ದಸರಾ ರಜೆಗಳು: ಖಾಸಗಿ ಬಸ್ ದರ ದುಪ್ಪಟ್ಟು- ಸಾರಿಗೆ ಸಚಿವರೇ ಏನಾಯ್ತು ನಿಮ್ಮ ಎಚ್ಚರಿಕೆ?
ಬೆಂಗಳೂರು, ಅಕ್ಟೋಬರ್ 03: ಹಬ್ಬವೆಂದರೆ ಸಂತೋಷ ಸಂಭ್ರಮ. ದಸರಾ ಹಬ್ಬದ ಸಾಲು ಸಾಲು ರಜೆ. ಶಾಲಾ ಕಾಲೇಜು ಸೇರಿದಂತೆ ಕಚೇರಿಗಳಿಗೂ ರಜೆ. ಇದರಿಂದಾಗಿ ಕೆಲಸವನ್ನು ಅರಸುತ್ತಾ ಬೆಂಗಳೂರಿಗೆ ಬಂದಿರೋ ಜನರು ಊರಿನತ್ತ ಹೊರಡುತ್ತಾರೆ. ಆದರೆ ಬಸ್ ಪ್ರಯಾಣದರ ದುಪ್ಪಟ್ಟಕ್ಕೂ ಹೆಚ್ಚಾಗಿದೆ. ದರ ನಿಯಂತ್ರಣದ ಬಗ್ಗೆ ಸಾರಿಗೆ ಸಚಿವರ ಮಾತು ಹೇಳಿಕೆಗಷ್ಟೇ ಸೀಮಿತವಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗಧಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದ್ದರು.
ಒಂದು ವೇಳೆ ಹೆಚ್ಚು ಟಿಕೆಟ್ ದರ ಕೇಳಿದರೆ ಪ್ರಯಾಣಿಕರು ಸಹಾಯವಾಣಿಗೆ ಕರೆ ಮಾಡಿ ಬಸ್ ನಂಬರ್, ಮಾರ್ಗ ತಿಳಿಸಿ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಸಾರಿಗೆ ಇಲಾಖೆಯು ಸಹಾಯವಾಣಿ ಆರಂಭಿಸಿದ್ದು 94498 63429/ 94498 63426 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ಆದರೂ ಖಾಸಗಿ ಬಸ್ಗಳು ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದರು ಸಾರಿಗೆ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ.
ದಸರಾ ಪ್ರಯುಕ್ತ ಪ್ರಯಾಣ ದರ ಹೆಚ್ಚಳ
ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಬೇಕೆಂದರೆ ಉದಾಹರಣೆಗೆ ಕೆಲವು ಬಸ್ಗಳ ಟಿಕೆಟ್ ದರ ಪರಿಶೀಲಿಸಲಾಯಿತು. ಸಾಮಾನ್ಯ ದಿನಗಳಲ್ಲಿ 700 ರೂ ನಿಂದ 800 ರೂಗಳ ವರೆಗೆ ಟಿಕೆಟ್ ದರವಿರುತ್ತದೆ. ಆದರೆ ದಸರಾ ಸಮಯದಲ್ಲಿ ಸಾಲು ಸಾಲು ರಜೆಗಳು ಬಂದಿರುವುದರಿಂದ ಜನರು ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಇದರಿಂದ ಟಿಕೆಟ್ ದರ ವಿಪರೀತ ಹೆಚ್ಚಾಗಿದೆ. ವಿಆರ್ಎಲ್ ನ ಸ್ಲೀಪರ್ನಲ್ಲಿ - 1800, ವಿಆರ್ಎಲ್ ನಾನ್ ಎಸಿಯಲ್ಲಿ 1300, ಸುಗಮ ಟೂರಿಸ್ಟ್ ನಲ್ಲಿ1000, ಪೋಲೊ ಟ್ರಾವೆಲ್ಸ್ 1400, ಕುಕ್ಕೆ ಟ್ರಾವೆಲ್ಸ್ ನಲ್ಲಿ 1699, ದುರ್ಗಾಂಭ ಮೋಟಾರ್ಸ್ ನಾನ್ ಎಸಿಯಲ್ಲಿ 850 ನಿಗದಿ ಮಾಡಲಾಗಿದೆ.
ಸಾಮಾನ್ಯ ದರಕ್ಕೂ ದಸರಾ ಪ್ರಯುಕ್ತ ಹೆಚ್ಚಳಕ್ಕೂ ವ್ಯತ್ಯಾಸ
ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕೆಂದರೆ ಸಾಮಾನ್ಯ ದಿನಗಳಲ್ಲಿ 750 ರೂ ನಿಂದ 900 ರೂಗಳ ವರೆಗೆ ಟಿಕೆಟ್ ದರವಿರುತ್ತದೆ. ದಸರಾದಿಂದಾಗಿ ಪ್ರಗತಿ ಬಸ್ 1300, ಸುಗಮ್ ಟ್ರಾವೆಲ್ಸ್ 950, ಕಾವೇರಿ ಟ್ರಾವೆಲ್ಸ್ 999, ಬಾಲಾಜಿ ಟ್ರಾವೆಲ್ಸ್ 1199 ಇವೆ. ಇನ್ನು ಸ್ಲೀಪರ್ ಕೋಚ್ಗಳಿಗೆ 1500 ದಿಂದ 2000 ರೂಗಳ ವೆರೆಗೆ ಹೆಚ್ಚಳವಾಗಿದೆ.
ಬೆಳಗಾವಿ ಹೋಗಲು ದುಬಾರಿ ದರ
ಬೆಂಗಳೂರಿನಿಂದ ಬೆಳಗಾವಿಗೆ ಹೋಗಬೇಕೆಂದರೆ ಸಾಮಾನ್ಯ ದಿನಗಳಲ್ಲಿ 750 ರೂ ನಿಂದ 950 ರೂಗಳ ವರೆಗೆ ಟಿಕೆಟ್ ದರವಿರುತ್ತದೆ. ದಸರಾ ಹಿನ್ನೆಲೆಯಲ್ಲಿ ವಿಆರ್ಎಲ್ 1300, ಪೋಲೋ ಟ್ರಾವೆಲ್ಸ್ 1300, ಸುಗಮ್ ಟೂರಿಸ್ಟ್ 1050, ರೇಷ್ಮಾ ಬಸ್ 1800 ರೂಗಳನ್ನು ನಿಗದಿಯಾಗಿದ್ದರೆ. 1300 ರಿಂದ 2500ದ ವರೆಗೂ ಸ್ಲೀಪರ್ ಬಸ್ಗಳಿಗೆ ದರ ನಿಗದಿಯಾಗಿದೆ.
ಗುಲ್ಬರ್ಗಾ ಹೋಗುಲು ಜೇನಲ್ಲಿರಬೇಕು ಗರಿಗರಿ ನೋಟು
ಬೆಂಗಳೂರಿನಿಂದ ಗುಲ್ಬರ್ಗಾಗೆ ಹೋಗಬೇಕೆಂದರೆ ಸಾಮಾನ್ಯ ದಿನಗಳಲ್ಲಿ 800 ರೂ ನಿಂದ 1000 ರೂಗಳ ವರೆಗೆ ಟಿಕೆಟ್ ದರವಿರುತ್ತದೆ. ದಸರಾ ಹಬ್ಬದ ಪ್ರಯುಕ್ತ ಆರೆಂಜ್ ಟ್ರಾವೆಲ್ಸ್ ನಲ್ಲಿ 1890, ಕುಕ್ಕೆ ಟ್ರಾವೆಲ್ಸ್ನಲ್ಲಿ 1599, ಪೂಜಾ ಟ್ರಾವೆಲ್ಸ್ 1499, ಶ್ರೀ ಬಾಲಾಜಿ ಟ್ರಾವೆಲ್ಸ್ 1299, ವಿಆರ್ಎಲ್ 1500 ರೂ ದರವನ್ನು ನಿಗಧಿ ಮಾಡಲಾಗಿದೆ. ಇನ್ನು ಸ್ಲೀಪರ್ ಬಸ್ಗಳಲ್ಲಿ 1800 ರೂನಿಂದ 3000ರೂಗಳವರೆಗೂ ದರವನ್ನು ನಿಗಧಿ ಮಾಡಲಾಗಿದೆ.
ಶಿವಮೊಗ್ಗಕ್ಕೂ ಹೆಚ್ಚಾಯ್ತು ರೇಟು
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗಬೇಕೆಂದರೆ ಸಾಮಾನ್ಯ ದಿನಗಳಲ್ಲಿ 500 ರೂ ನಿಂದ 600 ರೂಗಳ ವರೆಗೆ ಟಿಕೆಟ್ ದರವಿರುತ್ತದೆ. ದಸರಾದಿಂದಾಗಿ ಎಸ್ಆರ್ಎಸ್ 1050, ಸೀಬರ್ಡ್ ಟೂರಿಸ್ಟ್ 700, ಶ್ರೀ ದುರ್ಗಾಂಭ ಟ್ರಾವೆಲ್ಸ್ 1100, ಶ್ರೀ ಬಾಲಾಜಿ ಹಾಲಿಡೇ 999, ವಿಆರ್ಎಲ್ 1200ದರವನ್ನು ನಿಗದಿ ಮಾಡಲಾಗಿದೆ. ಇನ್ನು ಸ್ಲೀಪರ್ ಬಸ್ಗಳಿಗೆ 1000 ರೂ ನಿಂದ 1500 ರೂಗಳವರೆಗೆ ದರವನ್ನು ನಿಗದಿ ಮಾಡಲಾಗಿದೆ.
ಸಚಿವ ಹೇಳಿಕೆಗಷ್ಟೇ ಸೀಮಿತರಾದರೇ?
ದಸರಾ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದ್ದರು. ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಅವರು, ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದ ಹಿನ್ನಲೆಯಲ್ಲಿ ದರ ಹೆಚ್ಚು ಮಾಡುವ ಖಾಸಗಿ ಬಸ್ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಅಧಿಕಾರಿಗಳ ಹತ್ತು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ರಾಜ್ಯಾದ್ಯಂತ ಈ ತಂಡ ತಪಾಸಣೆ ಕಾರ್ಯಚರಣೆ ನಡೆಸಲಿದೆ.ಇದರಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗುವುದಿಲ್ಲ ಎಂದು ಹೇಳಿದ್ದರು.
ಆದರೆ ಖಾಸಗಿ ಬಸ್ ದಸರಾ ಹಬ್ಬದ ಪ್ರಯುಕ್ತ ಪ್ರಯಾಣದರವನ್ನು ಸಾಕಷ್ಟು ಏರಿಕೆ ಮಾಡಿದ್ದಾರೆ. ಹಬ್ಬದ ಸಂಭ್ರಮಕ್ಕಾಗಿ ಊರಿಗೆ ಹೋಗಬೇಕು ಎಂದ ಬಹುತೇಕ ಜನ ದುಬಾರಿ ಬಸ್ ಟಿಕೆಟ್ ದರ ನೋಡಿ ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಸಾರಿಗೆ ಸಚಿವರ ಕಠಿಣ ಎಚ್ಚರಿಕೆಗೆ ಖಾಸಗಿ ಬಸ್ಗಳ ಮಾಲೀಕರು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಸಚಿವರ ಎಚ್ಚರಿಕೆ ಕೇವಲ ಟ್ವಿಟರ್ ಸಂದೇಶಗಳಿಗೆ ಸೀಮಿತವಾಯಿತಾ ಎಂಬ ಪ್ರಶ್ನೆ ಪ್ರಯಾಣಿಕರನ್ನು ಕಾಡುತ್ತಿದೆ.