ಆಮ್ ಆದ್ಮಿ ಪಕ್ಷ ಸೇರಿದ ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ
ಬೆಂಗಳೂರು ಸೆಪ್ಟಂಬರ್ 05: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಅವರು ಸೋಮವಾರ ಆಮ್ ಆದ್ಮಿ ಪಕ್ಷ (ಎಎಪಿ)ಕ್ಕೆ ಮುಖಂಡರ ನೇತೃತ್ವದಲ್ಲಿ ಸೇರ್ಪಡೆಗೊಂಡರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ಕರ್ನಾಟಕ ಉಸ್ತುವಾರಿ ದಿಲೀಪ್ ಪಾಂಡೆರವರು ಬ್ರಿಜೇಶ್ ಕಾಳಪ್ಪರವರನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
Just in: ಮಳೆಯಿಂದ 225 ಕೋಟಿ ರೂ. ನಷ್ಟ: ಐಟಿ ಕಂಪೆನಿ ಮುಖ್ಯಸ್ಥರೊಂದಿಗೆ ಚರ್ಚೆ- ಸಿಎಂ
ನಂತರ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ''ದೇಶದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಹಂಬಲವಿರುವ ನಾಯಕರಲ್ಲಿ ಬ್ರಿಜೇಶ್ ಕಾಳಪ್ಪ ಅವರು ಸಹ ಒಬ್ಬರು. ರಾಜಕೀಯ ಹಾಗೂ ಆಡಳಿತದಲ್ಲಿ ಆಮ್ ಆದ್ಮಿ ಪಾರ್ಟಿಯು ಬದಲಾವಣೆ ತಂದಿರುವುದನ್ನು ಮನಗಂಡು ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ'' ಎಂದರು.
ಎಎಪಿ ದೇಶಪರ ಕಾಳಜಿವುಳ್ಳವರ ವೇದಿಕೆ
ಜನಪರ ಕಾಳಜಿಯಿರುವವರಿಗೆ ಹಾಗೂ ದೇಶದ ಭವಿಷ್ಯಕ್ಕಾಗಿ ದುಡಿಯುವ ಹಂಬಲ ಇರುವವರಿಗೆ ಎಎಪಿಯು ಉತ್ತಮ ವೇದಿಕೆಯಾಗಿದೆ. ಇದನ್ನು ಇನ್ನಷ್ಟು ನಾಯಕರು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಬೆಂಗಳೂರಿನಲ್ಲಿ ಮಾಲಿನ್ಯ ತಡೆಯಲು ಬರುತ್ತಿವೆ ನೀರಿನ ಕಾರಂಜಿಗಳು; ಇದು ಹೇಗೆ ಸಾಧ್ಯ?
ಮೂರು ಪಕ್ಷದಿಂದ ಸಜ್ಜನ ನಾಯಕರು ಮೂಲೆಗುಂಪು
ಸಜ್ಜನ ನಾಯಕರನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಂತಹ ಪಕ್ಷಗಳು ಮೂಲೆಗುಂಪು ಮಾಡುತ್ತಿವೆ. ಅವುಗಳಿಗೆ ಕಮಿಷನ್ ರೂಪದಲ್ಲಿ ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆಯುವ ನಾಯಕರು ಬೇಕೇ ವಿನಹ ಪ್ರಾಮಾಣಿಕರು ಬೇಡ. ಹಣಬಲ ಹಾಗೂ ತೋಳು ಬಲವಿಲ್ಲದ ಒಳ್ಳೆಯ ಜನರನ್ನು ಅಧಿಕಾರದಿಂದ ದೂರವಿಡಲು ಆ ಪಕ್ಷಗಳ ನಾಯಕರು ಸದಾ ಯೋಜನೆ ರೂಪಿಸುತ್ತಿರುತ್ತಾರೆ. ಇದರಿಂದಾಗಿ ಅನೇಕ ಸಜ್ಜನ ರಾಜಕಾರಣಿಗಳು ಆಮ್ ಆದ್ಮಿ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಎಎಪಿಯ ಸತ್ಯ ನಿಷ್ಠೆಯ ರಾಜಕಾರಣ ಹಾಗೂ ಕೊಟ್ಟ ಮಾತಿಗೆ ತಪ್ಪದಿರುವ ಗುಣವು ಒಳ್ಳೆಯ ಮನಸ್ಸುಗಳನ್ನು ಆಕರ್ಷಿಸುತ್ತಿದೆ ಎಂದು ಅವರು ತಿಳಿಸಿದರು.
ವಿವಿಧ ರಂಗದಲ್ಲಿ ಅನುಭವ ಹೊಂದಿರುವ ಬ್ರಿಜೇಶ್ ಕಾಳಪ್ಪ
ಬ್ರಿಜೇಶ್ ಕಾಳಪ್ಪನವರು ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಜೀವನ ಪ್ರವೇಶಿಸಿ ಬಳಿಕ ಕಾಂಗ್ರೆಸ್ ನಾಯಕರಾದರು. ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸುಪ್ರೀಂಕೋರ್ಟ್ ವಕೀಲರಾಗಿ, ಪತ್ರಕರ್ತರಾಗಿ ಅನುಭವುಳ್ಳವರು. ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ, ಹರಿಯಾಣ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ.
ಕಾವೇರಿ, ಕೃಷ್ಣಾ, ಮಹದಾಯಿ ನದಿಗಳ ನೀರು ಹಂಚಿಕೆ ವಿವಾದಗಳಿಗೆ ಸಂಬಂಧಿಸಿ ಕರ್ನಾಟಕದ ಪರ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿದ್ದಾರೆ. ಯಾವುದೇ ವಿಚಾರವನ್ನು ತಕ್ಷಣ ಗ್ರಹಿಸಿ, ಸೂಕ್ಷ್ಮ ವಿವೇಚನೆಯೊಂದಿಗೆ ಸತ್ಯಾಂಶವನ್ನು ಹೊರತೆಗೆಯುವ ವಿಶೇಷ ಗುಣವನ್ನು ಬ್ರಿಜೇಶ್ ಕಾಳಪ್ಪ ಹೊಂದಿದ್ದಾರೆ ಎಂದು ಪೃಥ್ವಿ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಎಪಿ ಗುಣಮಟ್ಟದ ಆಡಳಿತ ತೋರಿಸಿದೆ
ಆಮ್ ಆದ್ಮಿ ಪಕ್ಷ ಸೇರ್ಪಡೆ ನಂತರ ಮಾತನಾಡಿದ ಬ್ರಿಜೇಶ್ ಕಾಳಪ್ಪ, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ಎಎಪಿ ದೇಶಕ್ಕೆ ತೋರಿಸಿಕೊಡುತ್ತಿದೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ ದುರಾಡಳಿತ ನೀಡುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯವು ಆಮ್ ಆದ್ಮಿ ಪಕ್ಷಕ್ಕಿದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಎಎಪಿ ಜಯಗಳಿಸಿ ಅಧಿಕಾರ ಹಿಡಿದರೆ ಮಾತ್ರ ದೇಶದ ಭವಿಷ್ಯ ಬಲಗೊಳ್ಳಲಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮಾಜಿ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಪಕ್ಷದ ಮಾಧ್ಯಮ ವಕ್ತಾರ ಕೆ. ಮಥಾಯಿ, ಪಕ್ಷದ ಮುಖಂಡರಾದ ಮೋಹನ್ ದಾಸರಿ, ಸಂಚಿತ್ ಸಹವಾನಿ, ಜಗದೀಶ್ ವಿ ಸದಂ, ಕುಶಲಸ್ವಾಮಿ, ಚನ್ನಪ್ಪಗೌಡ ನಲ್ಲೂರು, ಸುರೇಶ್ ರಾಥೋಡ್, ದರ್ಶನ್ ಜೈನ್ ಮತ್ತಿತರ ನಾಯಕರು, ಕಾರ್ಯಕರ್ತರು ಹಾಗೂ ಬ್ರಿಜೇಶ್ ಕಾಳಪ್ಪರವರ ಅನೇಕ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.