ಜನಶ್ರೀ ಮಡಿಲಿಗೆ ಆಚಾರ್ಯ ಮಾಧ್ಯಮ ಕಪ್
ಬೆಂಗಳೂರು, ಫೆ.24: ಮಾಧ್ಯಮ ಸಂಸ್ಥೆಗಳಿಗಾಗಿ ಆಚಾರ್ಯ ಇನ್ಸ್ಟಿಟ್ಯೂಟ್ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಭರ್ಜರಿಯಾಗಿ ಕೊನೆಗೊಂಡಿದೆ. ಮಾಧ್ಯಮ ಪ್ರತಿನಿಧಿಗಳು ತಮ್ಮ ಕ್ರೀಡಾ ಪ್ರತಿಭೆ ಅನಾವರಣ ಮಾಡಲು ಈ ಟೂರ್ನಿ ಉತ್ತಮ ವೇದಿಕೆ ಒದಗಿಸಿದೆ.
ಆಚಾರ್ಯ ಮಾಧ್ಯಮ ಕಪ್ ನ ಅಂತಿಮ ಹಣಾಹಣಿಯಲ್ಲಿ ಸುವರ್ಣ ಸುದ್ದಿ ವಾಹಿನಿ 24 X7 ತಂಡವನ್ನು ಸೋಲಿಸಿದ ಜನಶ್ರೀ ವಾಹಿನಿ ಮೀಡಿಯಾ ಕಪ್ ಎತ್ತಿ ಸಂಭ್ರಮದಿಂದ ಕುಣಿದಾಡಿದರು. ಫೈನಲ್ ಪಂದ್ಯದಲ್ಲಿ ಇನ್ನೂ 6 ಎಸೆತ ಬಾಕಿ ಇರುವಂತೆಯೇ 12 ಓವರ್ ಗಳಲ್ಲಿ 57 ರನ್ ಚೆಚ್ಚಿ ಗೆಲುವು ಸಾಧಿಸಿದರು.
ಟಿ20 ಕ್ರಿಕೆಟ್ ವಿಶ್ವಕಪ್ ಮಹಿಳಾ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಕರುಣಾ ಜೈನ್ ಹಾಗೂ ವನಿತಾ ಅವರು ಫೈನಲ್ ಪಂದ್ಯ ವೀಕ್ಷಿಸಿದ ಅತಿಥಿಗಳಾಗಿದ್ದರು. ಇವರ ಜತೆಗೆ ಡೆಕ್ಕನ್ ಹೆರಾಲ್ಡ್ ನ ಹಿರಿಯ ಕ್ರೀಡಾ ಸಂಪಾದಕ ಜೋಸೆಫ್ ಹೂವರ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಪ್ರತಿನಿಧಿಗಳು, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಿನ್ಸಿಪಾಲ್ ಡಾ. ಮಹೇಶಪ್ಪ ಅವರು ಹಾಜರಿದ್ದರು.
ಮಾಧ್ಯಮ ಕಪ್ ಗೆದ್ದ ಜನಶ್ರೀ ತಂಡಕ್ಕೆ 30 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ, ರನ್ನರ್ ಅಪ್ ಸುವರ್ಣ 24 X7 ತಂಡಕ್ಕೆ 20 ಸಾವಿರ ರು ನಗದು ಬಹುಮಾನ ಸಿಕ್ಕಿದೆ.

ಟೂರ್ನಮೆಂಟ್ ಪ್ರಶಸ್ತಿಗಳು:
* ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ : ಶ್ರೀಧರ್ (ಜನಶ್ರೀ ನ್ಯೂಸ್)
* ಶ್ರೇಷ್ಠ ಬೌಲರ್ : ಮನೋಜ್ (ಕಸ್ತೂರಿ 24 X 7)
* ಶ್ರೇಷ್ಠ ಫೀಲ್ಡರ್ : ರಮಾಕಾಂತ್ (ಜನಶ್ರೀ ನ್ಯೂಸ್)
ಸೆಮಿಫೈನಲ್ :
* ಸುವರ್ಣ 24 X 7 vs ಉದಯ ಟಿವಿ
* ಕಸ್ತೂರಿ vs ಜನಶ್ರೀ ನ್ಯೂಸ್
ಫೆ. 20, 21 ಹಾಗೂ 22 ರಂದು ಟೆನ್ನಿಸ್ ಬಾಲ್ ನಾಕೌಟ್ ಟೂರ್ನಮೆಂಟ್ ನಡೆಯಿತು. ಫೆ.22ರಂದು ಉಪಾಂತ್ಯ ಹಾಗೂ ಅಂತಿಮ ಹಣಾಹಣಿ ನಡೆದಿತ್ತು. ಎಲ್ಲಾ ಪಂದ್ಯಗಳನ್ನು ವೆಬ್ ಲಿಂಕ್ ಮೂಲಕ ನೇರ ಮಾಹಿತಿ CricHQ ಅಪ್ಲಿಕೇಷನ್ ಮೂಲಕ ಎಲ್ಲರಿಗೂ ಕಾಲ ಕಾಲಕ್ಕೆ ತಲುಪಿಸಿದ್ದು ಈ ಬಾರಿ ವಿಶೇಷವಾಗಿತ್ತು. ಆಪಲ್ ಐಸ್ಟೋರ್, ಗೂಗಲ್ ಪ್ಲೇ ನಲ್ಲಿ CricHQ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಮಾಧ್ಯಮ ಕಪ್ ಲೈವ್ ವರದಿಯನ್ನು ಅನೇಕ ಮಂದಿ ಪಡೆದುಕೊಂಡರು.
ಆಚಾರ್ಯ ಇನ್ಸ್ ಸ್ಟಿಟ್ಯೂಟ್ ಸಂಸ್ಥೆ ಆಯೋಜನೆಯ ವಾರ್ಷಿಕ ಹಬ್ಬದ ಅಂಗವಾಗಿ ಮಾಧ್ಯಮ ವಲಯಕ್ಕಾಗಿ ವಿಶೇಷ ಕ್ರಿಕೆಟ್ ಟೂರ್ನಮೆಂಟ್ ಪ್ರತಿ ವರ್ಷ ನಡೆಸಲಾಗುತ್ತದೆ. ಈ ಮಾಧ್ಯಮ ಕಪ್ ಟೂರ್ನಮೆಂಟ್ ಗೆ ಒನ್ಇಂಡಿಯಾ ಸಂಸ್ಥೆ ಅಧಿಕೃತ ಆನ್ ಲೈನ್ ಮೀಡಿಯಾ ಪಾರ್ಟನರ್ ಆಗಿತ್ತು.












Click it and Unblock the Notifications