ಬೆಂಗಳೂರಿನ ಟೆಕ್ಕಿಗೆ ಕೊರೊನಾ: ಕಂಪನಿ ನೌಕರರಿಗೆ ವರ್ಕ್ ಫ್ರಮ್ ಹೋಮ್
ಬೆಂಗಳೂರು, ಮಾರ್ಚ್ 10: ವಿಶ್ವದಾದ್ಯಂತ ತೀವ್ರ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಸೋಂಕು ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಬೆಂಗಳೂರಿನ ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ಮಾರ್ಚ್ 1 ರಂದು ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ ಆದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಗೆ ಕೊರೊನಾ ಸೋಂಕು ತಗುಲಿದೆ. ಟೆಕ್ಕಿ, ಆತನ ಪತ್ನಿ, ಮಗಳು ಮತ್ತು ಚಾಲಕನಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರನ್ನೂ ಬೆಂಗಳೂರಿನ ರಾಜೀವ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತ್ಯೇಕ ವಾರ್ಡಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಕಾರ್ಮೋಡ: ಬೆಂಗಳೂರಲ್ಲಿ 4, ಹಾಗಾದ್ರೆ ಭಾರತದಲ್ಲಿ ಎಷ್ಟು?
ಈ ಮಧ್ಯೆ ಕೊರೊನಾ ಸೋಂಕಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿ, ತನ್ನ ನೌಕರರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿದೆ. ಇಂದಿನಿಂದ 14 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಕಂಪನಿ ಸೂಚನೆ ನೀಡಿದೆ.
ಪತ್ರ ಬರೆದಿರುವ ಕಂಪನಿಯ ಅಧ್ಯಕ್ಷ
ಬೆಂಗಳೂರಿನ ದೊಮ್ಲೂರಿನಲ್ಲಿರುವ ಕಂಪನಿಯೊಂದರಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಕೆಲಸ ಮಾಡುತ್ತಿದ್ದರು. ಅಮೇರಿಕಾದಿಂದ ವಾಪಸ್ ಆದ ಆ ವ್ಯಕ್ತಿಗೆ ಕೊರೊನಾ ಪಾಸಿಟೀವ್ ಕನ್ಫರ್ಮ್ ಆಗುತ್ತಿದ್ದಂತೆಯೇ, ತನ್ನೆಲ್ಲ ನೌಕರರಿಗೆ ಕಂಪನಿಯ ಅಧ್ಯಕ್ಷ ಮತ್ತು ಎಂ.ಡಿ ಒಂದು ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಕಂಪನಿ ಅಧ್ಯಕ್ಷ ಏನಂತ ಹೇಳಿದ್ದಾರೆ.?
''ನಮ್ಮ ಬೆಂಗಳೂರಿನ ತಂಡದ ಸದಸ್ಯರೊಬ್ಬರಿಗೆ COVID-19 ಇರುವುದು ದೃಢಪಟ್ಟಿದೆ. ಹೀಗಾಗಿ, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಖಚಿತ ಪಡಿಸುವವರೆಗೂ ಅವರು (ಟೆಕ್ಕಿ) ಕೆಲಸಕ್ಕೆ ಹಾಜರಾಗುವುದಿಲ್ಲ. ಅವರ (ಟೆಕ್ಕಿ) ಕುಟುಂಬದ ಜೊತೆ ನಮ್ಮ ತಂಡ ಸಂಪರ್ಕದಲ್ಲಿದೆ. ಅವರಿಗೆ (ಟೆಕ್ಕಿ) ಬೇಕಾದ ಸಹಾಯವನ್ನು ನಾವು ಮಾಡುತ್ತೇವೆ'' ಎಂದು ಪತ್ರದಲ್ಲಿ ಕಂಪನಿಯ ಅಧ್ಯಕ್ಷ ತಿಳಿಸಿದ್ದಾರೆ.
ಬೆಂಗಳೂರಲ್ಲಿ 4 ಕೊರೊನಾ ಪ್ರಕರಣಗಳು ದೃಢ: ಹೆಚ್ಚಿದ ಆತಂಕ
ಬೇರೆ ಯಾವುದೂ ಮುಖ್ಯ ಅಲ್ಲ
''ನಮ್ಮ ತಂಡದ ಸುರಕ್ಷೆ ಮತ್ತು ಆರೋಗ್ಯಕ್ಕಿಂತ ಬೇರೆ ಯಾವುದೂ ನಮಗೆ ಮುಖ್ಯ ಅಲ್ಲ'' ಅಂತ ತಿಳಿಸಿರುವ ಕಂಪನಿಯ ಅಧ್ಯಕ್ಷ ಸೋಂಕಿತ ಟೆಕ್ಕಿ ಜೊತೆಗೆ ಕೆಲಸ ಮಾಡುತ್ತಿದ್ದ ಎಲ್ಲಾ ನೌಕರರಿಗೆ ಮುಂದಿನ 14 ದಿನಗಳ ಕಾಲ (ಮಾರ್ಚ್ 24 ರವರೆಗೆ) ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದಾರೆ.
ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!
ಅನಾರೋಗ್ಯ ಉಂಟಾದರೆ ಆಫೀಸಿಗೆ ಬರಬೇಡಿ
''ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲದವರು, ಆಫೀಸ್ ನಲ್ಲಿ ಸ್ವಚ್ಛತೆ ಕಾಪಾಡಿ. ಹ್ಯಾಂಡ್ ಸ್ಯಾನಿಟೈಝರ್ ಬಳಸಿ ಆಗಾಗ ಕೈ ತೊಳೆದುಕೊಳ್ಳಿ. ಕಣ್ಣು, ಮೂಗು ಮತ್ತು ಮುಖವನ್ನು ಮುಟ್ಟಿಕೊಳ್ಳಬೇಡಿ. ಆರೋಗ್ಯದಲ್ಲಿ ಏರುಪೇರಾದಾಗ ಮನೆಯಲ್ಲಿರಿ. ಆಫೀಸ್ ಗೆ ಬರಬೇಡಿ'' ಎಂದು ಪತ್ರದಲ್ಲಿ ಕಂಪನಿಯ ಅಧ್ಯಕ್ಷ ಉಲ್ಲೇಖಿಸಿದ್ದಾರೆ.