'ಸರ್ಕಾರ ಬೀಳುವುದರ ಹಿಂದೆ ಬಿಜೆಪಿ ಇಲ್ಲ, ಕಾಂಗ್ರೆಸ್ ಕೈವಾಡ ಇದೆ'
ಬೆಂಗಳೂರು, ಜುಲೈ 04: ಸರ್ಕಾರ ಬೀಳಿಸುವುದರ ಹಿಂದೆ ಬಿಜೆಪಿಯ ಕೈವಾಡ ಇಲ್ಲ, ಕಾಂಗ್ರೆಸ್ ಪಕ್ಷವೇ ಸರ್ಕಾರ ಬೀಳಿಸುವ ತಂತ್ರ ಹೆಣೆದಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿ.ಟಿ.ರವಿ, ಬಿಜೆಪಿಯು ಮೈತ್ರಿ ಸರ್ಕಾರವನ್ನು ಉರುಳಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ, ಕಾಂಗ್ರೆಸ್ ನಾಯಕರೇ ಆ ಕಾರ್ಯ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಆರೋಪದ ಬಗ್ಗೆ ಮಾತನಾಡಿದ ರವಿ ಅವರು, ನರೇಂದ್ರ ಮೋದಿ, ಅಮಿತ್ ಶಾ ಅವರ ಹೆಸರು ಹೇಳಲಿಲ್ಲವೆಂದರೆ, ತಿಂದ ಊಟ ಅರಗದ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ ಎಂದರು.

ಅಮಿತ್ ಶಾ, ನರೇಂದ್ರ ಮೋದಿ ಅವರ ಮೇಲೆ ವಿನಾಕಾರಣ ಆರೋಪ ಮಾಡಿದ್ದಕ್ಕೆ ಸಿದ್ದರಾಮಯ್ಯ ಅವರು ಕೂಡಲೇ ಕ್ಷಾಪಣೆ ಕೇಳಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.
ದೇವೇಗೌಡ ಅವರಿಗೆ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವುದು ಯಾರು, ಕಾಪಾಡುತ್ತಿರುವುದು ಯಾರು ಎಂಬುದು ಗೊತ್ತಿದೆ. ದೇವೇಗೌಡ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ದೂರು ಕೊಟ್ಟಿದ್ದು ಅಮಿತ್ ಶಾ ನರೇಂದ್ರ ಮೋದಿಯ ಮೇಲಾ? ಅಥವಾ ಸಿದ್ದರಾಮಯ್ಯ ಮೇಲಾ ಎಂದು ಅವರು ಪ್ರಶ್ನೆ ಮಾಡಿದರು.
ಅಧಿವೇಶನದಲ್ಲಿ ನಾವು ಐಎಂಎ, ಬರ, ಕುಡಿಯುವ ನೀರಿನ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ, ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ, ಆದರೆ ಇಂತಹಾ ವಿಷಯಗಳು ಪ್ರಸ್ತಾಪ ಆಗಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಆಟ ಆಡುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದರು.












Click it and Unblock the Notifications