ಸುಳಿವು ಇಲ್ಲದ ಕೊಲೆ ಪ್ರಕರಣದ ರಹಸ್ಯ ಪತ್ತೆ ಮಾಡಿದ ಹೆಣ್ಣೂರು ಪೊಲೀಸರು
ಬೆಂಗಳೂರು, ಜೂನ್ 07: ಮೊಬೈಲ್ ಬಳಸದೇ ಯಾವುದೇ ಅಪರಾಧ ಕೃತ್ಯ ಮಾಡಿದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ತುಂಬಾ ಕಷ್ಟ. ಯಾವುದೇ ಸುಳಿವು ಇಲ್ಲದ ಕೊಲೆ ರಹಸ್ಯವನ್ನು ಹೆಣ್ಣೂರು ಪೊಲೀಸರು ಪತ್ತೆ ಮಾಡಿದ್ದಾರೆ. ಹಂತಕ ಆರೋಪಿ ಧರಿಸಿದ್ದ ಚಪ್ಪಲಿ ತಳದಲ್ಲಿನ ಡಿಸೈನ್ ಆಧರಿಸಿ ಬಾಬುಸಾಬ್ ಪಾಳ್ಯ ಪಾರ್ಕ್ನಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪತ್ತೆ ಮಾಡಿದ್ದಾರೆ.
ಮಾಲೂರು ಮೂಲದ ಸತೀಶ್ ಬಂಧಿತ ಆರೋಪಿ. ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಈತ ಪಾರ್ಕ್ನಲ್ಲಿ ಮಲಗುವ ವಿಚಾರವಾಗಿ ಜಗಳ ತೆಗೆದು ಅಶೋಕ್ ಎಂಬಾತನ್ನು ಕೊಲೆ ಮಾಡಿದ್ದ. ಮಾಲೂರು ಮೂಲದ ಸತೀಶ್ ನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಮೇ. 15 ರಂದು ಬಾಬುಸಾಬ್ ಪಾಳ್ಯದ ಪಾರ್ಕ್ ನಲ್ಲಿ ಕೊಲೆ ಪ್ರಕರಣ ವರದಿಯಾಗಿತ್ತು.
ನಡೆದಿದ್ದ ಘಟನೆ: ಮೇ. 15 ರಂದು ಬಾಬುಸಾಬ್ ಪಾಳ್ಯದ ಪಾರ್ಕ್ನಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇದನ್ನು ನೋಡಿ ಗಾಬರಿಗೊಂಡ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹೆಣ್ಣೂರು ಪೊಲೀಸರಿಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಮೃತ ವ್ಯಕ್ತಿ ಕಲುಬರ್ಗಿ ಮೂಲದ ಅಶೋಕ್ ಎಂಬುದನ್ನು ಪತ್ತೆ ಮಾಡಿದ್ದರು.
ಹನ್ನೆರಡು ಬಾರಿ ಚಾಕು ಇರಿದು ಕೊಲೆ ಮಾಡಿದ್ದ ಹಂತಕನ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ. ಘಟನೆ ವೇಳೆ ರಕ್ತದ ಮೇಲೆ ಕಾಲಿಟ್ಟಿದ್ದ ಹಂತಕನ ಚಪ್ಪಲಿ ತಳದಲ್ಲಿನ ಗುರುತು ಕಲ್ಲಿನ ಮೇಲೆ ಚಿತ್ರ ಬಿದ್ದಿತ್ತು. ಅದರ ಜಾಡು ಹಿಡಿದು ಬಾಬುಸಾಬ್ ಪಾಳ್ಯದ ಪಾರ್ಕ್ ಸಮೀಪ ವಾಸವಾಗುತ್ತಿದ್ದ ಸುಮಾರು 50 ಮಂದಿಯ ಚಪ್ಪಲಿ ತಳದ ಗುರುತು ಆಧರಿಸಿ ತನಿಖೆ ಆರಂಭಿಸಿದ್ದರು.
ಘಟನಾ ಸ್ಥಳದಲ್ಲಿ ಮೃತ ವ್ಯಕ್ತಿಯ ರಕ್ತ ತುಳಿದು ಓಡಾಡಿದ್ದ ಚಪ್ಪಲಿಯ ಕಲೆ ಬಿದ್ದಿತ್ತು. ಉಳಿದಂತೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಚಪ್ಪಲಿಯ ರಕ್ತದ ಕಲೆ ಜಾಡು ಹಿಡಿದು ಸುಮಾರು 50 ಮಂದಿಯ ಚಪ್ಪಲಿಯನ್ನು ನೀರಿನಲ್ಲಿ ತೊಳಿಸಿ ಮರಳಿನ ಮೇಲೆ ಹೆಜ್ಜೆ ಇರಿಸಿ ತಪಾಸಣೆ ನಡಸಿದರು. ಈ ವೇಳೆ ಮೃತ ವ್ಯಕ್ತಿ ಅಶೋಕ್ ವಿವರ ಸಿಕ್ಕಿತ್ತು.
Recommended Video
ಇದರದ್ದೇ ಜಾಡು ಹುಡುಕಿ ತನಿಖೆ ನಡೆಸಿದಾಗ ಮಾಲೂರುಮೂಲದ ಆರೋಪಿ ಸತೀಶ್ ಸಿಕ್ಕಿಬಿದ್ದಿದ್ದಾನೆ. ಸಂಶಯದ ಆಧಾರದ ಮೇಲೆ ಸತೀಶ್ ನನ್ನು ಪತ್ತೆ ಮಾಡಿ ಹೆಜ್ಜೆ ಗುರುತು ಪಡೆದು ಪರಿಶೀಲಿಸಿದಾಗ ಹೋಲಿಕೆಯಾಗಿದೆ. ಮಾತ್ರವಲ್ಲ ನಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಸಿದಾಗ ಕಲಬುರ್ಗಿ ಮೂಲದ ಅಶೋಕ್ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಚಿಂದಿ ಆಯ್ದು ಬಂದ ಹಣದಲ್ಲಿ ಊಟ ಮಾಡಿ ಬಾಬುಸಾಬ್ ಪಾಳ್ಯದ ಪಾರ್ಕ್ನಲ್ಲಿ ಮಲಗುತ್ತಿದ್ದ. ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಮಾಲೂರು ಮೂಲದ ಸತೀಶ್ ಕೂಡ ಇದೇ ಪಾರ್ಕ್ನಲ್ಲಿ ಮಲಗುತ್ತಿದ್ದ. ಮಲಗುವ ವಿಚಾರವಾಗಿ ಜಗಳ ಆಡಿಕೊಂಡಿದ್ದಾರೆ. ಈ ವೇಳೆ ಸತೀಶ್ ಕುಪಿತಗೊಂಡು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹೆಣ್ಣೂರು ಪೊಲೀಸರ ತನಿಖಾ ಶೈಲಿಯನ್ನು ಪೊಲೀಸ್ ಅಧಿಕಾರಿಗಳು ಪ್ರಶಂಸೆ ನೀಡಿದ್ದಾರೆ.