'ಲೋಕಾಯುಕ್ತ ಸಮಾಧಿ ಮಾಡುತ್ತಿರುವ ಕಾಂಗ್ರೆಸ್ಸಿಗೆ ಧಿಕ್ಕಾರ!'
ಬೆಂಗಳೂರು, ಮಾರ್ಚ್ 16 : ಭಾರತ ದೇಶದಲ್ಲೇ ಅತ್ಯಂತ ಶಕ್ತಿಶಾಲಿ ಭ್ರಷ್ಟಾಚಾರ ವಿರೋಧಿ ಹಾಗೂ ನಿಗ್ರಹ ಸಂಸ್ಥೆಯಾಗಿದ್ದ ಕರ್ನಾಟಕ ಲೋಕಾಯುಕ್ತವನ್ನು ಸಂಪೂರ್ಣವಾಗಿ ಮುಗಿಸಿ, ಇಡೀ ರಾಜ್ಯದಲ್ಲಿ ಭ್ರಷ್ಟರ ವಿರುದ್ಧ ಧ್ವನಿ ಎತ್ತದಂತೆ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರವನ್ನು ಕರ್ನಾಟಕ ಆಮ್ ಆದ್ಮಿ ಪಕ್ಷ ಕೂಗಿದೆ.
ಕರ್ನಾಟಕ ಲೋಕಾಯುಕ್ತವನ್ನು ಬಲಪಡಿಸಿ, ಲೋಕಾಯುಕ್ತ ಸ್ಥಾನಕ್ಕೆ ಪ್ರಾಮಾಣಿಕರನ್ನು ನೇಮಿಸಲು ಜನರು ನಡೆಸುತ್ತಿರುವ ಹೋರಾಟವನ್ನು ಮುಗಿಸಿಹಾಕಲು, ಇಡೀ ಲೋಕಾಯುಕ್ತ ಸಂಸ್ಥೆಯನ್ನೇ ಹಲ್ಲಿಲ್ಲದ ಹಾವಿನ ಹಾಗೆ, ಉಗಿರುಲ್ಲದ ಸಿಂಹದ ಹಾಗೆ ಮಾಡಲು ಭ್ರಷ್ಟ ರಕ್ಷಕ ಕಾಂಗ್ರೆಸ್ ಪಾರ್ಟಿ ಪಣ ತೊಟ್ಟು ನಿಂತಿದೆ ಎಂದು ಆಪ್ ಬುಧವಾರ ಆರೋಪಿಸಿದೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]
ಅದರ ಭಾಗವಾಗಿಯೇ ಪರಮಭ್ರಷ್ಟರಿಂದ ತುಂಬಿ ತುಳುಕುತ್ತಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನೆಲ್ಲಾ ವರದಿ ಒಪ್ಪಿಸುವ ಭ್ರಷ್ಟಾಚಾರ ನಿಗ್ರಹಿ ದಳವನ್ನು ಲೋಕಾಯುಕ್ತದ ಬದಲಾಗಿ ರಚಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರೆಸ್ ಕ್ಲಬ್ ನಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶಪಡಿಸಿದೆ. [ಸರ್ಕಾರದ ನೀಚ ಬುದ್ಧಿಗೆ ಲೋಕಾಯುಕ್ತ ಸಂಸ್ಥೆ ಬಲಿ : ಆಪ್]

1984ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಲೋಕಾಯುಕ್ತದ ಪರಮೋದ್ದೇಶ, 1966ರಲ್ಲಿ ಆಡಳಿತ ಸುಧಾರಾತ್ಮಕ ಆಯೋಗದ ಶಿಫಾರಸಿನಂತೆ, ಭ್ರಷ್ಟಾಚಾರ ನಿಗ್ರಹ ಕಾರ್ಯಚರಣೆಯಲ್ಲಿ ಯಾವುದೇ ಜನಪ್ರತಿನಿಧಿಗಳ, ಆಡಳಿತ ಪಕ್ಷಗಳ ಹಿಡಿತದಲ್ಲಿ ಸಿಲುಕದೇ, ಗುಲಾಮಿಗೆ ಒಳಗಾಗದೇ ಸ್ವತಂತ್ರವಾಗಿ ಸಾರ್ವಜನಿಕರಿಂದ ಬರುವ ದೂರಗಳ ಕುರಿತು ತನಿಖೆ ನಡೆಸಿ ಭ್ರಷ್ಟರನ್ನು ಶಿಕ್ಷಿಸುವುದು.
ಆದರೆ ಮುಖ್ಯಮಂತ್ರಿಗಳು ಈಗ ಮಾಡಲು ಹೊರಟಿರುವ ಕಾರ್ಯದಿಂದಾಗಿ, ಭ್ರಷ್ಟಾಚಾರದ ವಿರುದ್ಧ ಸಕಲತರವಾದ ಹೋರಾಟವನ್ನು ಹತ್ತಿಕ್ಕಿ, ಭ್ರಷ್ಟರನ್ನು ಶಿಕ್ಷಿಸಲು ಇರುವ ಎಲ್ಲಾ ಬಾಗಿಲುಗಳನ್ನು ಮುಚ್ಚುವಂತಿದೆ. ವ್ಯವಸ್ಥಿತವಾಗಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಹೊರಟಿರುವ ಈ ಪ್ರಯತ್ನ ಸಫಲಗೊಳ್ಳಲು ಆಮ್ ಆದ್ಮಿ ಪಕ್ಷ ಬಿಡುವುದಿಲ್ಲ ಎಂದು ಹೇಳಿದೆ. [ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದ ಸರ್ಕಾರ]

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಾರ್ವಜನಿಕರು ಯಾವುದೇ ಭ್ರಷ್ಟ ಅಧಿಕಾರಿಯ ವಿರುದ್ಧ ದೂರು ದಾಖಲಿಸಲೂ ಸ್ವತಃ ತಾವೇ ಪುರಾವೆಗಳನ್ನು ಪೂರೈಸಬೇಕಿದೆ. ಪುರಾವೆ ಇಲ್ಲದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಎನ್ನಲಾಗುತ್ತದೆ. ಆದರೆ ಲೋಕಾಯುಕ್ತಕ್ಕೆ ಭ್ರಷ್ಟಾಚಾರದ ತನಿಖೆ ನಡೆಸಲು ಯಾವುದೇ ಅಧಿಕಾರವಿರುವುದಿಲ್ಲ. ಒಟ್ಟಿನಲ್ಲಿ ಮತ್ತೆಂದೂ ಜನಸಾಮಾನ್ಯರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಗುತ್ತಿದೆ ಎಂದು ಆಪ್ನ ರಾಜ್ಯ ಸಹ-ಸಂಚಾಲಕ ಶಿವಕುಮಾರ ಚೆಂಗಲರಾಯ ಹೇಳಿದರು.
"ಆಟಕ್ಕುಂಟು ಲೆಕ್ಕಕಿಲ್ಲ" ಎಂಬಂತಹ, ಅಧಿಕಾರವಿದ್ದರೂ ಅದನ್ನು ಪ್ರಯೋಗಿಸಲಾಗದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ರಾಜ್ಯಕ್ಕೆ ಬೇಡ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ. ಇಂತಹ ಜನವಿರೋಧಿ ಆದೇಶವನ್ನು ಈ ಕೂಡಲೇ ಹಿಂಪಡೆಯದಿದ್ದರೆ ನಿಮ್ಮ ಪತನ ಜನರೇ ಶುರುಮಾಡಲಿದ್ದಾರೆ. ಸರ್ಕಾರದ ಈ ಜನವಿರೋಧಿ ಆದೇಶದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ಇಚ್ಛಿಸುವ ಎಲ್ಲರಿಗೂ ಈಸಂಖ್ಯೆಗೆ 080-67519053 ಮಿಸ್ಡ್ ಕಾಲ್ ನೀಡಬೇಕೆಂದು ಆಪ್ ಕೇಳಿಕೊಂಡಿದೆ.












Click it and Unblock the Notifications