ಕೊರೊನಾ: ಯುಗಾದಿಯ ದಿನ ಕಣ್ಣೀರು ಇಡುತ್ತಿರುವ ಬೆಂಗಳೂರು ರಸ್ತೆಗಳು

ದೂರದಲ್ಲಿ ಎಲ್ಲೋ ನಾಯಿ ಬೊಗಳಿದರೂ ಇಲ್ಲೇ ಎಲ್ಲೋ ನಾಯಿಯಿದ್ದಂತೆ, ಗುಸುಗುಸು ಮಾತನಾಡಿದರೂ ಇನ್ನೊಬ್ಬರಿಗೂ ಕೇಳುವಷ್ಟು ಸ್ಮಶಾನ ಮೌನ. ಯಾವ ಬಂದ್, ಯಾವ ಕರ್ಫ್ಯೂ, ಯಾವ ಕಾವೇರಿ ಗಲಾಟೆಯ ವೇಳೆಯೂ ಬೆಂಗಳೂರು ಇಷ್ಟು ಸ್ತಬ್ದವಾದ ಉದಾಹರಣೆ ಕಂಡಿದ್ದಿಲ್ಲ.

ಎಲ್ಲೋ ಆಗೊಮ್ಮೆ, ಈಗೊಮ್ಮೆ ಬರುವ ಪೊಲೀಸ್ ಬೀಟ್ ವಾಹನಗಳು, ಎಲ್ಲೆಲ್ಲೂ ನಾಖಾಬಂದಿ, ಬ್ಯಾರಿಕೇಡ್. ಬಹುಷ: ಬೆಂಗಳೂರಿಗರು ಲಾಕ್ ಔಟ್ ಅಂದರೆ ಹೀಗಿರುತ್ತಾ, ಈ ಮಟ್ಟಕ್ಕೆ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ತಿಳಿದಿರಲಿಕ್ಕಿಲ್ಲ.

ಹಸಿವಿನಿಂದ ಕಣ್ಣುಕತ್ತಲೆ ಬರುತ್ತದೆ ಎಂದರೆ, ಒಂದು ಬ್ರೆಡ್ ಕೂಡಾ ಸಿಗದಂತೇ ನಗರ ಬಂದ್. ಅದು ಕೂಡಾ, ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷದ ಮೊದಲನೇ ದಿನವೇ. ಇದು ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಭಾಗವನ್ನು ಯುಗಾದಿಯ ದಿನದಂದು ರೌಂಡ್ ಹಾಕಿದಾಗ ಕಂಡ ವಸ್ತುಸ್ಥಿತಿ.

ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಇನ್ನೂ ಮೂರು ವಾರ ಲಾಕ್ ಔಟ್ ಎನ್ನುವ ಯಾವ ಅರಿವಿಲ್ಲದೇ, ಅಲ್ಲಲ್ಲಿ, ಬಸ್ಸಿಗಾಗಿ ದೂರದ ಹುಬ್ಬಳ್ಳಿ, ಬಳ್ಳಾರಿಗೆ ಹೋಗಲು ಕಾಯುತ್ತಿರುವ ಪ್ರಯಾಣಿಕರು. ಅದರಲ್ಲಿ ಹೆಣ್ಣುಮಕ್ಕಳು, ಸಣ್ಣಮಕ್ಕಳು.

ಇಲ್ಲಿಂದ ಜಾಗ ಖಾಲಿ ಮಾಡ್ತೀರಾ, ಲಾಠಿ ಬೀಸಬೇಕಾ ಎಂದು ಬೀಟ್ ಪೊಲೀಸರು ಗದರಿಸಿದಾಗ, ಸ್ವಲ್ಪದೂರ ಹೋಗಿ, ಮತ್ತೆ ಯಾವುದಾದರೂ ಬಸ್ಸೋ ಅಥವಾ ಟಿಟಿ ಬರಬಹುದೋ ಎಂದು ಮತ್ತೆ ಅಲ್ಲೇ, ನಿಲ್ಲುವ ಪ್ರಯಾಣಿಕರು, ಕೊನೇ ಪಕ್ಷ ತುಮಕೂರು ರಸ್ತೆಗೆ ಹೋಗಲು ಏನಾದರೂ ಮಾಡಿ ಎಂದು ಪೊಲೀಸರ ಕೈಮುಗಿಯುವ ಪ್ರಯಾಣಿಕರ ಗೋಳು ಎಂತವರ ಮನಸ್ಸನ್ನೂ ಘಾಸಿಗೊಳಿಸುತ್ತದೆ.

ಹಿಂದಿನ ರಾತ್ರಿ ಶಿವಾಜಿನಗರದಲ್ಲಿ ದುಡಿಸಿಕೊಂಡ ಕಾರ್ಮಿಕ

ಹಿಂದಿನ ರಾತ್ರಿ ಶಿವಾಜಿನಗರದಲ್ಲಿ ದುಡಿಸಿಕೊಂಡ ಕಾರ್ಮಿಕ

ಹಿಂದಿನ ರಾತ್ರಿ ಶಿವಾಜಿನಗರದಲ್ಲಿ ಇಂತಹ ಕಾರ್ಮಿಕರನ್ನು ರಾತ್ರಿಯಿಡೀ ದುಡಿಸಿಕೊಂಡು, ನಂತರ, ಊರಿಗೆ ಕಳುಹಿಸುತ್ತಿರುವ ಮಾಲೀಕನಿಗೆ ಅದೆಷ್ಟು ಶಾಪಬಿದ್ದಿರುತ್ತೋ? ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಕಾನೂನು, ಸುವ್ಯವಸ್ಥೆ ನೋಡಿಕೊಳ್ಳುವವರು, ಒಂದಷ್ಟು ಪ್ರೀತಿಯಿಂದ ಮಾತಾನಾಡಿ, ಯಶವಂತಪುರ, ನೆಲಮಂಗಲದವರೆಗೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಲು, ಪೊಲೀಸರಿಗೆ ಸಾಧ್ಯವಾಗದ ಮಾತೇನೂ ಅಲ್ಲ.

ಕಟೌಟ್ ಗಳೇ ಕಣ್ಣೀರಿಡುತ್ತಿವೆಯೋ ಏನೂ ಎಂದು ಬಾಸವಾಗುತ್ತಿದೆ

ಕಟೌಟ್ ಗಳೇ ಕಣ್ಣೀರಿಡುತ್ತಿವೆಯೋ ಏನೂ ಎಂದು ಬಾಸವಾಗುತ್ತಿದೆ

ಕನ್ನಡ ಚಿತ್ರಗಳಿಗೆ ಹಬ್ ಆಗಿರುವ ಗಾಂಧಿನಗರದ ಎಲ್ಲಾ ಥಿಯೇಟರ್ ಗಳ ಮುಂದೆ ಹಾಕಿರುವ ಕಟೌಟ್ ಗಳೇ ಕಣ್ಣೀರಿಡುತ್ತಿವೆಯೋ ಏನೂ ಎಂದು ಬಾಸವಾಗುತ್ತಿದೆ. ಅಲ್ಲಿನ ಚಿತ್ರಮಂದಿರದ ಭದ್ರತಾ ಸಿಬ್ಬಂದಿಯ ಬಳಿ ಮಾತನಾಡಿದಾಗ, "ಬೆಂಗಳೂರಿಗೆ 75ರ ದಶಕದಲ್ಲಿ ಬಂದೆ. ಅಂದಿನಿಂದ ಇಂದಿನವರೆಗೆ, ಎಲ್ಲೋ ಒಂದೆರಡು ದಿನ ಬಂದ್ ಆಗಿತ್ತು. ಆದರೆ, ಈ ಮಟ್ಟಿಗೆ ನನ್ನ ಅನುಭವದಲ್ಲೇ ನೋಡಿಲ್ಲ. ಮುಂದೆ ಹೇಗೋ, ಎನ್ನುವ ಪ್ರಶ್ನೆ ಕಾಡುತ್ತಿದೆ" ಎನ್ನುವ ವಿಷಾದ ಮಾತು.

ಮೆಜಿಸ್ಟಿಕ್ ನ ಸಬ್ ವೇನ ಎರಡೂ ದ್ವಾರ

ಮೆಜಿಸ್ಟಿಕ್ ನ ಸಬ್ ವೇನ ಎರಡೂ ದ್ವಾರ

ಇನ್ನು, ಮೆಜಿಸ್ಟಿಕ್ ನ ಸಬ್ ವೇನ ಎರಡೂ ದ್ವಾರದಲ್ಲಿ ನವ್ ತಾಲ್ ಲಾಕ್ ಜಡಾಯಿಸಲಾಗಿದೆ. ಸದಾ ಗಿಜಿಗುಡುವ ಈ ಪ್ರದೇಶದಲ್ಲಿ ನಾಯಿಗಳು ರೊಮ್ಯಾನ್ಸ್ ಮಾಡುತ್ತಾ ಬೆಂಗಳೂರೇ ನಮ್ಮದೆನ್ನುತ್ತಿವೆ. ಕೆಲವು ಪೊಲೀಸರು ವಿಡಿಯೋ ಕಾಲ್ ಮಾಡಿ, ನೋಡು ಮೆಜೆಸ್ಟಿಕ್ ಹೇಗಿದೆ ಈಗ ಎಂದು ಅವರ ಕಡೆಯವರ ಬಳಿ ಮಾತನಾಡುತ್ತಿದ್ದಾರೆ.

ಎಲ್ಲಾ ರಸ್ತೆಯಲ್ಲಿ ಕ್ರಿಕೆಟ್ ಆಡಬಹುದು

ಎಲ್ಲಾ ರಸ್ತೆಯಲ್ಲಿ ಕ್ರಿಕೆಟ್ ಆಡಬಹುದು

ಬಸವನಗುಡಿ ವೃತ್ತ, ಮಿನರ್ವ, ಕೆ.ಎಚ್.ರಸ್ತೆ, ಜೆ.ಸಿ.ರಸ್ತೆ, ರಿಚ್ಮಂಡ್ ರಸ್ತೆ, ಶೂಲೆ ಸರ್ಕಲ್, ರಾಜಭವನ, ಶಿವಾಜಿನಗರ, ಪೊಲೀಸ್ ಕಮಿಷನರ್ ಕಚೇರಿ, ನೃಪತುಂಗ ರಸ್ತೆ, ಕೆ.ಜಿ.ರಸ್ತೆ, ವಿಧಾನಸೌಧ, ಮೆಜಿಸ್ಟಿಕ್, ಆನಂದರಾವ್ ವೃತ್ತ, ಗೂಡ್ಸ್ ಶೆಡ್ ರಸ್ತೆ... ಹೀಗೆ ಹಿಂದಿನ ಯಾವ ಜನನಿಬಿಡ ರಸ್ತೆಯಲ್ಲಿ ಸುತ್ತಾಡಿದರೂ, ಎಲ್ಲಾ ರಸ್ತೆಯಲ್ಲಿ ಕ್ರಿಕೆಟ್ ಆಡಬಹುದು ಎನ್ನುವ ಹಾಗೇ, ರಸ್ತೆ.. ಖಾಲಿಖಾಲಿ..

ಮೆಡಿಕಲ್ ಎಮರ್ಜೆನ್ಸಿಗೆ ಈ ರೀತಿಯ ವಾತಾವರಣ ಖಂಡಿತ ಬೇಕಿದೆ

ಮೆಡಿಕಲ್ ಎಮರ್ಜೆನ್ಸಿಗೆ ಈ ರೀತಿಯ ವಾತಾವರಣ ಖಂಡಿತ ಬೇಕಿದೆ

ಸದ್ಯದ ಮೆಡಿಕಲ್ ಎಮರ್ಜೆನ್ಸಿಗೆ ಈ ರೀತಿಯ ವಾತಾವರಣ ಖಂಡಿತ ಬೇಕಿದೆ. ಇದು ಇನ್ನೂ ಮೊದಲನೇ ದಿನ, ಇನ್ನೂ ಇಪ್ಪತ್ತು ದಿನ ಹೀಗೇ ಪರಿಸ್ಥಿತಿ ಇರಬೇಕಾಗಿದೆ. ಬಹುಷಃ ಮೆಜಿಸ್ಟಿಕ್ ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದವರದ್ದು, ಊರಿಗೆ ಹೋಗುವವರ ಕೊನೆಯ ಬ್ಯಾಚ್ ಇದಾಗಿರಬಹುದು. ಅವರನ್ನು ಹೇಗಾದರೂ ಬಸ್ ಹತ್ತಿಸಿ ಎನ್ನುವುದೊಂದು ನಮ್ಮ ಕಡೆಯಿಂದ ಪೊಲೀಸರಿಗೆ ಮನವಿ. ಪೊಲೀಸರೇ ನೀವು ಊಟತಿಂಡಿ ಟೈಂ ಟು ಟೈಂ ಮಾಡುತ್ತಿರಿ, ಆರೋಗ್ಯವೂ ಜೋಪಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+