ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು: ಬೆಂಗಳೂರಿನಲ್ಲಿ ಸೀಲ್ಡೌನ್ ಜಾರಿ!
ಬೆಂಗಳೂರು, ಏ, 10: ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37 ಜನರು ಕೋವಿಡ್-19ಗೆ ಬಲಿಯಾಗಿದ್ದು, ಒಂದೇ ದಿನದಲ್ಲಿ 896 ಸೋಂಕಿತ ಹೊಸ ಪ್ರಕರಣಗಳು ದೃಢಪಟ್ಟಿವೆ. ನಮ್ಮ ರಾಜ್ಯದಲ್ಲಿಯೂ ಕಳೆದ 24 ಗಂಟೆಗಳಲ್ಲಿ 10 ಹೊಸ ಪ್ರಕರಣಗಳು ದೃಢಪಟ್ಟಿವೆ. ಇನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಹಾಟ್ಸ್ಪಾಟ್ಗಳಲ್ಲಿ ಬೆಂಗಳೂರು ಸೇರಿದೆ ಎಂಬುದು ಆತಂಕದ ವಿಚಾರ.
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ 19 ಹರಡುವುದನ್ನು ತಡೆಯಲು ಮತ್ತಷ್ಟು ಕಠಿಣಕ್ರಮಗಳನ್ನು ಜಾರಿಗೆ ತರಲಾಗಿದೆ. ಲಾಕ್ಡೌನ್ನಿಂದ ಮನೆಯಲ್ಲಿಯೆ ಉಳಿದಿರುವ ಜನರಿಗೆ ಸೀಲ್ಡೌನ್ ಆತಂಕ ಕಾಡುತ್ತಿದೆ. ಎರಡು ವಾರ್ಡ್ಗಳಲ್ಲಿ ಇವತ್ತು ಸೀಲ್ ಜಾರಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸೀಲ್ಡೌನ್ ಇಲ್ಲ: ಭಾಸ್ಕರ್ ರಾವ್ ಸ್ಪಷ್ಟನೆ
ಕೊರೊನಾ ಹಾಟ್ಸ್ಪಾಟ್ ಆದ ಬೆಂಗಳೂರು ಮತ್ತಷ್ಟು ಬಿಗಿಕ್ರಮ
ಸಿಲಿಕಾನ್ ಸಿಟಿ, ಐಟಿ ಹಬ್ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಇದೀಗ ಕೊರೊನಾ ವೈರಸ್ ಹಾಟ್ಸ್ಪಾಟ್ ಆಗಿಯೂ ದೇಶದ ಗಮನ ಸೆಳೆಯುತ್ತಿದೆ. ಒಂದೆಡೆ ಕೋವಿಡ್ 19 ಸೋಂಕಿತರ ಪ್ರಮಾಣ ಬೆಂಗಳೂರಿನಲ್ಲಿ ವೇಗವಾಗಿ ಹೆಚ್ಚಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಒಬ್ಬರು ಮಾರಕ ಕೊರೊನಾ ವೈರಸ್ಗೆ ಬಲಿಯಾಗಿದ್ದು, ಅತಿ ಹೆಚ್ಚು ಅಂದರೆ 71 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಹೀಗಾಗಿ ಬೆಂಗಳೂರಿನ ಎರಡು ವಾರ್ಡ್ಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ಸೀಲ್ಡೌನ್ ಜಾರಿಗೆ ತರಲಾಗಿದೆ.
ಬೆಂಗಳೂರಿನ 2 ವಾರ್ಡ್ಗಳಲ್ಲಿ ಸೀಲ್ಡೌನ್ ಜಾರಿ
ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಪೂಜಿನಗರ ವಾರ್ಡ್ ನಂಬರ್ 134 ಹಾಗೂ ಪಾದರಾಯನಪುರ ವಾರ್ಡ್ ನಂಬರ್ 135 ರಲ್ಲಿ ಲಾಕ್ಡೌನ್ ಜೊತೆಗೆ ಸೀಲ್ಡೌನ್ ಜಾರಿಗೆ ತರಲಾಗಿದೆ. ಎರಡೂ ವಾರ್ಡ್ಗಳಲ್ಲಿ 5 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ.
'ಲಾಕ್ಡೌನ್ನಲ್ಲಿ ಸೋತರೆ, ಕೊರೊನಾ ವಿರುದ್ಧ ಗೆಲ್ಲಲು ಕಷ್ಟ'
ಈ ಬಗ್ಗೆ ಮಾಹಿತಿ ಕೊಟ್ಟಿರುವ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರು ಸಂಪೂರ್ಣ ಸೀಲ್ಡೌನ್ ಮಾಡಿರುವುದು ಕೇವಲ ಬಾಪೂಜಿನಗರ ಹಾಗೂ ಪಾದರಾಯನಪುರ ವಾರ್ಡ್ಗಳಲ್ಲಿ ಮಾತ್ರ. ಯಾರು ಆತಂಕಕ್ಕೆ ಒಳಗಾಗಿ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಬೇಡಿ. ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ಆರಂಭಿಸಿದ ಬಿಬಿಎಂಪಿ
ಪಾದರಾಯನಪುರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಗಳು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಆರಂಭಿಸಿದ್ದಾರೆ. ವಾರ್ಡ್ ನಂಬರ್ 134 ಹಾಗೂ 135ರಲ್ಲಿ ಒಟ್ಟು 45 ಸಾವಿರ ಜನಸಂಖ್ಯೆಯಿದೆ ಎಂದು ಬಿಬಿಎಂಪಿ ಮಾಹಿತಿ ಕೊಟ್ಟಿದೆ. ಈ ಎಲ್ಲ 45 ಸಾವಿರ ಜನರ ಆರೋಗ್ಯದ ಮೇಲೂ ವೈದ್ಯಾಧಿಕಾರಿಗಳು ನಿಗಾ ಇರಿಸಲಿದ್ದಾರೆ. ಎರಡೂ ವಾರ್ಡ್ಗಳಲ್ಲಿ ಸೋಂಕಿತ ಪ್ರಕರಣಗಳು ವರದಿ ಆಗಿದ್ದರಿಂದ ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಪಾಲಿಕೆ ಸರಬರಾಜು ಮಾಡಲಿದೆ ಅಗತ್ಯ ವಸ್ತುಗಳನ್ನು
ಸೀಲ್ಡೌನ್ ಆದೇಶ ಜಾರಿಯಾದ ಪ್ರದೇಶಗಳಲ್ಲಿ ಲಾಕ್ಡೌನ್ಗಿಂತ ನಿಖರವಾಗಿ, ತೀವ್ರವಾಗಿ ಹಾಗೂ ಕಟ್ಟುನಿಟ್ಟಾಗಿ ಜನರನ್ನು ನಿಯಂತ್ರಣ ಮಾಡಲಾಗುತ್ತದೆ. ಆ ಪ್ರದೇಶದ ಜನರಿಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಸರ್ಕಾರವೇ ಮನೆ ಬಾಗಿಲಿಗೆ ತಲುಪಿಸುತ್ತದೆ. ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಬಿಬಿಎಂಪಿ ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಲಿದೆ.
ಈಗಾಗಲೇ ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ, ಮಧ್ಯಪ್ರದೇಶ ಹಾಗೂ ದೆಹಲಿಯಲ್ಲಿ ಕೂಡ ಸೀಲ್ಡೌನ್ ಜಾರಿ ಮಾಡಲಾಗಿದೆ. ಸೀಲ್ಡೌನ್ ಜಾರಿಯಾದಾಗ ಆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಒಂದು ಮುಖ್ಯರಸ್ತೆಗೆ ಮಾತ್ರ ಸಂಪರ್ಕ ಕಲ್ಪಿಸಲಾಗುತ್ತದೆ. ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರುವ ಅವಕಾಶ ಇರುವುದಿಲ್ಲ. ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಹೊರತು ಪಡಿಸಿ ಮಾಧ್ಯಮ ಸೇರಿದಂತೆ ಯಾರಿಗೂ ಪ್ರವೇಶ ಇರುವುದಿಲ್ಲ.