ಏರೋ ಇಂಡಿಯಾ : ಸುಟ್ಟು ಬಿಸಾಕಿದ ಸಿಗರೇಟು ಅನಾಹುತ ಮಾಡಿತೆ?
ಬೆಂಗಳೂರು, ಫೆಬ್ರವರಿ 23 : ತನ್ನ ಸುತ್ತಲಿನದೆಲ್ಲವನ್ನು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮ ಮಾಡಲು ಒಂದು ಬೆಂಕಿಯ ಕಿಡಿ ಸಾಕು. ಬೆಂಗಳೂರಿನಲ್ಲಿ ನಡೆದಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ಶನಿವಾರ ಸಂಭವಿಸಿರುವ ಭಾರೀ ಅಗ್ನಿ ಅನಾಹುತಕ್ಕೆ ಆ ಒಂದು ಕಿಡಿಯೇ ಸಾಕಾಯಿತೆ?
ಅಧಿಕಾರಿಗಳ ಪ್ರಕಾರ, ಒಣಗಿದ ಹುಲ್ಲಿನ ಮೇಲೆ ಸೇದಿ ಬಿಸಾಕಿದ ಸಿಗರೇಟು ಈ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಮೊದಲಿಗೆ ಒಣಹುಲ್ಲಿಗೆ ಹೊತ್ತಿಕೊಂಡ ಬೆಂಕಿ, 5ನೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರುಗಳಿಗೆ, ದ್ವಿಚಕ್ರ ವಾಹನಗಳಿಗೆ ವ್ಯಾಪಿಸಿ 200ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ಕೆಲ ಟಿವಿ ಚಾನಲ್ಲುಗಳು ವಾಹನಗಳ ಸಂಖ್ಯೆಯನ್ನು 300ಕ್ಕೂ ಹೆಚ್ಚು ಎಂದು ಹೇಳುತ್ತಿವೆ.
ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ

ಬೆಂಗಳೂರಿನಿಂದಲೇ ದೆಹಲಿಗೆ ಸ್ಥಳಾಂತರವಾಗಬೇಕಾಗಿದ್ದ ಏರೋ ಇಂಡಿಯಾ ಪ್ರದರ್ಶನದ 12ನೇ ಆವೃತ್ತಿ ಆರಂಭದ ದಿನದಿಂದಲೂ ದುರಂತಗಳಿಂದಲೇ ವಿವಾದಕ್ಕೀಡಾಗಿದೆ. ಶೋ ಆರಂಭದ ಹಿಂದಿನ ದಿನ ರಿಹರ್ಸಲ್ ನಡೆಸುತ್ತಿರುವಾಗ ಎರಡು ಯುದ್ಧ ವಿಮಾನಗಳು ಒಂದಕ್ಕೊಂದು ತಗುಲಿ, ನೆಲಕ್ಕುರುಳಿದ್ದರಿಂದ ಸಾಹಿಲ್ ಗಾಂಧಿ ಎಂಬ ಪೈಲಟ್ ಸಾವಿಗೀಡಾದರು. ಈಗ, ಶೋ ಇನ್ನೇನು ಒಂದು ದಿನ ಮಾತ್ರ ಬಾಕಿಯಿದೆ ಎನ್ನುವಾಗ ನೂರಾರು ವಾಹನಗಳು ಬೆಂಕಿಗಾಹುತಿಯಾಗಿವೆ.
#AeroShowOpenParkingAreaFire
— M.N.Reddi, IPS (@DGP_FIRE) February 23, 2019
In all, 300 cars burnt in the fire incident. Fire fully extinguished now. 10 Fire Force and 5 other fire engines fought the fire under the leadership of Chief Fire Officer, West.
ಅಗ್ನಿ ಮತ್ತು ತುರ್ತು ಸೇವೆ, ಹೋಂಗಾರ್ಡ್ಸ್, ಸಿವಿಲ್ ಡಿಫೆನ್ಸ್ ಮತ್ತು ಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ನ ಮುಖ್ಯಸ್ಥರಾಗಿರುವ ಡಿಜಿಪಿ ಎಂಎನ್ ರೆಡ್ಡಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸುಟ್ಟು ಭಸ್ಮವಾದ ವಾಹನಗಳ ಸಂಖ್ಯೆ 300 ದಾಟಿದೆ. ಅಗ್ನಿಯನ್ನು ಸಂಪೂರ್ಣ ಶಮನ ಮಾಡಲಾಗಿದೆ ಎಂದಿದ್ದಾರೆ.
ಹೆಬ್ಬಾಳದ ಕಡೆಯಿಂದ ಬರುವವರು ಫ್ಲೈಓವರ್ ಮೇಲೆ ಹತ್ತುತ್ತಿದ್ದಂತೆ ದಟ್ಟ ಹೊಗೆ ಕಾಣಲು ಆರಂಭಿಸಿದೆ. ಮತ್ತೇನು ಅನಾಹುತ ಸಂಭವಿಸಿತೋ ಎಂದು ಹಲವರು ಕಳವಳಕ್ಕೀಡಾಗಿದ್ದರು. ಇದೇ ಸ್ಥಳದಲ್ಲಿ ನೂರಾರು ವಿಮಾನಗಳನ್ನು ಕೂಡ ನಿಲ್ಲಿಸಲಾಗಿದೆ. ಆದರೆ, ಅನಾಹುತ ಸಂಭವಿಸಿರುವುದು ಸಾರ್ವಜನಿಕರ ವಾಹನ ನಿಲುಗಡೆ ಸ್ಥಳದಲ್ಲಿ. ಒಂದು ಸಿಗರೇಟು ಎಂಥ ಅನಾಹುತ ಮಾಡಿದೆ?

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಆಯುಕ್ತ ಎಂಎನ್ ರೆಡ್ಡಿ ಅವರು ತಿಳಿಸಿದ್ದಾರೆ. 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿವೆ. ಆದರೆ, ದುರಂತ ಆಗಲೆ ಸಂಭವಿಸಿದೆ. ಈ ದುರಂತ ಸಂಭವಿಸುತ್ತಿದ್ದಂತೆ ವಿಮಾನ ಹಾರಾಟ ಮತ್ತು ಪ್ರದರ್ಶನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದ ನಂತರವಷ್ಟೇ ವೈಮಾನಿಕ ಪ್ರದರ್ಶನ ಮತ್ತೆ ಮುಂದುವರಿಯಲಿದೆ.












Click it and Unblock the Notifications