Darshan Thoogudeepa:'ನಂಗಂತೂ ಜೈಲಿನ ಊಟ ಇಷ್ಟವಾಯ್ತು, ದರ್ಶನ್ಗೆ ಕಷ್ಟ ಯಾಕೋ ಗೊತ್ತಿಲ್ಲ'
ಬೆಂಗಳೂರು, ಜುಲೈ 31: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಜೈಲೂಟ ಬೇಡ, ಮನೆಯೂಟ ಬೇಕು ಎಂದು ಪದೇ ಪದೇ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ನಟ ಚೇತನ್ ಅಹಿಂಸಾ ಮಾತನಾಡಿದ್ದು, ನನಗಂತೂ ಜೈಲಿನ ಊಟ ಇಷ್ಟವಾಗಿತ್ತು ಎಂದಿದ್ದಾರೆ.
ಸಂದರ್ಶನಲ್ಲಿ ಮಾತನಾಡುತ್ತಾ ತಮ್ಮ ಜೈಲಿನ ಅನುಭವ ಬಿಚ್ಚಿಟ್ಟ ಚೇತನ್, ನಾನು ಜೈಲಿನಲ್ಲಿದ್ದಾಗ ನನ್ನ ಕುಟುಂಬಸ್ಥರನ್ನು ಯಾರನ್ನೂ ಬಿಡಲಿಲ್ಲ. ನನ್ನನ್ನು ನೋಡಲು ಯಾರಿಗೂ ಅವಕಾಶ ಕೊಡಲಿಲ್ಲ. ನನ್ನ ಹುಟ್ಟುಹಬ್ಬದ ದಿನ ಕೂಡ ಅವರನ್ನು ವಾಪಸ್ ಕಳುಹಿಸಿಬಿಟ್ಟರು ಎಂದರು.

ನನ್ನನ್ನು ಮೊದಲ ಬಾರಿಗೆ ಜೈಲಿಗೆ ಹಾಕಿದಾಗ ಆರು ಜನರಿರುವ ಸೆಲ್ನಲ್ಲಿ ಹಾಕಿದ್ದರು. ಎರಡನೇ ಸಲ ನೆಲವತ್ತು ಜನರಿರುವ ಬಾರೆಕ್ಸ್ನಲ್ಲಿ ಹಾಕಿದ್ದರು. ಎರಡೂ ಬಾರಿಯೂ ಟ್ವೀಟ್ ಹಾಕಿದ್ದಕ್ಕೆ ಬಂಧಿಸಿದ್ದರು. ಬಾರೆಕ್ಸ್ನಲ್ಲಿ ಹಾಕಿದಾಗ ತುಂಬಾ ಕಷ್ಟವಾಗುತ್ತದೆ. ಒಂದು ದಿನ ಅಂದರೆ ಬೆಳ್ಳಿಗ್ಗೆಯಿಂದ ಸಂಜೆವರೆಗೆ ಕಳೆಯುವುದು ಕಷ್ಟ ಎಂದು ಹೇಳಿದರು.
ಸಾಮಾನ್ಯ ದಿನದಲ್ಲಿ ನಾವು ಕೆಲಸ ಮಾಡುತ್ತಿರುವುತ್ತೇವೆ. ಬೇರೆ ಬೇರೆ ಕಡೆ ಹೋಗುತ್ತಿರುತ್ತೇವೆ. ಕೆಲಸ ಮಾಡುತ್ತಿರುತ್ತೇವೆ. ಎಲ್ಲರನ್ನೂ ನೋಡುತ್ತಿರುತ್ತೇವೆ. ಮಾತನಾಡುತ್ತಿರುತ್ತೇವೆ. ಪುಸ್ತಕ ಓದುತ್ತಿರುತ್ತೇವೆ. ಹೀಗೆ ಸಮಯ ಕಳೆಯುತ್ತೇವೆ. ಆದರೆ ಅಲ್ಲಿ ಸಮಯ ಕಳೆಯುವುದು ತುಂಬಾ ಕಷ್ಟ. ಒಳಗಡೆನೇ ಇರಬೇಕು. ರಾತ್ರಿ ಗಟ್ಟಿ ನೆಲದಲ್ಲೇ ಮಲಗಬೇಕು. ಆ ಬಾತ್ರೂಮ್ ಸನ್ನಿವೇಶ ಈಗಲೂ ನನಗೆ ನೆನಪಾಗುತ್ತದೆ. ಒಂದು ಬ್ಯಾರೆಕ್ಸ್ನಲ್ಲಿ ಬೇರೆ ಬೇರೆ ರೀತಿ ಅವರು ಬಂದಿರುತ್ತಾರೆ.

ನಾನು ಒಂದು ಟ್ವೀಟ್ ಬರೆದು ಬಂದಿದ್ದೆ, ಯಾರೋ ಒಬ್ಬ ಭ್ರಷ್ಟಾಚಾರ ಆರೋಪದ ಮೇಲೆ ಬಂದಿರುತ್ತಾರೆ, ಮತ್ತೆ ಯಾರೋ ಒಬ್ಬರು ಅಮಾಯಕರು ಇರುತ್ತಾರೆ. ಕೆಲವರು ಕೊಲೆ ಪ್ರಕರಣದಲ್ಲಿ ಬಂದಿರುತ್ತಾರೆ. ಅವರಿಗೆಲ್ಲಾ ನಾನು ಯಾರು ಅಂತಾ ಗೊತ್ತಿತ್ತು. ನನಗೆ ಅವರು ಯಾರು ಅಂತಾ ಗೊತ್ತಿಲ್ಲ. ಹೀಗಾಗಿ ರಾತ್ರಿ ಹೊತ್ತು ಅಲ್ಲಿ ಇದ್ದಾಗ ಏನೂ ಬೇಕಾದರೂ ಆಗಬಹುದು ಇಲ್ಲಿ ಅನಿಸಿತು. ಅದು ತುಂಬಾ ಕಷ್ಟ ಆಯಿತು ಎಂದರು.
ಅಲ್ಲಿನ ಬಾತ್ರೂಮ್ ಅಂತೂ ಸಣ್ಣದಾದ ಒಂದು ರೂಮ್. ಅಲ್ಲೇ ಕೈ ತೊಳೆದುಕೊಳ್ಳುವುದು. ಅಲ್ಲೇ ಟಾಯ್ಲೆಟ್ ಬಳಸಬೇಕು. ಸ್ನಾನ ಮಾಡುವುದು, ಹಲ್ಲು ಉಜ್ಜುವುದು, ಕಸದ ಬುಟ್ಟಿ ಎಲ್ಲಾ ಒಂದು ಚಿಕ್ಕ ಜಾಗದಲ್ಲಿ ಇತ್ತು. ಅದು ತಿಪ್ಪೆಗುಂಡಿ ಅಂದರೆ ತಿಪ್ಪೆಗುಂಡಿ. ಅದು ತುಂಬಾ ಕಷ್ಟ ಆಯ್ತು ಅಲ್ಲಿ. ಜೈಲಿನಲ್ಲಿ ಬಾರೆಕ್ಸ್ ಎನ್ನುವುದು ತುಂಬಾ ಕಷ್ಟ. ಆದರೆ ಸೆಲ್ನಲ್ಲಿ ಇರಬಹುದು ಎಂದರು.
ಇನ್ನು ನಟ ದರ್ಶನ್ ಬಗ್ಗೆ ಮಾತನಾಡಿದ ಅವರು, ಇವರಿಗೆಲ್ಲಾ ವಿಶೇಷ ಸೆಲ್ ಕೊಡುತ್ತಾರೆ, ಮಂಚ ಕೊಡುತ್ತಾರೆ, ಟಿವಿ ಕೊಡುತ್ತಾರೆ ಅಂದರೆ ಹೋಟೆಲ್ ರೂಮ್ ತರ ನೀಡುತ್ತಾರೆ ಅನಿಸುತ್ತದೆ ನನಗೆ. ಆದರೆ ಅಲ್ಲಿ ಏನಾಗಿದೆಯೋ ಗೊತ್ತಿಲ್ಲ ನಮಗೆ. ಆದರೆ ಊಟದಲ್ಲಿ ನನಗೇನೂ ಸಮಸ್ಯೆ ಆಗಿರಲಿಲ್ಲ. ಒಳ್ಳೆ ಊಟ ಜೈಲಿನ ಖೈದಿಗಳೇ ಅಡುಗೆ ಮಾಡುತ್ತಾರೆ. ಮೂರು ಹೊತ್ತು ಊಟ ಕೊಡುತ್ತಾರೆ. ರಾಗಿ ಮುದ್ದೆ ಸ್ವಲ್ಪ ಗಟ್ಟಿ ಇರುತ್ತದೆ. ಆದರೆ ತಿನ್ನಬಹುದು ಎಂದರು.
ನಿಜ ಹೇಳಬೇಕು ಅಂದರೆ ನನಗೆ ಜೈಲಿನ ಊಟ ಇಷ್ಟವಾಯ್ತು. ಆದರೆ ಅವರು ಜೈಲೂಟ ಕಷ್ಟ ಅನ್ನುತ್ತಿದ್ದಾರಂತೆ. ಅವರ ಡಯೆಟ್ ಹೇಗೆ ಇದೆಯೋ ಗೊತ್ತಿಲ್ಲ ನನಗೆ. ನಾನು ಕೂಡ ಎರಡನೇ ಸಲ ತೂಕ ಇಳಿಸಿದೆ. ಯಾಕೆಂದರೆ ಕಡಿಮೆ ಕಡಿಮೆ ತಿನ್ನುತ್ತಿದ್ದೆ. ಎಲ್ಲಾರೂ ತೂಕ ಇಳಿಸಿದರೆ ಒಳ್ಳೆಯದು ಅನಿಸುತ್ತದೆ. ಉತ್ತಮ ಆರೋಗ್ಯ ಇರುತ್ತದೆ. ಜೊತೆಯಲ್ಲಿ ಶಿಸ್ತು ಬದ್ಧ ಜೀವನ ಇರುತ್ತದೆ ಜೈಲಿನಲ್ಲಿ. ಅವರಿಗೆ ಒಂದು ಮನಪರಿವರ್ತನೆ ಆಗಲಿ. ಅವರು ಜೈಲಿನಿಂದ ಬಂದ ಮೇಲೆ ಉತ್ತಮ ಹಾದಿಯಲ್ಲಿ ನಡೆಯಲಿ ಅಂತಾ ನಾವು ಆಶಿಸುತ್ತೇವೆ ಎಂದು ದರ್ಶನ್ ಬಗ್ಗೆ ಮಾತನಾಡಿದರು.












Click it and Unblock the Notifications