ಕೊರೊನಾ ಇದ್ದರೂ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲ್ಲ: ಭಾಸ್ಕರ್ ರಾವ್
ಬೆಂಗಳೂರು, ಮಾರ್ಚ್ 10: ಕರ್ನಾಟಕದಲ್ಲಿ ಇದುವರೆಗೂ ನಾಲ್ಕು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ನಿನ್ನೆಯವರೆಗೂ ರಾಜ್ಯದಲ್ಲಿ ಕೇವಲ ಒಂದು ಪ್ರಕರಣ ಖಚಿತವಾಗಿತ್ತು. ಇಂದು ಮತ್ತೆ ಮೂರು ಜನರಿಗೆ ಸೋಂಕು ತಗುಲಿರುವುದು ಪಕ್ಕಾ ಆಗಿದ್ದು, ಬೆಂಗಳೂರಿನಲ್ಲಿ ಆತಂಕ ಹೆಚ್ಚಾಗಿದೆ.
ಕೊರೊನಾ ಭೀತಿ ಪೊಲೀಸ್ ಇಲಾಖೆಗೂ ತಟ್ಟಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ವಿಶೇಷ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಿ ಎಂದು ಸೂಚಿಸಲಾಗಿದೆ. ಕೊರೊನಾ ಹರಡುವಿಕೆ ಹಿನ್ನೆಲೆ ಪೊಲೀಸ್ ಇಲಾಖೆ ಜೊತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿ ಕೆಲವು ಸೂಚನೆಗಳನ್ನು ನೀಡಿದ್ದಾರೆ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಭಾಸ್ಕರ್ ರಾವ್ 'ಕೊರೊನಾ ಪತ್ತೆಯಾದರು ಡಿಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲ್ಲ' ಎಂದಿದ್ದಾರೆ. ಕೊರೊನಾ ಭೀತಿ ಇರುವುದರಿಂದ ಡ್ರಿಂಕ್ ಅಂಡ್ ಡ್ರೈವ್ ಮಾಡಲು ಪೊಲೀಸರು ಹಿಂದೇಟು ಹಾಕಬಹುದು ಎಂಬ ನಿರೀಕ್ಷೆ ಇತ್ತು. ಈ ಬಗ್ಗೆ ಭಾಸ್ಕರ್ ಪ್ರತಿಕ್ರಿಯಿಸಿದ್ದು, 'ಕೊರೊನಾ ಪತ್ತೆಯಾದರೂ ಮದ್ಯಪಾನ ತಪಾಸಣೆ ನಿಲ್ಲಿಸುವುದಿಲ್ಲ. ಕೊರೊನಾಗಿಂತ ಡ್ರಿಂಕ್ ಅಂಡ್ ಡ್ರೈವ್ ಅಪಾಯಕಾರಿ' ಎಂದು ಹೇಳಿದ್ದಾರೆ.

'ಪೊಲೀಸರು ಜನರ ಜೊತೆ ಹೆಚ್ಚು ಬೆರೆಯುತ್ತಾರೆ. ಹಾಗಾಗಿ, ಪೊಲೀಸರಿಗೆ ಮಾಸ್ಕ್ ಧರಿಸಿ ಎಂದು ಸೂಚಿಸಿದ್ದೇವೆ. ಯಾವುದೇ ರೋಗ ಇದ್ದರೂ ರಜೆ ಪಡೆಯಲಿ ತಿಳಿಸಿದ್ದೇವೆ. ಹಸ್ತಲಾಘವ ಬೇಡ ಎಂದು ಸಲಹೆ ನೀಡಿದ್ದೀವಿ. ಮಾತನಾಡುವ ವೇಳೆ ಅಂತರ ಕಾಯ್ದುಕೊಳ್ಳಬೇಕಿದೆ. ಪೊಲೀಸ್ ಠಾಣೆಯಲ್ಲೂ ಶುಚಿತ್ವ ಕಾಪಾಡಿಕೊಳ್ಳಲು ಸೂಚಿಸಿದ್ದೇನೆ' ಎಂದಿದ್ದಾರೆ.
'ಇನ್ನು ಹೆಚ್ಚು ಜನರು ಸೇರುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ. ಅದಕ್ಕಾಗಿ ಸದ್ಯಕ್ಕೆ ಯಾವುದೇ ಪ್ರತಿಭಟನೆ, ಹೋರಾಟಕ್ಕೆ ಅನುಮತಿ ಕೊಡಬೇಡಿ ಎಂದು ವಿನಂತಿಸಿದ್ದೇವೆ' ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ತಪ್ಪು ಸಂದೇಶಗಳನ್ನು ಹರಡಿಸುವುದು, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುವುದು, ಜನರನ್ನು ಧಿಕ್ಕು ತಪ್ಪಿಸುವಂತಹ ಕೆಲಸಗಳಿಗೆ ಪ್ರೋತ್ಸಾಹ ಕೊಡಬೇಡಿ ಮತ್ತು ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.












Click it and Unblock the Notifications