Krunal Pandya: ವಿರಾಟ್ ಕೊಹ್ಲಿ ಕಣ್ಣೀರು ಹಾಕಿದ ಆ ಕ್ಷಣ, ಅಭಿಮಾನಿಗಳ ಬೆಂಬಲವನ್ನು ಮರೆಯಲಾಗದು; ಕೃನಾಲ್ ಪಾಂಡ್ಯ
Krunal Pandya: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್ 27) ನಡೆಯಲಿರುವ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಸ್ಟಾರ್ ಆಲ್-ರೌಂಡರ್ ಕೃನಾಲ್ ಪಾಂಡ್ಯ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಆರ್ಸಿಬಿ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಇದು ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್-ರೌಂಡರ್ ಕೃನಾಲ್ ಪಾಂಡ್ಯ ಅವರು 2025ರ ಐಪಿಎಲ್ ಪ್ರಶಸ್ತಿ ಗೆಲುವಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. 18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆರ್ಸಿಬಿ ಚಾಂಪಿಯನ್ ಆದಾಗ ವಿರಾಟ್ ಕೊಹ್ಲಿ ಅವರು ಭಾವುಕರಾಗಿದ್ದನ್ನು ನೋಡುವುದು ಅತ್ಯಂತ ವಿಶೇಷವಾಗಿತ್ತು ಎಂದು ಅವರು ಹೇಳಿದ್ದಾರೆ.

ಕೃನಾಲ್ ಪಾಂಡ್ಯ ಹೇಳಿದ್ದೇನು?
"ಆರ್ಸಿಬಿ ಪ್ರಶಸ್ತಿ ಗೆದ್ದ ನಂತರ ವಿರಾಟ್ ಕೊಹ್ಲಿ ಅವರು ಭಾವುಕರಾದ ಕ್ಷಣವನ್ನು ನೋಡುವುದು ಅತ್ಯಂತ ವಿಶೇಷವಾಗಿತ್ತು. ತಂಡದ ಸಂಕಷ್ಟದ ಸಮಯದಲ್ಲಿ ಸದಾ ಜೊತೆಗಿದ್ದ ಅಭಿಮಾನಿಗಳಿಗೆ ಈ ಗೆಲುವು ಸಲ್ಲಬೇಕು. ವಿರಾಟ್ ಕೊಹ್ಲಿ ಅವರ ದಶಕಗಳ ಪರಿಶ್ರಮ ಮತ್ತು ಅಭಿಮಾನಿಗಳ ಅಚಲ ಅಭಿಮಾನವನ್ನು ನೋಡಿದರೆ, ಈ ಪ್ರಶಸ್ತಿಗೆ ಅವರಿಗಿಂತ ದೊಡ್ಡ ಹಕ್ಕುದಾರರು ಯಾರೂ ಇರಲಿಲ್ಲ," ಎಂದು ಕೃನಾಲ್ ಪಾಂಡ್ಯ ಅವರು ಹೇಳಿದ್ಧಾರೆ.
'ಆರ್ಸಿಬಿಗಾಗಿ ಕೊಹ್ಲಿ ಸಾಕಷ್ಟು ಶ್ರಮಿಸಿದ್ದಾರೆ'
ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಜಯಗಳಿಸಿದ ತಕ್ಷಣ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಣ್ಣೀರಿಟ್ಟಿದ್ದರು. ಈ ಬಗ್ಗೆ ಮಾತನಾಡಿದ ಕೃನಾಲ್, "ವಿರಾಟ್ ಅಷ್ಟು ಭಾವುಕರಾಗಿದ್ದನ್ನು ನೋಡುವುದು ತುಂಬಾ ವಿಶೇಷವಾಗಿತ್ತು. ಅವರು ಈ ತಂಡಕ್ಕಾಗಿ ತಮ್ಮ ಜೀವನದ ಬಹುಪಾಲು ಸಮಯವನ್ನು ನೀಡಿದ್ದಾರೆ. ಈ ಗೆಲುವಿಗೆ ಅವರು ಸಂಪೂರ್ಣ ಅರ್ಹರು," ಎಂದು ತಿಳಿಸಿದ್ದಾರೆ.
ಸೋಲು-ಗೆಲುವಿನಲ್ಲಿ ಬೆಂಬಲವಾಗಿ ನಿಂತ ಅಭಿಮಾನಿಗಳು
"ಆರ್ಸಿಬಿ ಅಭಿಮಾನಿಗಳು ತಂಡದ ಸೋಲು-ಗೆಲುವಿನ ಎಲ್ಲಾ ಹಂತಗಳಲ್ಲೂ ಬೆಂಬಲವಾಗಿ ನಿಂತಿದ್ದಾರೆ. ಆದ್ದರಿಂದ ಈ ಟ್ರೋಫಿಯು ಅಭಿಮಾನಿಗಳು ಮತ್ತು ವಿರಾಟ್ ಕೊಹ್ಲಿಗೆ ಸಲ್ಲಬೇಕಾದ ಗೌರವ," ಎಂದು ಕೃನಾಲ್ ಹೇಳಿದ್ದಾರೆ. ಇನ್ನೂ 2025ರ ಫೈನಲ್ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 17 ರನ್ಗಳಿಗೆ 2 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಅವರ ವೃತ್ತಿಜೀವನದ ನಾಲ್ಕನೇ ಐಪಿಎಲ್ ಪ್ರಶಸ್ತಿಯಾಗಿದೆ. ಈ ಮೊದಲು ಮೂರು ಮುಂಬೈ ಇಂಡಿಯನ್ಸ್ ಜೊತೆಗೆ ಮೂರು ಬಾರಿ ಗೆದ್ದಿದ್ದರು.
ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡುತ್ತಾ, "ಅವರು ಯಾವುದೇ ಕಾಲಘಟ್ಟದಲ್ಲಿ ಜನಿಸಿದರೂ ಶ್ರೇಷ್ಠ ಆಟಗಾರನಾಗಿಯೇ ಇರುತ್ತಿದ್ದರು. ಅವರಲ್ಲಿರುವ ಗೆಲುವಿನ ಹಸಿವು ಮತ್ತು ಆಟದ ಮೇಲಿನ ಉತ್ಸಾಹ ಮಾದರಿಯಾದದ್ದು" ಎಂದು ಕೃನಾಲ್ ಪಾಂಡ್ಯ ಅವರು ಶ್ಲಾಘಿಸಿದ್ದಾರೆ. ಇನ್ನೂ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಮತ್ತೆ ಗೆಲುವಿನ ಲಯ ಮುಂದುವರಿಸುವ ತವಕದಲ್ಲಿದೆ. ಕೃನಾಲ್ ಪಾಂಡ್ಯ ಅವರ ಈ ಮಾತುಗಳು ತಂಡದ ಮತ್ತು ಅಭಿಮಾನಿಗಳ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿವೆ. ಈ ಬಾರಿ ಕೂಡ ಟ್ರೋಫಿ ಗೆಲ್ಲುವ ತಂಡಗಳ ಸಾಲಿನಲ್ಲಿ ಆರ್ಸಿಬಿ ಹೆಸರು ಸಹ ಇದೆ. ಯಾಕಂದ್ರೆ ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ಹೊಂದಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮ ಲಯದಲ್ಲಿದ್ದು, ಈ ಬಾರಿಯೂ ಟ್ರೋಫಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಅಂತಿದ್ದಾರೆ ಅಭಿಮಾನಿಗಳು.












Click it and Unblock the Notifications