130 ಎಕರೆ ಸರ್ಕಾರಿ ಜಮೀನು ಉಳಿಸಿದ ಅರಣ್ಯ ಅಧಿಕಾರಿಗೆ ಸಿಕ್ಕಿದ್ದೇನು?
ಬೆಂಗಳೂರು, ಅಕ್ಟೋಬರ್ 9: ಸರ್ಕಾರಿ ಜಮೀನು ಅನ್ಯರ ಪಾಲಾಗುವುದನ್ನು ತಪ್ಪಿಸಿ ಸರ್ಕಾರದಲ್ಲೇ ಉಳಿಯುವಂತೆ ಮಾಡಿದ ಅರಣ್ಯ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. 130 ಎಕರೆ ಅರಣ್ಯ ಭೂಮಿಯನ್ನು ರಕ್ಷಿಸಿ ಸರ್ಕಾರಕ್ಕೆ ಒಪ್ಪಿಸಿದ್ದರು.
ಬೆಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ನಗರದ ಸುತ್ತಮುತ್ತಲ ಭಾಗಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು 130 ಎಕರೆ ಜಮೀನು ಖಾಸಗಿಯವರ ಪಾಲಾಗುವುದನ್ನು ತಪ್ಪಿಸಿದ್ದರು.
ಇನ್ನು ಖಾಸಗಿಯವರ ಸುಪರ್ದಿಯಲ್ಲಿರುವ 200 ಎಕರೆ ಜಮೀನನ್ನು ಗುರುತಿಸಿದ್ದು, ಅದನ್ನು ತೆರವುಗೊಳಿಸಲು ಸಜ್ಜಾಗಿದ್ದರು. ಆದರೆ ಕಾರ್ಯಾಚರಣೆ ಮುನ್ನವೇ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಒತ್ತುವರಿಯಾಗಿದ್ದ ಅರಣ್ಯ ಜಮೀನನ್ನು ತೆರವು ಮಾಡುವ ಮೂಲಕ ಸರ್ಕಾರದ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಿದ್ದ ಬೆಂಗಳೂರು ನಗರ ಅರಣ್ಯ ಸಂರಕ್ಷಣಾ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಜಮೀನಿನಲ್ಲಿ ಸರ್ಕಾರದಲ್ಲಿರುವ ಪ್ರಭಾವಿ ಶಾಸಕರು, ಸಚಿವರು, ಪಾಲಿಕೆ ಸದಸ್ಯರ ಜಮೀನು ಸೇರಿದೆ. ಇದೇ ಕಾರಣದಿಂದ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿ ವರ್ಗಾವಣೆ ಮಾಡಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬನ್ನೇರುಘಟ್ಟ ಅರಣ್ಯ ಸಂರಕ್ಷಿತ ವಲಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ರೆಸಾರ್ಟ್ ಗೆ ತಡೆ ನೀಡಿದ್ದರು. ಜೆಪಿನಗರದಲ್ಲಿರುವ ಪಾಲಿಕೆಯ ಮಾಜಿ ಸದಸ್ಯರೊಬ್ಬರಿಗೆ ಸೇರಿದ ರೆಸಾರ್ಟ್ ಸುಮಾರು 20 ಗುಂಟೆ ಜಮೀನನ್ನು ತೆರವು ಮಾಡಿಸಿದ್ದರು. ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಸುಮಾರು 45 ಎಕರೆ ಜಮೀನನ್ನು ತೆರವು ಮಾಡಿಸಿದ್ದರು.












Click it and Unblock the Notifications