ಬೆಂಗಳೂರಲ್ಲಿ ಕೋವಿಡ್ ಪರಿಸ್ಥಿತಿ; ಲಾಕ್ ಡೌನ್ ಜಾರಿಗೆ ವಿರೋಧ
ಬೆಂಗಳೂರು, ಏಪ್ರಿಲ್ 19; ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡುವುದು ಬೇಡವೇ ಬೇಡ. ಬೆಂಗಳೂರು ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಎಂದು ಶಾಸಕರು, ಸಂಸದರು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದರು.
ಸೋಮವಾರ ವಿಧಾನಸೌಧದಲ್ಲಿ ಬೆಂಗಳೂರು ನಗರದ ಸಚಿವರು, ಶಾಸಕರು, ಸಂಸದರ ಸಭೆ ನಡೆಯಿತು. ನಗರದ ಕೋವಿಡ್ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲಾಯಿತು. ಆಸ್ಪತ್ರೆಯಲ್ಲಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.
ಬೆಂಗಳೂರು ನಗರದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣ ಮಾಡಲು ಲಾಕ್ ಡೌನ್ ಘೋಷಣೆ ಮಾಡುವುದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್ನ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತೆ ಲಾಕ್ ಡೌನ್ ಬೇಡ ಎಂದು ಒತ್ತಾಯಿಸಿದರು.
ಲಾಕ್ ಡೌನ್ ಬದಲಿಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೆ ತನ್ನಿ. ಪೊಲೀಸರಿಗೆ ಜನ ಸಂದಣಿ ಸೇರದಂತೆ ತಡೆಯುವ ಅಧಿಕಾರವನ್ನು ಕೊಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಕೊರೊನಾ ಕರ್ಫ್ಯೂ ಜಾರಿಗೂ ವಿರೋಧ ವ್ಯಕ್ತಪಡಿಸಿದರು. "ರಾತ್ರಿ ಕರ್ಫ್ಯೂವಿನಿಂದಾಗಿ ಕೋವಿಡ್ ಹೋಗಲ್ಲ. ಕೋವಿಡ್ ಹೆಸರಿನಲ್ಲಿ ರಾಜಕೀಯ ಮಾಡುವುದು ಬೇಡ" ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
"ಕಳೆದ ಬಾರಿ ಫುಡ್ ಕಿಟ್ಗಳನ್ನು ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಕೊಟ್ಟಿದ್ದೀರಿ. ಹೀಗೆ ಮಾಡುವುದು ಸರಿಯೇ?. ಈಗ ಪುನಃ ಲಾಕ್ ಡೌನ್ ಬೇಡ. ಸೆಕ್ಷನ್ 144 ಜಾರಿಗೊಳಿಸಿ" ಎಂದು ಸರ್ಕಾರವನ್ನು ಒತ್ತಾಯಿಸಿದರು.

ಡಿ. ಕೆ. ಸುರೇಶ್ ಅಸಮಾಧಾನ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. "ಮಾಧ್ಯಮಗಳಲ್ಲಿ ದಿನಾ ನಿಮ್ಮ ಹೇಳಿಕೆ ಕೇಳುವುದು ಆಗಿದೆ. ಪ್ರತಿನಿತ್ಯ ನಿಮ್ಮನ್ನು ನೋಡೋದು, ಶವ ಸಂಸ್ಕಾರ ನೋಡೋದು ಆಗಿದೆ. ಹೇಳಿಕೆ ನೀಡುವುದು ಬಿಟ್ಟು ಸರಿಯಾಗಿ ಕೆಲಸ ಮಾಡಿ. ನಿಮ್ಮ ಸಹೋದ್ಯೋಗಿ ಆಪ್ತ ಸಹಾಯಕ ಇಂದು ಮೃತಪಟ್ಟಿದ್ದಾರೆ" ಎಂದರು.

ಸರ್ಕಾರವೇ ಗೊಂದಲ್ಲಿದೆ
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಸಿ. ಎಂ. ಇಬ್ರಾಹಿಂ, "ಸರ್ಕಾರ ಗೊಂದಲದಲ್ಲಿದೆ. ಆಕ್ಸಿಜನ್, ಇಂಜೆಕ್ಷನ್, ವೆಂಟಿಲೇಟರ್ ಕೊರತೆ ಇದೆ. ಇದರ ಬಗ್ಗೆ ಸಭೆಯಲ್ಲಿ ಸ್ಪಷ್ಟ ಉತ್ತರ ಕೊಡಲಿಲ್ಲ. ಸಭೆಯಲ್ಲಿಯೇ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಲ್ಲ. ಸರ್ಕಾರ ಸೆಕ್ಷನ್ 144 ಹೇರಲಿ, ಸತ್ತ ಮೇಲೆ ಮರ್ಯಾದೆಯಿಂದ ಶವ ಸಂಸ್ಕಾರಕ್ಕೆ ಅವಕಾಶ ನೀಡಲಿ" ಎಂದು ಹೇಳಿದರು.

ಏನು ಮಾಡಿದ್ದೀರಿ ಎಂದು ಪ್ರಶ್ನೆ?
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, "ಕೊರೊನಾ ಮೊದಲನೇ ಅಲೆಯಲ್ಲಿಯೂ ಏನೂ ಮಾಡೋಕೆ ಆಗಲಿಲ್ಲ. 2ನೇ ಅಲೆಯಲ್ಲಿ ನೀವು ಏನು ಮಾಡೋಕೆ ಸಾಧ್ಯ?. ಸೀಲ್ ಡೌನ್, ಕಂಟೈನ್ಮೆಂಟ್ ಝೋನ್, ಯಾವುದನ್ನು ಮಾಡಿದ್ದೀರಿ?" ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
Recommended Video

ಮಂಗಳವಾರ ಮಾರ್ಗಸೂಚಿ ಪ್ರಕಟ
ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಹಾಜರಿದ್ದರು. ಮಂಗಳವಾರ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಇಂದು ತೀರ್ಮಾನಿಸಲಾಗಿದೆ.












Click it and Unblock the Notifications