ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ತನಿಖೆ ಆರಂಭಿಸಿದ ಸಿಸಿಬಿ
ಬೆಂಗಳೂರು, ಮೇ. 05: ಸರ್ಕಾರದ ಕೋಟಾದಡಿ ಕೊರೊನಾ ಸೋಂಕಿತರಿಗೆ ಮಂಜೂರು ಮಾಡಬೇಕಿದ್ದ ಬೆಡ್ಗಳನ್ನು ಬ್ಲಾಕಿಂಗ್ ಮಾಡುವ ದಂಧೆಯ ಪ್ರಕರಣವನ್ನು ಸಿಸಿಬಿ ಪೊಲೀಸರ ತನಿಖೆಗೆ ವಹಿಸಲಾಗಿದೆ. ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಸುದ್ದಿಗೋಷ್ಠಿ ನಡೆಸುವ ಮೂಲಕ ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆ ಎಳೆದಿದ್ದರು.
ಸುದ್ದಿಗೋಷ್ಠಿ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ತನಿಖೆಗೆ ವಹಿಸಲಾಗಿದೆ. ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಇಬ್ಬರು ಬಿಬಿಎಂಪಿ ವೈದ್ಯರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೇ ಸೀಟ್ ಬ್ಲಾಕಿಂಗ್ ಆಗಿದ್ದ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಹ ವಿಚಾರಣೆಗೆ ಒಳಪಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ ಹೊರ ಬಂದ ನಂತರವೂ ಐಸಿಯು ಬೆಡ್ ಸಿಗುತ್ತಿಲ್ಲ ಯಾಕೆ?
ಪ್ರಕರಣ ಬಯಲಿಗೆ ಎಳೆಯುವ ವೇಳೆ ತೇಜಸ್ವಿಸೂರ್ಯ ಪ್ರಸ್ತಾಪಿಸಿದ್ದ ಹದಿನೇಳು ಮಂದಿಯನ್ನು ಕೆಲಸಕ್ಕೆ ಬಾರದಂತೆ ಸೂಚನೆ ಮಾಡಲಾಗಿದೆ. ಕೆಲಸ ಕಳೆದುಕೊಂಡಿರುವ ಜಮೀರ್ ಎಂಬ ಸಿಬ್ಬಂದಿ ಈ ವಿಷಯವನ್ನು ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ. ಬಿಬಿಎಂಪಿ ದಕ್ಷಿಣ ಕೋವಿಡ್ ವಾರ್ ರೂಮ್ನಲ್ಲಿ ನಾವು ಹೆಲ್ಪ್ ಡೆಸ್ಕ್ ನಲ್ಲಿ ಕೆಲಸ ಮಾಡುತ್ತೇವೆ. ಯಾರು ಸೀಟು ಬ್ಲಾಕ್ ಮಾಡ್ತಾರೆ, ಹೇಗೆ ಮಾಡ್ತಾರೆ ಅನ್ನೋದು ಗೊತ್ತಿಲ್ಲ. ನಾನು ಈಗಷ್ಟೇ ಪದವಿ ಮುಗಿಸಿದ್ದೆ. ಇದೇ ನನ್ನ ಮೊದಲ ಕೆಲಸ. ಬಿಬಿಎಂಪಿ ಎಂದ ಕಾರಣಕ್ಕೆ ಹತ್ತು ದಿನದ ಹಿಂದಷ್ಟೆ ಕೆಲಸಕ್ಕೆ ಸೇರಿಕೊಂಡಿದ್ದೆ. ಆದರೆ ಉಗ್ರಗಾಮಿಗಳು ಎಂದು ಬಿಂಬಿಸಿದ್ದು ಬೇಸರವಾಗುತ್ತಿದೆ. ನಾನು ಸಣ್ಣ ತಪ್ಪು ಮಾಡಿದರೂ ಇವತ್ತೇ ಗಲ್ಲಿಗೆ ಏರಿಸಲಿ, ಯಾವ ರೀತಿಯ ದಂಧೆ ಮಾಡ್ತಾರೆ ಅನ್ನೋದರ ಬಗ್ಗೆಯೂ ನನಗೆ ಅರಿವು ಇಲ್ಲ. ಕೊವಿಡ್ ರೋಗಿಗಳ ಬೇಡಿಕೆ ಬಗ್ಗೆ ವರದಿ ತಯಾರಿಸಿ ಸಂಬಂಧಪಟ್ಟ ವೈದ್ಯರಿಗೆ ಸಲ್ಲಿಸುತ್ತಿದ್ದೆ ಎಂದು ತಿಳಿಸಿದ್ದಾನೆ.
ಸೀಟ್ ಬ್ಲಾಕಿಂಗ್ ದಂಧೆಯಿಂದ ಯಾರಿಗೆ ಲಾಭ : ಶೇ. 50 ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ಗಳನ್ನು ಮೀಸಲಿಡುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ಬಹುತೇಕ ಆಸ್ಪತ್ರೆಗಳು ಬೆಡ್ ಗಳನ್ನು ಕಾಯ್ದಿರಿದ್ದವು. ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ಗಳ ವಿವರವನ್ನು ಪೋರ್ಟಲ್ನಲ್ಲಿ ಬಿಬಿಎಂಪಿ ಪ್ರಕಟಿಸಿತ್ತು. ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಇಡೀ ರಾಜ್ಯದಲ್ಲಿಯೇ ಐಸಿಯು ಬೆಡ್ಗಳಿಗಾಗಿ ಜನರು ಪರದಾಡಿದರು.
ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ಬೆಡ್ ಬ್ಲಾಕಿಂಗ್ ಮಾಡ್ತಿದ್ದ ಇಬ್ಬರು ಬಂಧನ
ಒಂದು ಬಿಯು ನಂಬರ್ನಲ್ಲಿ ಮೂರ್ನಾಲ್ಕು ಆಸ್ಪತ್ರೆಯಲ್ಲಿ ಬೆಡ್ ಬ್ಲಾಕಿಂಗ್ ಆಗಿದ್ದೇ ಆದಲ್ಲಿ, ಆ ರೋಗಿ ಚಿಕಿತ್ಸೆ ವೆಚ್ಚ ಸರ್ಕಾರ ಯಾವ ರೀತಿ ಪಾವತಿಸುತ್ತದೆ. ಒಂದು ರೋಗಿ ಹತ್ತು ಕಡೆ ದಾಖಲಾಗಿದೆ ಎಂದು ದಾಖಲೆ ಸೃಸ್ಟಿಯಾಗಿರುವ ಆರೋಪ ಕೇಳಿ ಬಂದಿದ್ದು, ಹತ್ತು ಆಸ್ಪತ್ರೆಗಳಿಗೆ ಸರ್ಕಾರ ಶುಲ್ಕ ಪಾವತಿ ಮಾಡುತ್ತದೆ. ಇದು ನಡೆದಿದ್ದೇ ಆದಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಬಹುದೊಡ್ಡ ಒಡಂಬಡಿಕೆ ಆಗಿರಬೇಕು. ಇಲ್ಲವೇ ಸರ್ಕಾರದ ಕೋಟಾ ಬೆಡ್ ಬ್ಲಾಕಿಂಗ್ ಮಾಡಿ ಆ ಬೆಡ್ನ್ನು ಖಾಸಗಿಯವರು ಮಾರಿಕೊಂಡಿರಬೇಕು. ಅದರಿಂದ ಬರುವ ಲಾಭದಲ್ಲಿ ಬಿಬಿಎಂಪಿ ಹಿರಿಯ ಅಧಿಕಾರಿಗಳು ಹಂಚಿಕೊಂಡಿರಬೇಕು. ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ ನಡೆದಿದ್ದೇ ಆದಲ್ಲಿ ಅದರಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಮೋಸ ಮಾಡಿರಬೇಕು ಅಲ್ಲವೇ ?
Recommended Video
ಸುದ್ದಿಗೊಷ್ಠಿ ನಡೆಸಿದ್ದ ತೇಜಸ್ವಿ ಸೂರ್ಯ ಹೇಳುವ ಪ್ರಕಾರ, ಬಿಬಿಎಂಪಿ ಹಾಸಿಗೆ ಕಾಯ್ದಿರಿಸುವ ಕೇಂದ್ರೀಕೃತ ವ್ಯವಸ್ಥೆ ಪ್ರಕಾರ ಒಮ್ಮೆ ಹಾಸಿಗೆ ಕಾಯ್ದಿರಿಸಿದ 12 ತಾಸಿನಲ್ಲಿ ಆಸ್ಪತ್ರೆಗೆ ದಾಖಲಾಗದಿದ್ದರೆ, ಕಾಯ್ದಿರಿಸುವಿಕೆಯನ್ನು ರದ್ದು ಪಡಿಸಲಾಗುತ್ತದೆ. ದಕ್ಷಿಣ ವಲಯದ ವಾರ್ ರೂಮ್ನಲ್ಲಿ ಏ. 20 ರಿಂದ ಮೇ. 1 ರ ವರೆಗೆ ಕಾಯ್ದಿರಿಸಿದ ಹಾಸಿಗೆಳ ಸಂಖ್ಯೆ 5488. ಇದೇ ಅವಧಿಯಲ್ಲಿ ಕಾಯ್ದಿರಿಸುವಿಕೆಯ 4065 ಹಾಸಿಗೆಗಳನ್ನು ರದ್ದು ಪಡಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದ್ದರು.