ಧೃತಿಗೆಡದಂತೆ ಪೌರ ಕಾರ್ಮಿಕರಿಗೆ ಪರಮೇಶ್ವರ್ ಮನವಿ
ಬೆಂಗಳೂರು, ಜು.10: ಬಿಬಿಎಂಪಿ ಪೌರಕಾರ್ಮಿಕರ ಸಾವು ಬೇಸರ ತಂದಿದೆ, ಸುಬ್ರಮಣಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುತ್ತದೆ, ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
ಕಳೆದ ಆರು ತಿಂಗಳಿನಿಂದ ವೇತನ ಸಿಗದೇ ಬೆಂಗಳೂರಿನ ವೈಯಾಲಿ ಕಾವಲ್ ನಿವಾಸಿ ಪೌರ ಕಾರ್ಮಿಕ ಸುಬ್ರಮಣಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದರು. ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಹಾರದ ಭರವಸೆ ನೀಡಿದ್ದಾರೆ.
ಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶ
ಪೌರಕಾರ್ಮಿಕರ ಸಂಬಳದ ಸಮಸ್ಯೆ ಬಗ್ಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಪ್ರತಿಭಟನಾ ನಿರತ ಕಾರ್ಮಿಕರು ಸಹಕರಿಸಬೇಕು.
ಸುಬ್ರಮಣಿ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಸಾವಿನ ನಿಖರ ಮಾಹಿತಿ ಶೀಘ್ರವೇ ತಿಳಿದುಕೊಳ್ಳಲಿದ್ದೇನೆ. ನಾನು ಸದಾ ಕಾರ್ಮಿಕರ ಪರ ಇದ್ದೇನೆ.
ಕಾರ್ಮಿಕರಿಗೆ ಈ ಬಗ್ಗೆ ಯಾವುದೇ ಆತಂಕ ಬೇಡ. ಮುಂದೆ ಇಂಥ ಅಹಿತಕರ ಘಟನೆ ಸಂಭವಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಂಬಳ ಸಮಸ್ಯೆ ಕೂಡ ಶೀಘ್ರವೇ ಪರಿಹಾರಗೊಳ್ಳಲಿದೆ ಎಂದು ಹೇಳಿದ್ದಾರೆ.
ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಟ್ವಿಟ್ಟರ್ನಲ್ಲಿ ಕೂಡ ಸಾಕಷ್ಟು ಚರ್ಚೆ, ಅಭಿಯಾನಗಳು ನಡೆಯುತ್ತಿವೆ, ಇನ್ನೆಷ್ಟು ಪೌರಕಾರ್ಮಿಕರ ಬಲಿ ಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ, ಜತೆಗೆ ಪೌರಕಾರ್ಮಿಕರ ವೇತನ ಶೀಘ್ರ ನೀಡುವಂತೆ ಒತ್ತಾಯಿಸಿದ್ದಾರೆ.