ನನಗೆ ಯಾವ ಸಚಿವ ಸ್ಥಾನ, ಹುದ್ದೆಯೂ ಬೇಕಿಲ್ಲ: ರಾಮಲಿಂಗಾರೆಡ್ಡಿ
ಬೆಂಗಳೂರು, ಜುಲೈ 8: ಸಮ್ಮಿಶ್ರ ಸರ್ಕಾರದಲ್ಲಿ ತಮಗೆ ಸೂಕ್ತ ಗೌರವ ಸಿಗದ ಬೇಸರದಿಂದ ರಾಜೀನಾಮೆ ನೀಡಿರುವ ಬಿಟಿಎಂ ಲೇಔಟ್ನ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರು ತಾವು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂಬೈನಲ್ಲಿರುವ ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿಲ್ಲ. ನಾನೂ ಅವರನ್ನು ಸಂಪರ್ಕಿಸಿಲ್ಲ. ನಾನು ಮುಂಬೈಗೂ ಹೋಗೊಲ್ಲ, ದೆಹಲಿಗೂ ಹೋಗೊಲ್ಲ. ಬೆಂಗಳೂರಿನಲ್ಲಿಯೇ ಇರುತ್ತೇನೆ' ಎಂದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಆಪ್ತರ ಮನೆಯಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ, ಅದನ್ನು ರಾಮಲಿಂಗಾ ರೆಡ್ಡಿ ನಿರಾಕರಿಸಿದರು.

'ನನಗೆ ಯಾವ ಸಚಿವ ಸ್ಥಾನವೂ, ಹುದ್ದೆಯೂ ಬೇಕಾಗಿಲ್ಲ. ರಾಜಕೀಯ ಜೀವನಕ್ಕೆ ಬಂದು 30 ವರ್ಷಗಳಾಗಿದೆ. ಮಂತ್ರಿ ಆಗಬೇಕೆಂದು ಎಂದೂ ಲಾಬಿ ಮಾಡಿಲ್ಲ. ಇಂದೂ ಮಾಡುತ್ತಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದರು.
ಮಗಳು, ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ಅವರ ರಾಜೀನಾಮೆ ಕುರಿತ ಪ್ರಶ್ನೆಗೆ, 'ಸೌಮ್ಯಾ ರೆಡ್ಡಿ ದೆಹಲಿಗೆ ಹೋಗಿದ್ದಾರೆ. ಅವರ ರಾಜೀನಾಮೆ ಕುರಿತು ಅವರನ್ನೇ ಕೇಳಿದೆ. ಅವರೂ ಒಬ್ಬ ಶಾಸಕಿ. ಅವರಲ್ಲಿ ಸ್ವತಂತ್ರವಾಗಿ ಯೋಚನೆ ಮಾಡುವ ಶಕ್ತಿ ಇದೆ' ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಅವರ ಮುಂದಿನ ನಡೆಯ ಮೇಲೆ ಸೌಮ್ಯಾ ರೆಡ್ಡಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ಮನವೊಲಿಕೆ ಮಾಡುವಲ್ಲಿ ರಾಜ್ಯ ನಾಯಕರು ವಿಫಲವಾಗಿ ಅವರು ರಾಜೀನಾಮೆ ವಾಪಸ್ ತೆಗೆದುಕೊಳ್ಳದೆ ಇದ್ದರೆ, ದೆಹಲಿಯಿಂದ ಬಂದ ಬಳಿಕ ಸೌಮ್ಯಾ ರೆಡ್ಡಿ ಅವರೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications