ಬೆಂಗಳೂರಿನಲ್ಲಿ ಮಳೆ, ಇನ್ನೂ ಎರಡು ದಿನ ಅಬ್ಬರ ಸಾಧ್ಯತೆ
ಬೆಂಗಳೂರು, ಏಪ್ರಿಲ್ 30: 'ಫನಿ' ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ವರುಣ ಆರ್ಭಟಿಸಿದ್ದಾನೆ. ಮಂಗಳವಾರ ಸಂಜೆ ಬಳಿಕ ನಗರದ ಅನೇಕ ಭಾಗಗಳಲ್ಲಿ ಮಳೆ ಅಬ್ಬರಿಸಿದೆ. ಇದರಿಂದ ಹಲವು ದಿನಗಳಿಂದ ತೀವ್ರ ಸೆಕೆಯಿಂದ ತತ್ತರಿಸಿದ್ದ ನಗರದ ಜನತೆಗೆ 'ಫನಿ' ಕೃಪೆ ತಂಪು ನೀಡಿದೆ.
ಸಂಜೆ ಏಳು ಗಂಟೆ ಬಳಿಕ ಹಲವೆಡೆ ಮಿಂಚು, ಗುಡುಗು ಮತ್ತು ಸಿಡಿಲು ಸಹಿತ ಮಳೆ ಧಾರಾಕಾರವಾಗಿ ಸುರಿದಿದೆ. ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ, ಹಲವೆಡೆ ಜೋರಾಗಿ ಬಂದಿದೆ.
ಯಲಹಂಕ, ಹೆಬ್ಬಾಳ, ಸದಾಶಿವನಗರ, ಯಶವಂತಪುರ, ಶಿವಾಜಿನಗರ, ರಾಜಾಜಿನಗರ, ವಿಜಯನಗರ, ಸಹಕಾರ ನಗರ ಮುಂತಾದೆಡೆ ಉತ್ತಮ ಮಳೆಯಾಗಿದೆ.

ವಿವಿಧೆಡೆ ಗಾಳಿಯೂ ಜೋರಾಗಿ ಇದ್ದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದ ಕ್ರಿಕೆಟ್ ಅಭಿಮಾನಿಗಳು ಮಳೆಯಲ್ಲಿ ನೆನೆಯವಂತಾಯಿತು. ಮಳೆಯಿಂದಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗದ ಕಾರಣ ಅಭಿಮಾನಿಗಳು ಬೇಸೆತ್ತರು.
ಫನಿ ಚಂಡಮಾರುತವು ಬಂಗಾಳ ಕೊಲ್ಲಿಯಿಂದ ದಕ್ಷಿಣ ಭಾರತದತ್ತ ಧಾವಿಸುತ್ತಿದೆ. ಇದರಿಂದ ದಕ್ಷಿಣ ಭಾರತದ ಹಲವೆಡೆ ಮಳೆ ಹೆಚ್ಚುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ವರುಣನ ಅಬ್ಬರ ಇರಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಡಲಾಗಿದೆ.
ರಾಜ್ಯದ ಅನೇಕ ಭಾಗಗಳಲ್ಲಿ ಕೂಡ ಮಳೆ ಸೋಮವಾರ ಜೋರಾಗಿ ಸುರಿದಿತ್ತು. ಮಂಗಳವಾರ ಕೂಡ ವರ್ಷಧಾರೆ ಸಿಂಚನ ತಂಪೆರೆದಿತ್ತು. ಚಾಮರಾಜನಗರ, ಬಳ್ಳಾರಿ ಮುಂತಾದೆಡೆ ಮಳೆ ಅನಾಹುತ ಸೃಷ್ಟಿಸಿದೆ.












Click it and Unblock the Notifications