ದೀಪಾವಳಿ: ಪಟಾಕಿ ತಂಡ ಅವಘಡ, 2 ಮಕ್ಕಳ ಕಣ್ಣಿಗೆ ಗಾಯ
ಬೆಂಗಳೂರು, ಅಕ್ಟೋಬರ್ 24: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಹ ಏನಾದರೂ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಹಬ್ಬ ಆರಂಭವಾದ ಒಂದೇ ದಿನದಲ್ಲಿ ಬೆಂಗಳೂರಲ್ಲಿ ಒಟ್ಟು 4 ಅವಘಡಗಳು ನಡೆದಿವೆ.
ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ಇಬ್ಬರು ಮಕ್ಕಳ ಕಣ್ಣಿಗೆ ಗಾಯವಾದ ಘಟನೆ ಸೋಮವಾರ ಥಣಿಸಂದ್ರ ಮತ್ತು ಫೆಜರ್ ಟೌನ್ನಲ್ಲಿ ನಡೆದಿದೆ. ಗಾಯಗೊಂಡ ಏಳು ವರ್ಷದ ಇಬ್ಬರು ಬಾಲಕರಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೀಪಾವಳಿ ಆರಂಭಕ್ಕೂ ಮುನ್ನ ಭಾನುವಾರದಿಂದ ಬೆಂಗಳೂರಿನಲ್ಲಿ ಈಗಾಗಲೇ ಇಬ್ಬರು ಮಕ್ಕಳ ಪಟಾಕಿ ಸಿಡಿಸುವಾಗ ಗಾಯಗೊಂಡ ಘಟನೆ ನಡೆದಿದೆ.
ಮನೆ ಮುಂದೆ ಪಟಾಕಿ ಹೊಡೆಯುತ್ತಿದ್ದ ಥಣಿಸಂದ್ರದ 7ವರ್ಷದ ಬಾಲಕನ ಎಡಗಣ್ಣಿಗೆ ಗಾಯವಾಗಿದೆ. ಇದೇ ವೇಳೆ ಫ್ರೆಜರ್ ಟೌನ್ ಸಮೀಪದ ಮತ್ತೊಬ್ಬ ಏಳು ವರ್ಷದ ಬಾಲಕನಿಗೆ ಪಟಾಕಿ ಹೊಡೆಯುವಾಗ ಸಿಡಿದ ಪಟಾಕಿ ಬಲಗಣ್ಣಿಗೆ ತಾಕಿದೆ. ಕೂಡಲೇ ಇಬ್ಬರು ಮಕ್ಕಳನ್ನು ಮಿಂಟೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಕ್ಕಳ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮನುಷ್ಯನಿಗೆ ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದ್ದು, ಅದನ್ನು ಕಾಪಾಡಿಕೊಳ್ಳಬೇಕು. ಪಟಾಕಿ ಹೊಡೆಯುವ ಗೀಳಿನಿಂದ, ಎಚ್ಚರಿಕೆ ಇಲ್ಲದೇ ಹೊಡೆದು ಅಪಾಯ ತಂದಿಟ್ಟುಕೊಳ್ಳಬಾರದು. ಮಕ್ಕಳು ಪಟಾಕಿ ಹೊಡೆಯುವಾಗ ಅಗತ್ಯ ಎಚ್ಚರಿಕೆ ವಹಿಸಬೇಕಿದ್ದು, ಅವರನ್ನು ಒಂಟಿಯಾಗಿ ಪಟಾಕಿ ಹೊಡೆಯಲು ಬಿಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 30ಹಾಸಿಗೆ ಮೀಸಲು
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಡೆಯುವಾಗ ಅವಘಡಗಳು ಸಂಭವಿಸುವ ಹಿನ್ನೆಲೆಯಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ 24x7 ಸೇವೆ ಒದಗಿಸಲಿದ್ದು, ಅದಕ್ಕಾಗಿ 30 ಹಾಸಿಗೆ ಮೀಸಲಿಟ್ಟಿದೆ. ಅಗತ್ಯ ಚಿಕಿತ್ಸೆ ಲಭ್ಯವಾಗಿಸಲು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಅಗತ್ಯ ವೈದ್ಯ ಸಿಬ್ಬಂದಿ, ಔಷಧಿ ಲಭ್ಯವಿದೆ ಎಂದು ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ಅವರು ಮಾಹಿತಿ ನೀಡಿದ್ದಾರೆ












Click it and Unblock the Notifications