ಡಿಕೆಶಿ ಮನೆಯಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರ ಸಭೆ, ಒಬ್ಬರಿಗೆ ಮಾತ್ರ ಆಹ್ವಾನವಿಲ್ಲ
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ನಂತರ, ಸಂಘಟನಾತ್ಮಕವಾಗಿ ಕಾಂಗ್ರೆಸ್ಸಿನಲ್ಲಿ ಬಹಳಷ್ಟು ಚುರುಕಿನ ಕೆಲಸಳು ನಡೆಯುತ್ತಿದೆ. ಮುಖಂಡರು ಸಕ್ರಿಯವಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರೊನಾ ಸಮಯವನ್ನು ಸಾರ್ವಜನಿಕರ ಸೇವೆಗಾಗಿ ಹೆಚ್ಚುಹೆಚ್ಚು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಮುಖಂಡರು, ದಿನಸಿ, ಮೆಡಿಕಲ್ ಕಿಟ್ ಹಂಚುವ ಕೆಲಸಗಳನ್ನು ಯಥೇಚ್ಚವಾಗಿ ಮಾಡುತ್ತಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲದ ನಡುವೆ, ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ (ಜುಲೈ 16) ಹತ್ತು ಹಲವು ಮುಖಂಡರು ಸಭೆಯನ್ನು ನಡೆಸಿದ್ದರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೂಡಾ ಡಿಕೆಶಿ ನಿವಾಸಕ್ಕೆ ಆಗಮಿಸಿ ಸಭೆಯ ಭಾಗವಾಗಿದ್ದರು. ಆದರೆ, ಬೆಂಗಳೂರಿನ ಪ್ರಭಾವೀ ಶಾಸಕರೊಬ್ಬರು ಈ ಸಭೆಗೆ ಉದ್ದೇಶಪೂರ್ವಕವಾಗಿಯೇ ಗೈರಾಗಿದ್ದರು.

ಬಿಬಿಎಂಪಿ ಚುನಾವಣೆಗೆ ಸಂಬಂಧ ಕೋರ್ಟ್ ಆದೇಶ?
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 28 ವಿಧಾನಸಭಾ ಮತ್ತು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. ಹಾಗಾಗಿ, ಯಾವುದೇ ಪಕ್ಷಕ್ಕೆ ಇಲ್ಲಿ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಜೊತೆಗೆ, ಬಿಬಿಎಂಪಿ ಚುನಾವಣೆಗೆ ಸಂಬಂಧ ಕೋರ್ಟ್ ಏನಾದರೂ ಆದೇಶ ಹೊರಡಿಸಿದರೆ ಅದಕ್ಕೆ ಸಿದ್ದವಾಗಬೇಕಿದೆ. ಹಾಗಾಗಿ, ಡಿಕೆಶಿ ಸಭೆಯನ್ನು ಕರೆದಿದ್ದರು.

ಸಭೆಯಲ್ಲಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮುಂತಾದ ಪ್ರಮುಖರು
ಸಭೆಯಲ್ಲಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಸೌಮ್ಯ ರೆಡ್ಡಿ,ರಾಮಲಿಂಗ ರೆಡ್ಡಿ, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಅಖಂಡ ಶ್ರೀನಿವಾಸಮೂರ್ತಿ, ಡಿ.ಕೆ.ಸುರೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಆದರೆ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಭಾಗವಹಿಸಿರಲಿಲ್ಲ.

ಡಿಕೆಶಿ ಕರೆದಿಲ್ಲ ಎಂದು ಮುನಿಸಿಕೊಂಡು ಜಮೀರ್ ಸಭೆಯಿಂದ ದೂರ
ಕೆಪಿಸಿಸಿ ಅಧ್ಯಕ್ಷರು ಖುದ್ದಾಗಿ, ಸಿದ್ದರಾಮಯ್ಯ ಸೇರಿದಂತೆ ಪ್ರಮುಖವಾಗಿ ಬೆಂಗಳೂರಿನ ಕಾಂಗ್ರೆಸ್ಸಿನ ಜನಪ್ರತಿನಿಧಿಗಳಿಗೆ ಖುದ್ದಾಗಿ ಕರೆ ಮಾಡಿ ಸಭೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದರು. ಆದರೆ, ಜಮೀರ್ ಅಹ್ಮದ್ ಗೆ ಮಾತ್ರ ಸಭೆಗೆ ಆಹ್ವಾನ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಸಂಬಂಧ, ಜಮೀರ್ ಮುನಿಸಿಕೊಂಡು ಸಭೆಯಿಂದ ದೂರವುಳಿದಿದ್ದರು.
Recommended Video

ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲವನ್ನು ಸೃಷ್ಟಿಸಿದವರೇ ಜಮೀರ್
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲವನ್ನು ಸೃಷ್ಟಿಸಿದವರೇ ಮೊದಲು ಜಮೀರ್ ಅಹ್ಮದ್. ಭಾವೀ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿ ಅನಾವಶ್ಯಕ ಗೊಂದಲಕ್ಕೆ ಕಾರಣರಾಗಿದ್ದರು. ಈ ಸಂಬಂಧ, ಡಿಕೆಶಿ ಕೂಡಾ ಎಚ್ಚರಿಕೆಯನ್ನು ನೀಡಿದ್ದರು. ಹಾಗಾಗಿ, ಉದ್ದೇಶಪೂರ್ವಕವಾಗಿಯೇ ಡಿಕೆಶಿಯವರು ಜಮೀರ್ ಅಹ್ಮದ್ ಅವರನ್ನು ಸಭೆಯಿಂದ ಹೊರಗಿಟ್ಟರೇ ಎನ್ನುವುದಿಲ್ಲಿ ಪ್ರಶ್ನೆ.












Click it and Unblock the Notifications