HD ಕುಮಾರಸ್ವಾಮಿ ಹಿಟ್ ಅಂಡ್ ರನ್ ಬಿಟ್ಟು ಚರ್ಚೆಗೆ ಬರಲಿ, ಚರಿತ್ರೆ ಬಿಚ್ಚಿಡುತ್ತೇನೆ: ಡಿಕೆ ಶಿವಕುಮಾರ್ ಸವಾಲು
ಬೆಂಗಳೂರು, ಜು.15: ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಜೀವನ ಬರೀ ಹಿಟ್ ಅಂಡ್ ರನ್ ಮಾಡುವುದೇ ಆಗಿದೆ. ಅವರು ಬೀದಿಯಲ್ಲಿ ಹಿಟ್ ಅಂಡ್ ರನ್ ಮಾಡುವ ಬದಲು ಮಾಧ್ಯಮಗಳಲ್ಲಿ ಚರ್ಚೆಗೆ ಬರಲಿ, ಇಲ್ಲವೇ ಅವರ ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಿರಂಗವಾಗಿ ಸವಾಲು ಹಾಕಿದರು.
ಕಸ ವಿಲೇವಾರಿ ಟೆಂಡರ್ ನಲ್ಲಿ 15,000 ಕೋಟಿ ಲಂಚ ಪಡೆಯಲಾಗಿದೆ ಎಂದು ಎಚ್ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದರು. ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಅವರು, ಕುಮಾರಸ್ವಾಮಿ ಹತಾಶೆಯಲ್ಲಿದ್ದಾರೆ. ಅವರು ಬಹಿರಂಗ ಚರ್ಚೆಗೆ ಬರಲಿ. ಅವರಂತೆ ಡಿ.ಕೆ. ಶಿವಕುಮಾರ್ ಹಿಟ್ ಅಂಡ್ ರನ್ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ಚರ್ಚೆಗೆ ಬಂದರೆ ಚರಿತ್ರೆಯನ್ನು ಬಿಚ್ಚಿಡುತ್ತೇನೆ: ಡಿಸಿಎಂ ಗರಂ
ಕಸದ ಲಾರಿ ಹೊಡೆಯುತ್ತಿದ್ದವರು ಅವರು. ಅವರ ಸಹೋದರ ಹಾಗೂ ಅವರ ಪಕ್ಷದ ಸದಸ್ಯರಿಗೆ ದಾಖಲೆ ಕೊಟ್ಟು ಸದನದಲ್ಲಿ ಚರ್ಚೆ ಮಾಡಲಿ. ಕಿಂಗ್ ಆಫ್ ಕರಪ್ಶನ್ ಎಂದು ಜನ ನನ್ನನ್ನಾಗಲಿ, ನನ್ನ ಕುಟುಂಬದವರನ್ನು ಕರೆದಿಲ್ಲ. ಆ ರೀತಿ ಯಾರನ್ನು ಕರೆದಿದ್ದಾರೆ ಎಂದು ಚರ್ಚೆಗೆ ಬರಲಿ ತಿಳಿಸುತ್ತೇನೆ. ಇವರು ಚರ್ಚೆಗೆ ಬರಲಿ, ನಾನು ಅವರ ಚರಿತ್ರೆ ತೆಗೆಯುತ್ತೇನೆ. ಎಲ್ಲವೂ ದಾಖಲೆಯಲ್ಲಿ ಉಳಿಯಲಿ ಎಂದು ವಾಗ್ದಾಳಿ ನಡೆಸಿದರು.
ಹಗರಣಗಳ ಪಿತಾಮಹ ಬಿಜೆಪಿ
ಇಂದಿನಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಹಗರಣಗಳ ಬಗ್ಗೆ ಬಿಜೆಪಿ ಸದನದ ಹೊರಗೆ ಮಾಡುತ್ತಿರುವ ಹೋರಾಟ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಬಿಜೆಪಿ ಅವರು ಸದನದ ಹೊರಗೆ ಯಾಕೆ ಹೋರಾಟ ಮಾಡುತ್ತಿದ್ದಾರೆ? ಸದನದ ಒಳಗೆ ಹೋರಾಟ ಮಾಡಲಿ. ಅವರು ಏನು ಹೇಳಬೇಕೋ ಸದನದ ಒಳಗೆ ಹೇಳಲಿ. ನಾವು ಏನು ಉತ್ತರ ಕೊಡಬೇಕೋ ಕೊಡುತ್ತೇವೆ. ನಮಗೂ ಅವರ ಬಗ್ಗೆ ಗೊತ್ತಿದೆ. ಎಲ್ಲವನ್ನೂ ಒಂದೊಂದಾಗಿ ಬಿಚ್ಚಿಡುತ್ತೇವೆ" ಎಂದು ಶಿವಕುಮಾರ್ ಹೇಳಿದರು.
ಈ ವಿಚಾರವಾಗಿ ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು "ಮುಡಾ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ. ಬಿಜೆಪಿ ಭ್ರಷ್ಟಾಚಾರದ ತಂದೆ. ಅವರ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರದ ಸರಮಾಲೆಯೇ ನಡೆದಿದೆ. ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಆಡಳಿತ ಶುದ್ಧೀಕರಣ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ತಿಳಿಸಿದರು.

ಹಣ್ಣು ತಾವು ತಿಂದು ಸಿಪ್ಪೆ ಎಸೆಯುವ ಯತ್ನ
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದು ನೋಡಿ ಮೈ ಪರಿಚಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಹಣ್ಣನ್ನು ತಿಂದು ಸಿಪ್ಪೆಯನ್ನು ನಮ್ಮ ಮೇಲೆ ಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನು ಬೇಕಾದರು ಹೇಳಿಕೊಳ್ಳಲಿ. ಪಾರ್ಲಿಮೆಂಟಿನಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ" ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮುಡಾ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವ ಬದಲು ನ್ಯಾಯಾಂಗ ತನಿಖೆ ನಡೆಸುತ್ತಿರುವುದು ಕಣ್ಣೊರೆಸುವ ತಂತ್ರ ಎನ್ನುವ ಆರೋಪದ ಎನ್ನುತ್ತಿದ್ದಾರೆ. ಪ್ರತಿಪಕ್ಷಗಳು ಹೇಳಿದಂತೆ ಕೇಳಲಾಗುತ್ತದೆಯೇ? ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ನಾವು ಈ ರಾಜ್ಯಕ್ಕೆ ಏನು ಒಳ್ಳೆಯದನ್ನು ಮಾಡಬೇಕೊ ಅದನ್ನು ಮಾಡುತ್ತೇವೆ" ಎಂದರು.












Click it and Unblock the Notifications