ಚಿಮಣಿಯಲ್ಲಿ ಮಾಲಿನ್ಯ ತಪಾಸಣಾ ವ್ಯವಸ್ಥೆ ಇಲ್ಲದಿದ್ದರೆ ಕಾರ್ಖಾನೆ ಬಂದ್
ಬೆಂಗಳೂರು, ಮಾರ್ಚ್ 07: ಅಪಾಯಕಾರಿ ರಾಸಾಯನಿಕಯುಕ್ತ ಹೊಗೆ ಉಗುಳುವ ಕಾರ್ಖಾನೆಗಳ ಚಿಮಣಿಗಳಲ್ಲಿ ಮಾಲಿನ್ಯ ಪ್ರಮಾಣ ತಪಾಸಣೆ ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳದಿದ್ದರೆ ಅಂಥ ಕಾರ್ಖಾನೆಗಳನ್ನು ಮುಚ್ಚುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಸಂಬಂಧ ನಗರದಲ್ಲಿರುವ ಕಾರ್ಖಾನೆಗಳ ಚಿಮಣಿ ಪರಿಶೀಲನೆ ನಡೆಸಿ ಮಾರ್ಚ್ 21ರೊಳಗೆ ವರದಿ ನೀಡುವಂತೆಯೂ ಸೂಚಿಸಿದೆ. ಇದರ ಪರಿಣಾಮ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾರ್ಖಾನೆಗಳ ಚಿಮಣಿ ತಪಾಸಣೆ ಆರಂಭಿಸಿದ್ದಾರೆ. ನವದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದ ಬಳಿಕ ನಗರಗಳಲ್ಲಿ ಮಾಲಿನ್ಯ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕೈಗೊಂಡಿದೆ.

ಇತ್ತೀಚೆಗೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪರಿಶೀಲನೆ ನಡೆಸಿದಾಗ ಕಾರ್ಖಾನೆಗಳ ಚಿಮಣಿಗಳಿಂದ ಹೊರಹೊಮ್ಮುವ ಹೊಗೆಯನ್ನು ಪರಿಶೀಲಿಸುವ ವಿಚಾರದಲ್ಲಿ ರಾಜ್ಯ ಮಂಡಳಿಗಳು ಅಸಡ್ಡೆ ತೋರಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲೂ ಸರಿಯಾಗಿ ಪರಿಶೀಲನೆ ನಡೆಸದಿರುವುದರಿಂದ ಬೆಂಗಳೂರಿನಲ್ಲಿ ಚಿಮಣಿಗಳಿಂದ ಆಕಾಶಕ್ಕೆ ಹೊಗೆ ಉಗುಳುವ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ನಗರದ ಮಾಲಿನ್ಯಕ್ಕೆ ಕಡಿವಾಣ ಹಾಕಲು ಇಲ್ಲಿಯೂ ಪರಿಶೀಲಿಸುವಂತೆ ಸೂಚಿಸಲಾಗಿದೆ.












Click it and Unblock the Notifications