ಅಧಿಕಾರ ಬಂದಾಗಲೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಆದ್ಯತೆ ನೀಡಿದ್ದು ಕಾಂಗ್ರೆಸ್: ಬಿಜೆಪಿ
ಬೆಂಗಳೂರು, ಸೆಪ್ಟಂಬರ್ 15: ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರುರವರಿಂದ ಆರಂಭವಾಗಿ ಇಂದಿನ ರಾಹುಲ್ ಗಾಂಧಿಯವರೆಗೂ ಕಾಂಗ್ರೆಸ್ಗೆ ಅಧಿಕಾರ ದೊರೆತಾಗಲೆಲ್ಲಾ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ಆದ್ಯತೆ ನೀಡಿದೆ ಎಂದು ಪತ್ರಿಕಾ ಸ್ವಾತಂತ್ರ್ಯ ಧಮನ ವಿಚಾರ ಕುರಿತು ಕಾಂಗ್ರೆಸ್ ವಿರುದ್ಧ ಕರ್ನಾಟಕ ಬಿಜೆಪಿ ಕಟುವಾಗಿ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿಯ, ಕಾಂಗ್ರೆಸ್ನ ಇತಿಹಾಸವನ್ನು ಗಮನಿಸಿದರೆ ಸಾಕು ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ನೀಡುವ ಬದಲು ಧಕ್ಕೆ ತಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಜನತಾ ನ್ಯಾಯಾಲಯದಲ್ಲಿ ಕಾಂಗ್ರೆಸ್ಗೆ ತೀವ್ರ ಮುಖಭಂಗವಾದಾಗ ಹಾಗೂ ತನ್ನ ಅಸ್ತಿತ್ವವನ್ನು ನಶಿಸಿ ಹೋಗುತ್ತಿರುವ ಸಂದರ್ಭಗಳೆಲ್ಲ ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತದೆ ಎಂದು ತಿಳಿಸಿದೆ.

1951 ರಲ್ಲಿಯೇ ಜವಾಹರಲಾಲ್ ನೆಹರುರು ಅವರು ಸಂವಿಧಾನದ 19 ನೇ ವಿಧಿಗೆ ತಿದ್ದುಪಡಿ ತಂದು ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದರು. ಅದಲ್ಲದೆ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ತಮ್ಮ ಕ್ರಮವನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದರು.
ಚಂದ್ರಮೋಹಿನಿ, ರಾಮಾಯಣ ಸೇರಿದಂತೆ ನೂರಾರು ಪುಸ್ತಕಗಳನ್ನು ನಿಷೇಧಿಸುವ ಜೊತೆ, ಸಿನಿಮಾ ಹಾಡುಗಳು ಹಾಗೂ ಪರಾಶಕ್ತಿ, ನಾಸ್ತಿಕ್ನಂತಹ ಸಿನಿಮಾಗಳನ್ನು ನಿಷೇಧಿಸಿದ್ದರು. ಇದು ನೆಹರು ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನೀಡಿದ ಗೌರವ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡಿದ್ದ ಕಾಂಗ್ರೆಸ್
ದೇಶದ ಇತಿಹಾಸದಲ್ಲಿಯೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿ ಹೆಚ್ಚು ಅಗೌರವ ನೀಡಿದ್ದು ಇಂದಿರಾಗಾಂಧಿ ಅವರು. 1975ರಲ್ಲಿ ಭಾರತದ ಇತಿಹಾಸದಲ್ಲಿಯೇ ಕರಾಳ ದಿನ ಎಂಬಂತೆ ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿ ಪ್ರಜೆಗಳು ಹಾಗೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವರ್ಷಗಳ ಕಾಲ ಕಿತ್ತುಕೊಂಡಿದ್ದರು.\

ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯಿಂದ ಅಂದಿನ ವಿರೋಧ ಪಕ್ಷದವರು, ಪತ್ರಕರ್ತರು, ನಾಗರಿಕರು ಸೇರಿದಂತೆ ಸಾವಿರಾರು ಜನ ವರುಷಗಟ್ಟಲೆ ಜೈಲುವಾಸ ಅನುಭವಿಸಿದರು.
ವಿರೋಧ ಬಳಿಕ ಹೊಸ ಕಾಯ್ದೆ ವಾಪಸ್
ರಾಜೀವ್ ಗಾಂಧಿಯವರೂ ಇಂದಿರಾ ಗಾಂಧಿಯವರ ಹಾದಿಯಲ್ಲೇ ಹೆಜ್ಜೆ ಹಾಕಿದ್ದರು. ಪತ್ರಿಕೆಗಳನ್ನು ಸಹ ಸರ್ಕಾರವು ಸೆನ್ಸಾರ್ ಮಾಡಿದ ನಂತರವೇ, ಮುದ್ರಿಸಬೇಕೆಂಬ 'ಮಾನನಷ್ಟ ಮಸೂದೆ' ಹಾಗೂ ಜನ ಪರಸ್ಪರರಿಗೆ ಬರೆಯುವ ಪತ್ರಗಳನ್ನೂ ಪೋಸ್ಟ್ ಆಫೀಸ್ನಲ್ಲಿ ಓದಲು ಹೊಸ ಕಾಯ್ದೆ ಜಾರಿ ಮಾಡಲು ರಾಜೀವ್ ಗಾಂಧಿ ಸರ್ಕಾರ ಮುಂದಾಗಿತ್ತು ಎಂದು ಬಿಜೆಪಿ ವಿವರಿಸಿದೆ.
ಹೊಸ ಕಾಯ್ದೆ ಜಾರಿ ಮಾಡಲು ಮುಂದಾದಾಗ ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಆ ಮಸೂದೆಯನ್ನು ಹಿಂಪಡೆದುಕೊಂಡಿತ್ತು. ಸಮಾಜದ ಮುಖವಾಣಿಯಾದ ಪತ್ರಿಕೆಗಳನ್ನು ಸೆನ್ಸಾರ್ ಮಾಡಲು ಹೊರಟಿದ್ದ ಕಾಂಗ್ರೆಸ್, ಇಂದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಹಾಸ್ಯಾಸ್ಪದವಾಗಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಡೆ ಖಂಡಿಸಿದರು.
ಬಿಜೆಪಿ ಬರುವ ಮುನ್ನ ಸ್ವಾತಂತ್ರ್ಯ ಬುಡಮೇಲು
ಸೋನಿಯಾ ಗಾಂಧಿಯವರು ಹಾಗೂ ರಾಹುಲ್ ಗಾಂಧಿಯವರ 2004-2014ರ ಅವಧಿಯಲ್ಲಿ ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಬುಡಮೇಲು ಮಾಡಲು ಹೊರಟಿತ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. 2008ರಲ್ಲಿ ಐಟಿ ಕಾಯಿದೆಗೆ ತಿದ್ದುಪಡಿಯ ಅಂಗವಾಗಿ ಪರಿಚಯಿಸಿದ ಸೆಕ್ಷನ್ 66ಎ ವಾಸ್ತವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧದ ಟೂಲ್ ಕಿಟ್ನ ಪ್ರಮುಖ ಭಾಗವಾಗಿದೆ.
ತಮ್ಮ UPA ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಹೋರಾಟಗಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ಈ ಕಾಯ್ದೆ ಬಳಸಿ ಹಣಿಯಲು ಮುಂದಾಗಿದ್ದು ಜಗಜ್ಜಾಹೀರಾಗಿತ್ತು. ಆದರೆ ಕೊನೆಗೆ ಸುಪ್ರೀಂ ಕೋರ್ಟ್ ತಪರಾಕಿ ನೀಡಿದ ಮೇಲೆ ಪೆಚ್ಚು ಮೋರೆ ಹಾಕಿಕೊಳ್ಳಬೇಕಾದ ಪ್ರಸಂಗ ಕಾಂಗ್ರೆಸ್ ನದ್ದಾಯಿತು.
ಪ್ರಸ್ತುತ ಅಸ್ತಿತ್ವದ ಹುಡುಕಾಟದಲ್ಲಿ ಕಾಂಗ್ರೆಸ್, UPA ಎಂಬ ತನ್ನ ಮೈತ್ರಿಕೂಟದ ಹೆಸರು I.N.D.I.A. ಮೈತ್ರಿ ಎಂದು ಬದಲಿಸಿದೆ. ಆದರೆ ಕಾಂಗ್ರೆಸ್ನ ಬುದ್ಧಿ ಮಾತ್ರ ಬದಲಾಗಿಲ್ಲ ಎಂಬುದಕ್ಕೆ ಕರ್ನಾಟಕದಲ್ಲಿ ಬೆಳವಣಿಗೆಗಳೇ ಸಾಕ್ಷಿ ಎಂದು ಬಿಜೆಪಿ ತಿಳಿಸಿದೆ.
ಜನವಿರೋಧಿ ನೀತಿ ಪ್ರಶ್ನಿಸಿದರೆ FIR ದಾಖಲು
ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿದರೆ, FIR ಹಾಕಲು ಒಬ್ಬ ಸಚಿವರನ್ನು ನೇಮಿಸಿದೆ. ತಾನು ತಾನೇ ಸುಳ್ಳು ಸುದ್ದಿಯ ಜನಕನಾದರೂ, ಫ್ಯಾಕ್ಟ್ ಚೆಕ್ ಮಾಡಲು ತನ್ನ ವಂಧಿಮಾಗದರಿಗೆ ಅವಕಾಶ ನೀಡಿದೆ. ತನಗೆ ಸೊಪ್ಪು ಹಾಕದ, ತನ್ನ ತಾಳಕ್ಕೆ ಕುಣಿಯದ ಪತ್ರಕರ್ತರ ಮೇಲೆ ಏಕಪಕ್ಷೀಯವಾಗಿ ನಿಷೇಧ ಹೇರಿ, ತನಗೆ ತಾನೇ ಸಾಚಾತನದ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿರುವುದು ಈ ಶತಮಾನದ ಜೋಕ್ ಆಗಿದೆ.
ಇದೆಲ್ಲದರ ನಡುವೆ ತಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇದ್ದೇನೆ ಎಂದು ಕಾಂಗ್ರೆಸ್ ಹೇಳುವುದು ಒಂದು ರೀತಿ "ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಎಂದು ಬಿಜೆಪಿ ಲೇವಡಿ ಮಾಡಿದೆ.












Click it and Unblock the Notifications