ಮೆಟ್ರೋ ಯೋಜನೆಗೆ ರಕ್ಷಣಾ ಇಲಾಖೆ ಭೂಮಿ ನೀಡಲು ರಕ್ಷಣಾ ಮಂತ್ರಿ ಒಪ್ಪಿಗೆ
ಬೆಂಗಳೂರು, ಆಗಸ್ಟ್ 04: ಇಂದು ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮೆಟ್ರೋ ಸೇರಿ ರಾಜ್ಯ ಸರ್ಕಾರದ 10 ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ನೀಡಲು ಒಪ್ಪಿದ್ದಾರೆ.
ಕುಮಾರಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ರಕ್ಷಣಾ ಇಲಾಖೆ ಸುಪರ್ಧಿಯಲ್ಲಿರುವ ಭೂಮಿಯನ್ನು ನೀಡಲು ಒಪ್ಪಿದ್ದು, ರಕ್ಷಣಾ ಇಲಾಖೆಯು ಅಭಿವೃದ್ಧಿಗಾಗಿ ರಾಜ್ಯಗಳೊಂದಿಗೆ ಹೊಂದಿಕೊಂಡು ಸಾಗುತ್ತದೆ ಎಂದಿದ್ದಾರೆ.
ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಸುರಂಗ ಮಾರ್ಗ ಕೊರೆಯಲು ರಕ್ಷಣಾ ಇಲಾಖೆಗೆ ಸೇರಿದ ಜಾಗ ಅವಶ್ಯಕತೆ ಇತ್ತು. ಆಗಾಗಿ ಜಾಗ ನೀಡುವಂತೆ ಮುಖ್ಯಮಂತ್ರಿಳು ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿರುವ ಇಲಾಖೆಯು ಜಾಗ ಮಾಡಿಕೊಟ್ಟಿದೆ.

ರಕ್ಷಣಾ ಇಲಾಖೆಯು ಮೆಟ್ರೋ ಕಾಮಗಾರಿಗೆಂದು ಸರ್ಕಾರಕ್ಕೆ ಹಸ್ತಾಂತರಿಸುತ್ತಿರುವ ಭೂಮಿಯ ಮೌಲ್ಯಕ್ಕೆ ಸರಿಹೊಂದುವಷ್ಟೆ ಭೂಮಿಯನ್ನು ಸರ್ಕಾರವು ರಕ್ಷಣಾ ಇಲಾಖೆಗೆ ನೀಡಬೇಕು ಎಂಬ ಒಪ್ಪಂದವೂ ಈ ಸಮಯದಲ್ಲಿ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಭದ್ರತಾ ಎಕ್ಸ್ಪೊ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿ ಗೋವಾ, ಈ ಬಾರಿ ತಮಿಳುನಾಡಿನಲ್ಲಿ ಆಗುತ್ತಿದೆ. ಹಲವು ನಗರಗಳು ರಕ್ಷಣಾ ಸಾಮಗ್ರಿಗಳ ಪ್ರದರ್ಶನಕ್ಕೆ ಮನವಿ ಮಾಡಿವೆ ನಾವಿನ್ನೂ ಅಂತಿಮಗೊಳಿಸಿಲ್ಲ ಎಂದರು.












Click it and Unblock the Notifications