವಾಗಿ ಬಿಜೆಪಿಯು ಚುನಾವಣೆ ತಂದೊಡ್ಡಿದೆ
ಅನವಶ್ಯಕವಾಗಿ ಬಿಜೆಪಿಯು ಚುನಾವಣೆಯನ್ನು ತಂದೊಡ್ಡಿದೆ, ನಾವು ನಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದೇವೆಮ ಈಗ ಐದು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಜಮಖಂಡಿ, ಬಳ್ಳಾರಿ ಅಭ್ಯರ್ಥಿ, ಎಐಸಿಸಿ ತೀರ್ಮಾನ ಅಂತಿಮ
ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಗೆ ಎಐಸಿಸಿ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಕಾಂಗ್ರೆಸ್ ರಾಷ್ಟ್ರೀಯಪಕ್ಷವಾಗಿರುವುದರಿಂದ ಎಲ್ಲವೂ ದೆಹಲಿಯಲ್ಲೇ ತೀರ್ಮಾನವಾಗಬೇಕು.

ಕೇಂದ್ರದಲ್ಲಿ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ
ಕೇಂದ್ರದಲ್ಲಿ ನಾವು ಬಿಜೆಪಿಯನ್ನು ಕಿತ್ತೊಗೆಯಬೇಕಿದೆ, ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದು, ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿಯನ್ನು ತೆಗೆಯಲು ನಾವು ಕಾರ್ಯತಂತ್ರ ರೂಪಿಸಿದ್ದೇವೆ ಎಂದರು.

ಬಳ್ಳಾರಿಗೆ ಡಿಕೆಶಿ, ಶಿವಮೊಗ್ಗಕ್ಕೆ ದೇಶಪಾಂಡೆ ಉಸ್ತುವಾರಿ
ಲೋಕಸಭಾ ಉಪ ಚುನಾವಣೆಗೆ ಜಮಖಂಡಿಗೆ ಪರಮೇಶ್ವರ್, ಬಳ್ಳಾರಿಗೆ ಡಿಕೆ ಶಿವಕುಮಾರ್, ರಾಮನಗರಕ್ಕೆ ಡಿಕೆ ಸುರೇಶ್, ಶಿವಮೊಗ್ಗಕ್ಕೆ ಆರ್ವಿ ದೇಶಪಾಂಡೆಯನ್ನು ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications