ಸೂಲಿಬೆಲೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರ ಆರ್ಭಟ: ವಿದ್ಯಾಪೀಠದಲ್ಲಿ ನಡೆದಿದ್ದೇನು
Recommended Video
ಬೆಂಗಳೂರು, ಏ 7: ಧಾರ್ಮಿಕ ಸಮಾರಂಭವೊಂದರಲ್ಲಿ ಭಾಷಣ ಮಾಡುತ್ತಿದ್ದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ, ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಯುಗಾದಿಯ ದಿನ ಸಾಯಂಕಾಲ ನಡೆದಿದೆ.
ಉಡುಪಿಯ ಹಿರಿಯ ಪೇಜಾವರ ವಿಶ್ವೇಶ್ವರತೀರ್ಥ ಶ್ರೀಗಳ ಸಾನಿಧ್ಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸೂಲಿಬೆಲೆ, ಭಾರತ್ ಮಾತಾ ಕೀ ಜೈ ಎಂದು ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು 'ರಾಹುಲ್ ರಾಹುಲ್' ಎಂದು ಘೋಷಣೆ ಕೂಗಲಾರಂಭಿಸಿದರು.
ಸಿದ್ದು ಕೈಲಿದ್ದ ಚಾಟಿ ಕಸಿದುಕೊಂಡರೆ ಮೋದಿ? : ಸೂಲಿಬೆಲೆ ವಿಶ್ಲೇಷಣೆ
ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮದಲ್ಲಿ ಆಗಮಿಸಿದ್ದವರು ಮೋದಿ ಮೋದಿ ಎಂದು ಘೋಷಣೆ ಕೂಗಲಾರಂಭಿಸಿದರು. ಮೋದಿ ಮೋದಿ ಎಂದು ಕೂಗುತ್ತಿದ್ದವರನ್ನು ತಡೆದ ಸೂಲಿಬೆಲೆ, ದಯವಿಟ್ಟು ಯಾರ ಹೆಸರನ್ನೂ ಕೂಗಬೇಡಿ. ಇದು ಯಾವುದೇ ವ್ಯಕ್ತಿಯ ಅಥವ ಪಕ್ಷದ ಕಾರ್ಯಕ್ರಮವಲ್ಲ ಎಂದು ಮನವಿ ಮಾಡಿದರು.
ಜೊತೆಗೆ, ಕಾರ್ಯಕ್ರಮದ ಮಧ್ಯೆಯೇ ಸಂಘಟಕರು ಕೂಡಾ, ಇದೊಂದು ಧಾರ್ಮಿಕ ಕಾರ್ಯಕ್ರಮ ಯಾರ ಹೆಸರನ್ನೂ ಇಲ್ಲಿ ಬಳಸಬೇಡಿ ಎಂದು ಮನವಿ ಮಾಡಿದರೂ, ರಾಹುಲ್ ಪರ ಘೋಷಣೆ ಮುಂದುವರಿದಿತ್ತು. ಈ ನಡುವೆ, ಇಂತವರನ್ನು ನಿರ್ಲಕ್ಷ್ಯ ಮಾಡುವುದೇ ಇವರಿಗೆ ಕೊಡುವ ಮರ್ಯಾದೆ ಎಂದು ಚಕ್ರವರ್ತಿ ಸೂಲಿಬೆಲೆ ತಮ್ಮ ಭಾಷಣವನ್ನು ಮುಂದುವರಿಸಿದರು.
ಚುನಾವಣಾ ಅಧಿಕಾರಿಗಳು ದಯವಿಟ್ಟು ಇದನ್ನು ಗಮನಿಸಿ, ಇದು ನಮ್ಮಿಂದ ಆಗಿರುವ ಅಚಾತುರ್ಯವಲ್ಲ
ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಘೋಷಣೆ ಕೂಗುತ್ತಿದ್ದ ಮಧ್ಯೆ, ಚುನಾವಣಾ ಅಧಿಕಾರಿಗಳು ದಯವಿಟ್ಟು ಇದನ್ನು ಗಮನಿಸಬೇಕು, ಇದು ನಮ್ಮಿಂದ ಆಗಿರುವ ಅಚಾತುರ್ಯವಲ್ಲ. ನಾನಿಲ್ಲಿ ರಾಷ್ಟ್ರದ ಬಗ್ಗೆ ಮಾತನಾಡಲು ಬಂದಿದ್ದೇನೆ, ಭೋಲೋ ಭಾರತ್ ಮಾತಾಕೀ ಜೈ ಎಂದರೆ, ಅದು ಯಾವ ಪಕ್ಷದ ಪರವಾಗಿಯೂ ಅಲ್ಲದ ಘೋಷಣೆ ಎನ್ನುವುದು ನನ್ನ ನಂಬಿಕೆ ಎಂದು ಸೂಲಿಬೆಲೆ ಭಾಷಣ ಮುಂದುವರಿಸಿದರು.
ಲೋಕಕಲ್ಯಾಣಾರ್ಥ ವಿಷ್ಣುಸಹಸ್ರನಾಮ ಯಜ್ಞ ಕಾರ್ಯಕ್ರಮ
ಲೋಕಕಲ್ಯಾಣಾರ್ಥ ವಿಷ್ಣುಸಹಸ್ರನಾಮ ಯಜ್ಞ ಕಾರ್ಯಕ್ರಮವನ್ನು ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳ ಸಾನಿಧ್ಯದಲ್ಲಿ ನಗರದ ಕತ್ತರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಯೋಜಿಸಲಾಗಿತ್ತು. ಬೆಳಗ್ಗೆ ವಿವಿಧ ಹೋಮಹವನಾದಿ ಕಾರ್ಯಕ್ರಮಗಳು ನಡೆದಿದ್ದವು. ಸಾಯಂಕಾಲ, ಚಕ್ರವರ್ತಿ ಸೂಲಿಬೆಲೆ ಮತ್ತು ವಿದ್ಯಾಪೀಠದ ಪ್ರಾಂಶುಪಾಲಾರಾದ ಡಾ. ಸತ್ಯನಾರಾಯಣಾಚಾರ್ಯರ, 'ರಾಷ್ಟ್ರಧರ್ಮ' ಎನ್ನುವ ವಿಷಯದ ಮೇಲೆ ದಿಕ್ಸೂಚಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬಸವನಗುಡಿ, ವಿದ್ಯಾಪೀಠ ವಾರ್ಡ್ ಬಿಬಿಎಂಪಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್ ಮುಖಂಡರು
ಸೂಲಿಬೆಲೆ ಭಾಷಣ ಇದೆ ಎನ್ನುವುದನ್ನು ಅರಿತ ಕಾಂಗ್ರೆಸ್ ಮುಖಂಡರು, ಪ್ರತಿಭಟನೆಗೆ ರೂಪುರೇಷೆ ಹಾಕಿಕೊಂಡಿದ್ದರು. ಬಸವನಗುಡಿ ಮತ್ತು ವಿದ್ಯಾಪೀಠ ವಾರ್ಡ್ ಬಿಬಿಎಂಪಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದರು. ಸೂಲಿಬೆಲೆ ಭಾಷಣ ಆರಂಭವಾಗುತ್ತಿದ್ದಂತೆಯೇ, ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿ, ರಾಹುಲ್ ಗೆ ಜೈ, ಮೋದಿಗೆ ಧಿಕ್ಕಾರ ಕೂಗಲಾರಭಿಸಿದರು.
ಕಾರ್ಯಕ್ರಮವಕ್ಕೆ ಆಗಮಿಸಿದ ಮಹಿಳೆಯರನ್ನು ಎಳೆದಾಡಿದ ದೃಶ್ಯ
ಪ್ರತಿಭಟನೆ ನಡೆಯುತ್ತಿದ್ದರೂ, ಸೂಲಿಬೆಲೆ ತಮ್ಮ ಭಾಷಣವನ್ನು ಮುಂದುವರಿಸಿದರು, ಕಾಂಗ್ರೆಸ್ಸಿಗರ ಪ್ರತಿಭಟನೆಯೂ ಮುಂದುವರಿದಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರನ್ನು ಎಳೆದಾಡಿದ ದೃಶ್ಯಗಳೂ ವಿಡಿಯೋದಲ್ಲಿ ದಾಖಲಾಗಿದೆ. ಈ ದೃಶ್ಯ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಡೆದುಕೊಂಡ ರೀತಿಯನ್ನು ವಿವರಿಸುವ ಆಡಿಯೋ ತುಣುಕು ಕೂಡಾ ಕೂಡ ವೈರಲ್ ಆಗುತ್ತಿದೆ.
ಉಪಗ್ರಹವನ್ನೂ ಕಕ್ಷೆಯಲ್ಲಿ ಸೇರಿಸಲು ಇಸ್ರೋಗೆ ಮನವಿ ಮಾಡುತ್ತಿದೆ
ಕ್ರಯೋಜನಿಕ್ ಇಂಜಿನ್ ಭಾರತಕ್ಕೆ ಕೊಡಲು ನಿರಾಕರಿಸಿದ್ದ ಅಮೆರಿಕ, ನಮ್ಮ ಉಪಗ್ರಹವನ್ನೂ ಕಕ್ಷೆಯಲ್ಲಿ ಸೇರಿಸಲು ಇಸ್ರೋಗೆ ಮನವಿ ಮಾಡುತ್ತಿದೆ, ಇದು ಈಗಿನ ನಮ್ಮ ಹೆಮ್ಮೆಯ ಭಾರತ ಎಂದ ಚಕ್ರವರ್ತಿ ಸೂಲಿಬೆಲೆ, ಈ ಸುಂದರ ಕಾರ್ಯಕ್ರಮಕ್ಕೆ ನನ್ನಿಂದಾದ ತೊಂದರೆಗೆ ಕ್ಷಮೆಯಾಚಿಸುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.