ಕಬ್ಬನ್ ಉದ್ಯಾನ ನಿಶ್ಯಬ್ದ ವಲಯ: ಹಾರ್ನ್ ಮಾಡಿದರೆ ಸವಾರರಿಗೆ ದಂಡ!
ಬೆಂಗಳೂರು, ನವೆಂಬರ್ 16: ಬೆಂಗಳೂರು ಹೃದಯ ಭಾಗದಲ್ಲಿರುವ ಕಬ್ಬನ್ ಉದ್ಯಾನವನನ್ನು 'ನಿಶ್ಯಬ್ದ ವಲಯ'ವೆಂದು ಈ ಮೊದಲೇ ಘೋಷಿಸಲಾಗಿತ್ತು. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಅದನ್ನು ಈಗ ಉದ್ಯಾನದಲ್ಲಿ ಜಾರಿಗೆ ತರಲು ಮುಂದಾಗಿದೆ.
'ನಿಶ್ಯಬ್ದ ವಲಯ' ಜಾರಿಯಾದ ನಂತರ ಕಬ್ಬನ್ ಉದ್ಯಾನದ ಆವರಣದಲ್ಲಿ ಸಂಚಾರಿಸುವಾಗ ವಾಹನಗಳ ಹಾರ್ನ್ ಹೊಡೆಯವುದು ನಿಷೇಧವಾಗಲಿದೆ. ಒಂದು ವೇಳೆ ಹಾರ್ನ್ ಹೊಡೆದವರು ಸವಾರರು ದಂಡ ತೆರಬೇಕಾಗುತ್ತದೆ.
ತೋಟಗಾರಿಕೆ ಇಲಾಖೆಯು 2020ರಲ್ಲಿ ಉದ್ಯಾನವನ್ನು ನಿಶ್ಯಬ್ದ ವಲಯವನ್ನಾಗಿ ಘೋಷಿಸಿತ್ತು. ಅದೇ ವರ್ಷ ಕೋವಿಡ್ ಉಲ್ಬಣಿಸಿದ್ದರಿಂದ ಈ ಘೋಷಣೆ ಎರಡು ವರ್ಷಗಳ ಕಾಲ ಘೋಷಣೆಯಾಗೇ ಉಳಿಯಿತು. ಹೀಗಾಗಿ ಯೋಜನೆ ಅನುಷ್ಠಾನ ಗಂಭೀರವಾಗಿ ಪರಿಗಣಿಸಲು ಆಗಿರಲಿಲ್ಲ. ಸದ್ಯ ಕೋವಿಡ್ ಭೀತಿ ಕಡಿಮೆಯಾಗಿದ್ದರಿಂದ ತೋಟಗಾರಿಕೆ ಇಲಾಖೆ ಈಗ ಅನುಷ್ಠಾನಕ್ಕೆ ತರುತ್ತಿದೆ.

ಕಬ್ಬನ್ ಉದ್ಯಾನದ ಎಂಟು ಪ್ರವೇಶ ದ್ವಾರಗಳ ಸಮೀಪ ಹಾಗೂ ಉದ್ಯಾನದಲ್ಲಿನ ಕೇಂದ್ರ ಗ್ರಂಥಾಲಯ ಸೇರಿ 16 ನಿಗದಿತ ಪ್ರದೇಶದಲ್ಲಿ ನಿಶ್ಯಬ್ದ ವಲಯ ಎಂಬ ನಾಮಫಲಕಗಳನ್ನು ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಇದಾದ ಬಳಿಕ ಇಲಾಖೆ ಈ ಕುರಿತಂತೆ ತಿಂಗಳ ಕಾಲ ಜಾಗೃತಿ ಮೂಡಿಸಲಿದೆ.
ನಿಶ್ಯಬ್ದ ವಲಯದ ಬಗ್ಗೆ 1 ತಿಂಗಳು ಜಾಗೃತಿ
ಈ ಬಗ್ಗೆ ವಿವರಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ. ಬಾಲಕೃಷ್ಣ ಅವರು, ಒಂದು ತಿಂಗಳ ನಂತರ ನಿಶ್ಯಬ್ದ ವಲಯ ಯೋಜನೆ ನಿಯಮಗಳು ಕಡ್ಡಾಯವಾಗಿ ಅನ್ವಯಿಸುತ್ತವೆ. ಆಗ ಉದ್ಯಾನದಲ್ಲಿ ವಾಹನ ಸವಾರರು ಹಾರ್ನ್ ಮಾಡಿದರೆ ಉಲ್ಲಂಘಿಸಿದಂಗಾಗುತ್ತದೆ. ಅದಕ್ಕಾಗಿ ಸವಾರರು ದಂಡ ತೆರಬೇಕಾಗುತ್ತದೆ ಎಂದರು.

ನಿತ್ಯ ಕಬ್ಬನ್ ಉದ್ಯಾನಕ್ಕೆ ಆಗಮಿಸುವ ವಾಯುವಿಹಾರಿಗಳು, ನಾಗರಿಕರು, ಪ್ರವಾಸಿಗರು ಹಾಗೂ ಮುಖ್ಯವಾಗಿ ಪಕ್ಷಿಗಳಿಗೆ ವಾಹನಗಳ ಹಾರ್ನ್ ಶಬ್ದದಿಂದ ಕಿರಿಕಿರಿ ಉಂಟಾಗುತ್ತದೆ. ಈ ಕುರಿತು ಸಾರ್ವಜನಿಕರಿಂದಲೂ ಅನೇಕ ದೂರುಗಳು ನೀಡಿದ್ದಾರೆ. ಇದನ್ನು ಪರಿಗಣಿಸಿ ಉದ್ಯಾನದಲ್ಲಿ ನಿಶ್ಯಬ್ದ ವಲಯ ಯೋಜನೆ ಜಾರಿಗೆ ತರಲು ನಗರ ಸಂಚಾರ ಪೊಲೀಸರೊಂದಿಗೆ ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.
ಕಬ್ಬನ್ ಉದ್ಯಾನವು ಅನೇಕ ವಿಧದ ಪ್ರಾಣಿ-ಪಕ್ಷಿಗಳ ನೆಚ್ಚಿನ ತಾಣವಾಗಿದೆ. ವಾಹನಗಳ ಹಾರ್ನ್ ಕರ್ಕಶ ಶಬ್ದದಿಂದ ಪಕ್ಷಿಗಳು ಭಯಗೊಳ್ಳುತ್ತವೆ. ಉದ್ಯಾನದಲ್ಲಿರಲು ಅವುಗಳಿಗೆ ತೊಂದರೆ ಉಂಟು ಮಾಡಿದಂತಾಗುತ್ತದೆ. ಹೀಗಾಗಿ ಉದ್ಯಾನದ ಪ್ರಮುಖ ಸ್ಥಳ ಮತ್ತು ಹೆಚ್ಚು ವಾಹನಗಳು ಓಡಾಡುವ ಸ್ಥಳಗಳಲ್ಲಿ ನಿಶ್ಯಬ್ದ ವಾತಾವರಣ ನಿರ್ಮಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications