ಎಚ್ಡಿಕೆ ಕ್ಯಾಬಿನೆಟ್ ವಿಸ್ತರಣೆ ಆಗುತ್ತಾ? ಇಲ್ಲವಾ?ಸಂಜೆ ವೇಳೆಗೆ ನಿರ್ಧಾರ
Recommended Video

ಬೆಂಗಳೂರು, ಡಿಸೆಂಬರ್ 5: ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಆಗುತ್ತೋ ಇಲ್ಲವೋ ಎನ್ನುವುದು ಬುಧವಾರ ಸಂಜೆ ವೇಳೆಗೆ ಸ್ಪಷ್ಟವಾಗಲಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಹಲವಾರು ತಿಂಗಳಿಂದ ನಾನಾ ಕಾರಣಗಳನ್ನು ಹೇಳುತ್ತಾ ಬಂದಿರುವ ಸಮ್ಮಿಶ್ರ ಸರ್ಕಾರ ನಿಜವಾಗಿಯೂ ಸಂಪುಟ ವಿಸ್ತರಣೆ ಮಾಡುತ್ತಾ ಎಂದು ತಿಳಿದುಬರಲಿದೆ.
ಶೂನ್ಯಮಾಸ, ಉಪ ಚುನಾವಣೆಗಳು ಹಾಗೂ ಇನ್ನಿತರೆ ಕಾರಣಗಳನ್ನು ನೀಡುತ್ತಾ ಸಂಪುಟ ವಿಸ್ತರಣೆ ಮುಂದೂಡಿದ್ದರು, ಇದೀಗ ಡಿಸೆಂಬರ್ 10ರಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದೆ ಅಷ್ಟರೊಳಗೆ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ಹಲವು ಶಾಸಕರ ಒತ್ತಾಯವಾಗಿದೆ.
ಸಂಪುಟ ವಿಸ್ತರಣೆ ಮಾಡದಿದ್ದರೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಎಂಬ ಸಂದೇಶವನ್ನು ಎಐಸಿಸಿ ಹೈಕಮಾಂಡ್ ಹಾಗೂ ಜೆಡಿಎಸ್ ವರಿಷ್ಠರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿ್ದರಾಮಯ್ಯ ರವಾನಿಸಿದ್ದು ಈ ವಿಚಾರವಾಗಿ ಸಭೆ ಕರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಸಭೆ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದ ಸ್ಥಿರತೆ ತಳುಕು ಹಾಕಿಕೊಂಡಿರುವ ಸಂಪುಟ ವಿಸ್ತರಣೆ ಕಗ್ಗಂಟಿಗೆ ಒಂದು ಅಂತ್ಯ ಕಾಣಲಿದೆ.

2:1 ಅನುಪಾತದಲ್ಲಿ ಅಧಿಕಾರ ಹಂಚಿಕೆ
ಸಂಪುಟದಲ್ಲಿ ಖಾಲಿ ಉಳಿದಿರುವ ಎಂಟು ಸ್ಥಾನಗಳಿಗೆ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿ ಶಾಸಕರ ದೊಡ್ಡ ದಂಡೇ ಇದೆ, ನಿಗಮ- ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಾಮ ನಿರ್ದೇಶನ ಒಳಗೊಂಡು 2:1 ಅನುಪಾತದಲ್ಲಿ ಅಧಿಕಾರ ಹಂಚಿಕೆ ಸೂತ್ರದಂತೆ ಮುಖಂಡರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

3 ಗಂಟೆಗೆ ಕಾಂಗ್ರೆಸ್ ನಾಯಕರ ಸಭೆ
ಸಮನ್ವಯ ಸಮಿತಿ ಸಭೆಗೂ ಮುನ್ನ ಉಸ್ತುವಾರಿ ವೇಣುಗೋಪಾಲ್ ಅವರು ಕಾಂಗ್ರೆಸ್ ನಾಯಕರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ಸಂದಿಗ್ಧ ಸ್ಥಿತಿ
ಸಂಪುಟ ವಿಸ್ತರಣೆಗೆ ವಿಶೇಷವಾಗಿ ಕಾಂಗ್ರೆಸ್ನ ಹಲವು ಶಾಸಕರು ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ಪ್ರಾಬಲ್ಯದ ಮಧ್ಯೆ ಕಾಂಗ್ರೆಸ್ ವರ್ಚಸ್ಸು ಮರೆಯಾಗುತ್ತಿದೆ. ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ, ಕೆಲವು ಜಿಲ್ಲೆಗಳಿಗೆ ಸರ್ಕಾರ ಸೀಮಿತವಾಗುತ್ತಿದೆ. ಅನುದಾನ ಬಿಡುಗಡೆ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಕಾಂಗ್ರೆಸ್ ಶಾಸಕರು ಮತ್ತು ನಾಯಕರ ಮಾತಿಗೆ ಮನ್ನಣೆ ಸಿಗುತ್ತಿಲ್ಲ ಎನ್ನುವ ಆರೋಪವೂ ಇದೆ.












Click it and Unblock the Notifications