ಬೆಂಗಳೂರಲ್ಲಿ 70ಕ್ಕೂ ಹೆಚ್ಚು ಪಟಾಕಿ ಅವಘಡ, ಓರ್ವನ ಕಣ್ಣಿಗೆ ಗಂಭೀರ ಗಾಯ
ಬೆಂಗಳೂರು, ಅಕ್ಟೋಬರ್ 26: ದೀಪಾವಳಿ ಹಬ್ಬದ ಆಚರಣೆಗೆ ಇಂದು ಬುಧವಾರ ತೆರೆ ಬೀಳಲಿದ್ದು, ಕಳೆದ ನಾಲ್ಕು ದಿನದಲ್ಲಿ ಬೆಂಗಳೂರಿನಲ್ಲಿ ಸುಮಾರು 70ಕ್ಕೂ ಹೆಚ್ಚು ಮಂದಿಗೆ ಪಟಾಕಿಯಿಂದ ಗಾಯಗಳಾಗಿವೆ. ಇಷ್ಟು ಪ್ರಕರಣಗಳ ಸಂತ್ರಸ್ತರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೀಪಾವಳಿ ಹಬ್ಬದ ಮುನ್ನಾ ದಿನದಿಂದಲೂ ಪಟಾಕಿಗಳ ಸದ್ದು ಕೇಳುತ್ತಲೇ ಇದೆ. ಸರ್ಕಾರದ ಆದೇಶದ ನಡುವೆಯುವ ಯಥೇಚ್ಚವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಈ ವೇಳೆ ಹಲವೆಡೆ ಪಟಾಕಿ ಅವಘಡಗಳು ಸಂಭವಿಸಿದ್ದು, ಒಟ್ಟು 70ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಈ ಪೈಕಿ ಮಂಗಳವಾರ ಪಟಾಕಿ ಸಿಡಿತದಿಂದ ಹತ್ತಕ್ಕೂ ಅಧಿಕ ಮಂದಿ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಮೂರು ದಿನದಲ್ಲಿ 15ಕ್ಕೂ ಹೆಚ್ಚು ಮಂದಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಒಬ್ಬ ಬಾಲಕನ ಕಣ್ಣಿಗೆ ಗಂಭೀರ ಗಾಯವಾಗಿದೆ. ಆ ಬಾಲಕ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಅಗತ್ಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವೈದ್ಯರು ವಿಷಾಧ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಪಟಾಕಿ ಅವಘಡಗಳ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಪಾದಾಚಾರಿಗಳಿಗೂ ಪಟಾಕಿ ಕಿಡಿ ಸಿಡಿದು ಗಾಯವಾದ ಘಟನೆಗಳು ವರದಿಯಾಗಿವೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಗರದ ವಿವಿಧ ಕಣ್ಣಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಒಟ್ಟು ಪ್ರಕರಣಗಳಲ್ಲಿ ಸುಮಾರು 25 ಮಂದಿ ಮಿಂಟೋ ಕಣ್ಣಿನ ಆಸ್ಪತ್ರೆ ದಾಖಲಾಗಿದ್ದಾರೆ. 18 ಜನರು ನಗರದ ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲಾಗಿದ್ದು, ಇವರಲ್ಲಿ ನಾಲ್ವರಿಗೆ ಗಂಭೀರ ಮಟ್ಟದಲ್ಲಿ ಪಟಾಕಿಯಿಂದ ಗಾಯಗಳಾಗಿವೆ. ಅದೇ ರೀತಿ ನೇತ್ರಧಾಮ ಕಣ್ಣಿನ ಆಸ್ಪತ್ರೆ ಯಲ್ಲಿ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13 ಗಾಯಾಳುಗಳು, ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ 3 ಮಂದಿ ಹಾಗೂ ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದರ ಬಗ್ಗೆ ವರದಿ ಆಗಿದೆ.
ಎಲ್ಲ ಅವಘಡಗಳಲ್ಲಿ ಹೆಚ್ಚಾಗಿ ಜನರು ಲಕ್ಷ್ಮೀ ಪಟಾಕಿ, ಅಟಂಬಾಂಬ್, ಬಿಜ್ಲಿ ಪಟಾಕಿ ಹಾಗೂ ಫ್ಲವರ್ ಪಾಟ್ ಹೊಡೆಯುವಾಗ ಗಾಯಗೊಂಡಿದ್ದಾರೆ. ಹೆಚ್ಚು ಸದ್ದು ಮಾಡುವ ಪಟಾಕಿಗಳೇ ಇವರ ಗಾಯಕ್ಕೆ ಕಾರಣ ಎನ್ನಲಾಗಿದೆ.

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ 49 ವರ್ಷದ ಮಹಿಳೆ, ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ 38 ವರ್ಷದ ಮಹಿಳೆ ಹಾಗೂ ಅವೆನ್ಯೂ ರಸ್ತೆಯಲ್ಲಿ ಯುವಕನಿಗೆ ಪಟಾಕಿ ಸಿಡಿತ ವೀಕ್ಷಿಸುವಾಗ ಕಿಡಿ ತಾಗಿದೆ. ಇವರೆಲ್ಲ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ನಮ್ಮ ಬದುಕಿನಲ್ಲಿ ಬೆಳಕು ತರಬೇಕು. ಸ್ವಲ್ಪ ಎಚ್ಚರ ತಪ್ಪಿದರು ಪಟಾಕಿ ಅವಘಡಗಳಿಂದ ಇಡಿ ಜೀವನವನ್ನೇ ಕತ್ತಲಲ್ಲಿ ಕಳೆಯಬೇಕಾಗುತ್ತದೆ. ಅಗತ್ಯ ಜಾಗೃತಿ ವಹಿಸದ ಹಿನ್ನೆಲೆ ಪಟಾಕಿಗಳಿಂದ ಅನೇಕರು ಗಾಯಗೊಂಡಿದ್ದಾರೆ. ಒಟ್ಟು ದಾಖಲಾದ ಪ್ರಕರಣಗಳಲ್ಲಿ ಒಬ್ಬ ಬಾಲಕನಿಗೆ ದೃಷ್ಟಿ ಮರಳುವ ಸಾಧ್ಯತೆ ತೀರಾ ಕಡಿಮೆ.
"ಇನ್ನು ಐದು ಮಂದಿಯ ದೃಷ್ಟಿಗೆ ಸಣ್ಣ ಪ್ರಮಾಣದಲ್ಲಿ ತೊಂದರೆ ಉಂಟಾಗಿದೆ. ಕಣ್ಣಿಗೆ ಹಸಿರು ಪಟಾಕಿಗಳಿಂದಲೂ ಅಪಾಯ ಇರುವುದರಿಂದ ಅವುಗಳನ್ನು ಹೊಡೆಯುವಾಗಲೂ ಎಚ್ಚರ ವಹಿಸಬೇಕು. ಕಣ್ಣಿನ ಮೇಲೆ ಪಟಾಕಿಯ ಕಿಡಿಗಳು ಬಿದ್ದರೆ ದೃಷ್ಟಿ ಹೀನರಾಗುವ ಸಾಧ್ಯತೆ ಹೆಚ್ಚಿರುತ್ತದೆ," ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ಅವರು ಸಲಹೆ ನೀಡಿದರು.












Click it and Unblock the Notifications