ಕಾಂಗ್ರೆಸ್ನಿಂದ ಅಹೋರಾತ್ರಿ ಧರಣಿ: ಈಶ್ವರಪ್ಪ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 17: "ಸಚಿವ ಕೆ.ಎಸ್. ಈಶ್ವರಪ್ಪನವರ ರಾಷ್ಟ್ರಧ್ವಜ ಕುರಿತಾದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ತಪ್ಪು ಅಭಿಪ್ರಾಯವನ್ನು ಜನರಿಗೆ ಹೇಳುವ ಪ್ರಯತ್ನ ಮಾಡುತ್ತಿರುವ ವಿರೋಧ ಪಕ್ಷದವರದ್ದು ಜನ ವಿರೋಧಿ ಧೋರಣೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರದಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ಜವಾಬ್ದಾರಿ ಮರೆತಿರುವ ವಿರೋಧಪಕ್ಷ ಅಹೋರಾತ್ರಿ ಧರಣಿ ಮಾಡುವುದು ವಿಧಾನಸಭೆಯಲ್ಲಿ ಹಲವಾರು ಬಾರಿ ಆಗಿದೆ. ಆದರೆ ಅದು ಜನಪರ ವಿಚಾರ, ರೈತರ, ರಾಜ್ಯದ ಹಿತದೃಷ್ಟಿಯಿಂದ ಆಗುತ್ತಿದ್ದವು," ಎಂದರು.
"ಸಚಿವ ಕೆ.ಎಸ್. ಈಶ್ವರಪ್ಪನವರ ಹೇಳಿಕೆಯಲ್ಲಿ ತಪ್ಪಿಲ್ಲ. ಅವರು ಹೇಳುವ ಯಾವುದೇ ಕಾನೂನು ವಿರೋಧಿ ಅಂಶಗಳಿಲ್ಲ. ಯಾವುದೇ ವಿಷಯ ವಿರೋಧ ಪಕ್ಷದವರಿಗೆ ಇಲ್ಲದ್ದರಿಂದ ಇದನ್ನು ತೆಗೆದಿದ್ದಾರೆ. ವಿನಾಕಾರಣ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಒಂದು ಜವಾಬ್ದಾರಿಯುತ ವಿರೋಧ ಪಕ್ಷದವರು ಮಾಡುವಂಥದ್ದಲ್ಲ. ವಿರೋಧಪಕ್ಷ ತನ್ನ ಜವಾಬ್ದಾರಿಯನ್ನು ಸಂಪೂರ್ಣ ಮರೆತಿದೆ. ಇದರಲ್ಲಿ ಏನೂ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಖಂಡಿತವಾಗಿ ರಾಜಕೀಯವಾಗಿಯಾಗಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಅವರಿಗೆ ಲಾಭವಾಗುವುದಿಲ್ಲ," ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಮಕ್ಕಳಲ್ಲಿ ಗೊಂದಲ ಸೃಷ್ಟಿಯಾಗಬಾರದು
"ಮಕ್ಕಳು ವಿದ್ಯಾರ್ಜನೆ ಮಾಡಬೇಕು ಎಂದು ರಾಜ್ಯದ ಜನತೆ, ಸಮಾಜ, ಸರ್ಕಾರ, ನಾವೆಲ್ಲರೂ ಸೇರಿ ಅವರವರ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಶಾಲಾ- ಕಾಲೇಜುಗಳಲ್ಲಿ ಶಾಂತಿ ಮೂಡಬೇಕು. ಮೊದಲಿನಂತೆಯೇ ವಿದ್ಯಾರ್ಜನೆಯಾಗಬೇಕು. ಮಾರ್ಚ್ನಲ್ಲಿ ಪರೀಕ್ಷೆಗಳು ನಡೆಯಲಿದ್ದು, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು. ಮಕ್ಕಳಲ್ಲಿ ಯಾವುದೇ ಗೊಂದಲಗಳು ಸೃಷ್ಟಿಯಾಗಬಾರದು ಎಂದು ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತಿದ್ದೇವೆ," ಎಂದು ಹೇಳಿದರು.
"ವಿದ್ಯಾರ್ಥಿಗಳ ಪರೀಕ್ಷೆಗೆ ಸಹಕಾರಿಯಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಸೇರಿ ವಿಧಾನಸಭೆಯ ಮೂಲಕ ಒಂದು ಸಂದೇಶವನ್ನು ಕಳುಹಿಸಬಹುದಾಗಿತ್ತು. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ಆದೇಶವನ್ನು ಪಾಲಿಸಬೇಕಾಗಿದೆ. ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ನಮ್ಮ ಜವಾಬ್ದಾರಿ ಶಾಂತಿ ನೆಲೆಸುವ ರೀತಿಯಲ್ಲಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಸದನದಲ್ಲಿ ಒಟ್ಟಾಗಿ ಆ ಸಂದೇಶವನ್ನು ಕಳಿಸುವ ಕೆಲಸ ನಾವು ಮಾಡುತ್ತಿದ್ದೇವೆ," ಎಂದರು.
ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ತಳಮಟ್ಟಕ್ಕೆ ಇಳಿದಿದೆ
ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗದಂಥ ಹೇಳಿಕೆಯ ಹಿನ್ನೆಲೆಯಲ್ಲಿ ಈಶ್ವರಪ್ಪನವರು ಮಾಡದಿರುವ ತಪ್ಪಿಗೆ ಇಲ್ಲಿ ಸದನದಲ್ಲಿ ಧರಣಿ ಮಾಡುವುದು ನಿಜವಾಗಿಯೂ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬಹಳ ತಳಮಟ್ಟಕ್ಕೆ ಹೋಗಿದೆ. ಇದೊಂದು ಒಳ್ಳೆಯ ಉದಾಹರಣೆ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಚಿಂತನೆಯಾಗಬೇಕು. ಸಾರ್ವಜನಿಕರೂ ಸಹ ಇದನ್ನು ಒಪ್ಪುವುದಿಲ್ಲ. ನಮ್ಮ ಸಮಸ್ಯೆಗಳನ್ನು ಚರ್ಚೆ ಮಾಡುತ್ತಾರೆ ಎಂದು ಸಾರ್ವಜನಿಕರು ಎದುರು ನೋಡುತ್ತಿರುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದ ಹಿತಾಸಕ್ತಿಯ ಬಲಿ
ಎಲ್ಲವನ್ನು ಬಿಟ್ಟು ಧರಣಿ ಮಾಡಿ ಕಲಾಪ ನಡೆಯಂದಂತೆ ಮಾಡುವುದು ಸಮರ್ಥನೀಯ ಅಲ್ಲ, ಜನರೂ ಇದನ್ನು ಒಪ್ಪುವುದಿಲ್ಲ. ಇದನ್ನು ವಿರೋಧಿಸುತ್ತಾರೆ. ಜನರು ಹಾಗೂ ಮಾಧ್ಯಮದವರು ಸರಿಯಾದ ರೀತಿಯಲ್ಲಿ ಇದನ್ನು ವ್ಯಾಖ್ಯಾನ ಮಾಡಿದರೆ ಖಂಡಿತವಾಗಿಯೂ ತಮ್ಮ ಧರಣಿಯನ್ನು ಹಿಂಪಡೆಯಲು ಅನಿವಾರ್ಯತೆ ಬರಬಹುದು. ರಾಜಕಾರಣವೇ ಅವರಿಗೆ ಮುಖ್ಯವಾಗಿರುವುದರಿಂದ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ತಾರ್ಕಿಕ ಅಂತ್ಯವೆಂಬುದಿಲ್ಲ
ಸಭಾಧ್ಯಕ್ಷರೊಂದಿಗೆ ಎರಡು ಸಭೆಗಳಾಗಿ ಇದನ್ನು ಬೆಳೆಸುವುದು ಬೇಡ ಎಂದು ತಿಳಿಸಲಾಗಿದೆ. ಅವರು ಇದನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಯಾವುದೇ ತಾರ್ಕಿಕ ಅಂತ್ಯವೆಂಬುದಿಲ್ಲ ಎಂದು ತಿಳಿಸಿದ್ದೇನೆ ಎಂದು ಮುಖ್ಯಮಂತ್ರಗಳು ಹೇಳಿದರು.












Click it and Unblock the Notifications