ಕುವೆಂಪು ವಿರಚಿತ 'ದಶಾನನ ಸ್ವಪ್ನಸಿದ್ಧಿ' ನಾಟಕ ಪ್ರದರ್ಶನ
ಶುಕ್ರವಾರ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ, ಈ ಶುಕ್ರವಾರ (24ನೇ ಮೇ) ಸಿನಿಮಾದ ಜೊತೆಗೆ ಹೊಸ ನಾಟಕವೊಂದು ಪ್ರದರ್ಶನ ಆಗುತ್ತಿದೆ. ಅದುವೇ ಮಹಾಕವಿ ಕುವೆಂಪು ವಿರಚಿತ 'ದಶಾನನ ಸ್ವಪ್ನಸಿದ್ಧಿ' ನಾಟಕ.
ನಾಟಕ : ದಶಾನನ ಸ್ವಪ್ನಸಿದ್ಧಿ
ಮೂಲ: ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ
ಸ್ಥಳ: ಕೆ.ಎಚ್.ಕಲಾಸೌಧ, ಹನುಮಂತನಗರ
ದಿನಾಂಕ: 24ನೇ ಮೇ 2019
ಸಮಯ: ಸಂಜೆ 7:30ಕ್ಕೆ
ನಿರ್ದೇಶನ: ಭರತ್ ಸ.ಜಗನ್ನಾಥ್
ನಿರ್ಮಾಣ: ಶೈಲೇಶ್ ಕುಮಾರ್ ಎಂ.ಎಂ.
ತಂಡ: ಸೈಡ್ ವಿಂಗ್ (ರಿ)
'ದಶಾನನ ಸ್ವಪ್ನಸಿದ್ಧಿ'ಯು ಶ್ರೀ ಕುವೆಂಪು ವಿರಚಿತ ಮೇರು ಕೃತಿ 'ಶ್ರೀರಾಮಾಯಣ ದರ್ಶನಂ'ನಿಂದ ಆಯ್ದ ಅಧ್ಯಾಯವನ್ನು ರಂಗರೂಪಕ್ಕೆ ತಂದಿರುವುದಾಗಿದೆ. ಈ ಅಧ್ಯಾಯದಲ್ಲಿ ರಾಮಾಯಣದ ಕುರಿತಾದ ಹೊಸ ಆಯಾಮಗಳನ್ನು ಕುವೆಂಪು ಅವರು ನೀಡಿದ್ದಾರೆ. ಊಹೆಗೂ ನಿಲುಕದ ಕುವೆಂಪು ಅವರ ರಾವಣನನ್ನು ನಾವಿಲ್ಲಿ ಕಾಣಬಹುದು. ಯುದ್ಧದ ಹಿಂದಿನ ದಿನ ರಾವಣನು ಒಂದು ಅದ್ಭುತ ಕನಸಿಗೆ ಜಾರುತ್ತಾನೆ, ಆ ಮೂರು ಹಂತದ ಕನಸನ್ನು ದಾಟುವುದರಲ್ಲಿ ರಾವಣನಿಗೆ ಇಡೀ ರಾಮಾಯಣದ ಪಯಣದ ಮೇಲಿನ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ
ಯುದ್ಧ ನೋಡುಗನಿಗೆ ಮನರಂಜನೆಯೆ, ತಾನು ಯುದ್ಧ ಮಾಡುವ ವರೆಗೂ ಎಂಬುದು ಪ್ರಸಿದ್ಧ ಮಾತು. ವ್ಯಕ್ತಿಗಳ ನಡುವಿನ ಯುದ್ಧವಾಗಿರಲಿ ಅಥವಾ ವ್ಯಕ್ತಿಯೊಳಗಿನ ಯುದ್ಧವಾಗಿರಲಿ. ಯಾವುದೇ ಪ್ರಮಾಣದ ಯುದ್ಧವಾಗಿರಲಿ, ಯುದ್ಧ ಯುದ್ಧವೇ! ಆದರೆ, ನಿಜವಾದ ಯುದ್ಧ ಯಾವುದು? ಈ ನಾಟಕವು ಯುದ್ಧದ ನಿಜವಾದ ಹಾಗು ಸಕಾರಾತ್ಮಕವಾದ ಅರ್ಥವನ್ನು ನೀಡುತ್ತದೆ. ಈ ನಾಟಕವನ್ನು ಶೈಲೇಶ್ ಕುಮಾರ್ ಅವರ ನೇತೃತ್ವದ ಸೈಡ್ ವಿಂಗ್ ತಂಡ ಪ್ರದರ್ಶಿಸುತ್ತಿದ್ದು, ಭರತ್ ಸ.ಜಗನ್ನಾಥ್ ನಿರ್ದೇಶಿಸಿದ್ದಾರೆ.
ನಿರ್ದೇಶಕ ಭರತ್ ಸ.ಜಗನ್ನಾಥ್ ರಂಗಭೂಮಿಗೆ ಕಿರಿಯ ವಯಸ್ಸಿನಿಂದಲೇ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದು, ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರ ಇತ್ತೀಚಿನ ನಾಟಕ 'ಸರ್ಗ' ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ ಹಾಗು ಇತ್ತೀಚಿಗೆ ಗಿರೀಶ ಕಾರ್ನಾಡ ಅವರ ಹೊಸ ನಾಟಕ 'ರಾಕ್ಷಸ-ತಂಗಡಿ'ಯನ್ನು ನಿರ್ದೇಶಿಸಿದ್ದು ಯಶಸ್ವಿ ಪ್ರದರ್ಶನಗಳು ಕಾಣುತ್ತಿವೆ.