ರೌಡಿಗಳಿರಬೇಕು ಇಲ್ಲ ನೀವಿರಬೇಕು, ಪೊಲೀಸರಿಗೆ ಗೃಹಮಂತ್ರಿ ಎಚ್ಚರಿಕೆ
ಬೆಂಗಳೂರು, ನವೆಂಬರ್ 11 : ನೀವು ಕರ್ತವ್ಯದಲ್ಲಿರಬೇಕು ಎಂದರೆ ರೌಡಿಗಳನ್ನು ಮನೆಯಲ್ಲಿರಿಸಿ. ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳಿರಬೇಕು ಅಥವಾ ನೀವಿರಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಠಾಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಮಾಜದಲ್ಲಿ ಶಾಂತಿ ಕಾಪಾಡಲು ಯಾವುದೇ ನೂತನ ಕಾನೂನಿನ ಅಗತ್ಯವಿಲ್ಲ. ನಮ್ಮಲ್ಲಿ ಇರುವ ಕಾನೂನುಗಳೇ ಸಾಕಷ್ಟು ಸಮರ್ಥವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸಬೇಕಿದೆ. ಹೆಣ್ಣುಮಕ್ಕಳು ಓದುವ ಶಾಲೆ, ಕಾಲೇಜುಗಳ ಬಳಿ ಹೊಯ್ಸಳ ಗಸ್ತು ಹೆಚ್ಚಿರಬೇಕು.

ಆಯಾ ಠಾಣೆ ಇನ್ಸ್ಪೆಕ್ಟರ್ಗಳು, ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಗಳ ಜತೆಗೆ ಸಂಪರ್ಕದಲ್ಲಿರಬೇಕು. ಕಾಲೇಜಿನಲ್ಲಿ ಅಹಿತಕರ ಘಟನೆಗಳು ಕಂಡು ಬಂದಲ್ಲಿ ತಕ್ಷಣವೇ ಮಾಹಿತಿ ನೀಡುವಂತಿರಬೇಕು ಎಂದು ಬೆಂಗಳೂರಿನ ಎಫ್ಕೆಸಿಸಿಐನಲ್ಲಿ ಶುಕ್ರವಾರ(ನ.10) ನಡೆದ ಸಂವಾದದಲ್ಲಿ ಮಾಹಿತಿ ನೀಡಿದರು.
ರೌಡಿಗಳ ದಾಂಧಲೆ ನಿಲ್ಲಬೇಕು. ಅವರನ್ನು ಮನೆಯಲ್ಲಿರಿಸಿ ಅಥವಾ ರಾಜ್ಯವನ್ನು ಬಿಟ್ಟು ಹೋಗಲು ಹೇಳಿ. ಒಂದೇ ಕಡೆಯಲ್ಲಿ ರೌಡಿಗಳು-ಪೊಲೀಸ್ ಅಧಿಕಾರಿಗಳು ಇಬ್ಬರು ಇರುವುದು ಪೊಲೀಸರಿಗೆ ಅವಮಾನದ ಸಂಗತಿ. ಹೆಚ್ಚಿನ ಬಡಮಕ್ಕಳನ್ನು ಹಾಳು ಮಾಡುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್, ಮಟ್ಕಾ, ಹುಕ್ಕಾ ಬಾರ್ಗಳನ್ನು ಮುಲಾಜಿಲ್ಲದೆ ಬಂದ್ ಮಾಡಲು ಸೂಚಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ವೈನ್ ಶಾಪ್, ಬಾರುಗಳು ಬೆಳಗ್ಗೆ10.30ರಿಂದ ರಾತ್ರಿ 10.30ರವರೆಗೆ ತೆರೆದಿರಬೇಕು. ಕೆಲವು ಕಡೆ ನಂದಿನಿ ಬೂತ್ಗಳು ಬಾಗಿಲು ತೆರೆಯುವ ಮುನ್ನವೇ ವೈನ್ ಶಾಪ್ ಬಾಗಿಲು ತೆರೆದಿರುತ್ತದೆ. ಇಲ್ಲಿಗೆ ಬಂದು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದೇಶಿ ಪ್ರಜೆಗಳನ್ನು ನಿಯಂತ್ರಿಸಬೇಕಾಗಿದೆ ಎಂದರು.
ಅಫೀಮು-ಗಾಂಜಾ ಮುಕ್ತ : ಈ ಮೊದಲು ಗಾಂಜಾ ಮಾರುವವರನ್ನು ಮಾತ್ರ ಹಿಡಿದು ಪ್ರಕರಣ ದಾಖಲಿಸಲಾಗುತ್ತಿತ್ತು. ಆದರೆ ಈಗ ರಾಜ್ಯವನ್ನು ಗಾಂಜಾ-ಅಫೀಮು ಮುಕ್ತ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ಗಾಂಜಾ ಮಾರಾಟಗಾರರಿಗೆ ಎಲ್ಲಿಂದ ಗಾಂಜಾ ಸರಬರಾಜಾಗುತ್ತದೆ ಎನ್ನುವದನ್ನು ಪತ್ತೆಮಾಡಿ ಸರಬರಾಜುದಾರರನ್ನು ಬಂಧಿಸಬೇಕು ಎಂದು ಆದೇಶ ನೀಡಿದರು.












Click it and Unblock the Notifications