ಬಿಬಿಎಂಪಿ ಮೀಸಲಾತಿ ವಿರುದ್ದ ಕೋರ್ಟಿಗೆ: ಬಿಜೆಪಿಗೆ ಬೇಕಾಗಿದ್ದು ಅದೇ?
ಎರಡು ವರ್ಷದಿಂದ ಜನ ಪ್ರತಿನಿಧಿಗಳಿಲ್ಲದೇ ಸೊರಗುತ್ತಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಚಾಟಿ ಬೀಸಿದ ನಂತರ ಮೀಸಲಾತಿಯನ್ನು ಪ್ರಕಟಿಸಲಾಗಿತ್ತು. ಆದರೆ ಇದು, ಬರೀ ವಿರೋಧ ಪಕ್ಷದ ಕೆಂಗಣ್ಣಿಗೆ ಮಾತ್ರವಲ್ಲ, ಆಡಳಿತ ಪಕ್ಷದ ಕೋಪಕ್ಕೂ ಇದು ತುತ್ತಾಗಿದೆ.
Recommended Video
198 ಇದ್ದ ವಾರ್ಡುಗಳಿದ್ದ ವಾರ್ಡ್ ಸಂಖ್ಯೆ 243ಕ್ಕೆ ಏರಿಕೆಯಾಯಿತು. ರಾಜಧಾನಿಯ 28 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಆರು ಕ್ಷೇತ್ರದಲ್ಲಿ (ಹೆಬ್ಬಾಳ, ಪುಲಿಕೇಶಿ ನಗರ, ಶಾಂತಿ ನಗರ, ರಾಜಾಜಿ ನಗರ, ಚಿಕ್ಕಪೇಟೆ ಮತ್ತು ಆನೇಕಲ್) ಯಾವುದೇ ಬದಲಾವಣೆಯಾಗಿಲ್ಲ.
ಇನ್ನು ಮೂರು ಕ್ಷೇತ್ರಗಳಲ್ಲಿ (ಶಿವಾಜಿ ನಗರ, ಚಾಮರಾಜ ಪೇಟೆ ಮತ್ತು ಜಯನಗರ) ಇದ್ದ ವಾರ್ಡುಗಳನ್ನು ಕಮ್ಮಿ ಮಾಡಲಾಗಿದೆ. ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ವಾರ್ಡ್ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಅದರಲ್ಲೂ ನಾಲ್ಕೈದು ಕ್ಷೇತ್ರಗಳಲ್ಲಿ ನಾಲ್ಕರಿಂದ ಐದು ವಾರ್ಡುಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ.
ವಾರ್ಡ್ ಮರುವಿಂಗಡಣೆಯ ನಂತರ ಮೀಸಲಾತಿಯ ಕರಡು ಪಟ್ಟಿಯನ್ನು ಪ್ರಕಟಿಸಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಮೊದಲೇ ಸಿಟ್ಟಾಗಿದ್ದ ಜನ ಪ್ರತಿನಿಧಿಗಳು ಈ ಪಟ್ಟಿ ಪ್ರಕಟವಾದ ನಂತರವಂತೂ ಇನ್ನಷ್ಟು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈಗ, ಈ ಮೀಸಲಾತಿಯ ವಿರುದ್ದ ಕೋರ್ಟ್ ಮೆಟ್ಟಲೇರಲು ಕೆಲವು ಪಕ್ಷಗಳು ನಿರ್ಧರಿಸಿವೆ.

ಉದ್ದೇಶಪೂರ್ವಕವಾಗಿಯೇ ಮರು ವಿಂಗಡಣೆ ಮತ್ತು ಮೀಸಲಾತಿ
ಒಟ್ಟಾರೆಯಾಗಿ ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲಾತಿಯಿಂದಾಗಿ ಬಿಬಿಎಂಪಿ ಚುನಾವಣೆ ಮತ್ತೆ ಮುಂದು ಹೋಗುವ ಸಾಧ್ಯತೆಯೇ ಹೆಚ್ಚು. ಕರಡು ಮೀಸಲಾತಿಯ ವಿಚಾರದಲ್ಲಿ ಯಾವ ಪಕ್ಷದಲ್ಲೂ ಒಮ್ಮತವಿಲ್ಲ. ತಮ್ಮತಮ್ಮ ಕ್ಷೇತ್ರಗಳನ್ನು ಬಲ ಪಡಿಸಿಕೊಳ್ಳಲು ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ಮರು ವಿಂಗಡಣೆ ಮತ್ತು ಮೀಸಲಾತಿ ರೂಪಿಸಿದ್ದಾರೆ ಎನ್ನುವ ಆರೋಪ ಕಾಂಗ್ರೆಸ್ಸಿಗರದ್ದು. ಅದಕ್ಕೇ ಅವರದ್ದೇ ಆದ ಕಾರಣಗಳಿವೆ.

ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್
ಸಮುದಾಯದ ಮತದಾರರು ಬೆರಳಣಿಕೆಯಷ್ಟು ಇದ್ದರೂ ಅದನ್ನು ಮೀಸಲು ಕ್ಷೇತ್ರವನ್ನಾಗಿ ಮಾಡಲಾಗಿದೆ. ಕೆಲವೊಂದು ಅಸೆಂಬ್ಲಿ ಕ್ಷೇತ್ರದ ಕೆಲವು ವಾರ್ಡುಗಳನ್ನು ಬಹುತೇಕ ಮಹಿಳೆಯರಿಗೆ ಮೀಸಲಿಡಲಾಗಿದೆ. ಯಾವುದೇ ಮಾರ್ಗಸೂಚಿಯನ್ನು ಪಾಲಿಸದೇ ಬಿಜೆಪಿ ಮತ್ತು ಸಂಘ ಪರಿವಾರದ ಕಚೇರಿಯಲ್ಲಿ ಕೂತು ಮೀಸಲಾತಿ ಪಟ್ಟಿಯನ್ನು ಹೊರಡಿಸಲಾಗಿದೆ ಎನ್ನುವುದು ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಆರೋಪ.

ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಲು ನಿರ್ಧಾರ
ಈಗ, ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ. ಒಂದು ವೇಳೆ, ಕೋರ್ಟ್ ಮೆಟ್ಟಲೇರಿದರೆ, ಅರ್ಜಿದಾರರ ಕೂಗು ಮಾನ್ಯತೆ ಪಡೆದುಕೊಂಡರೆ ಈ ಮೀಸಲಾತಿಗೆ ತಡೆ ಬಿದ್ದರೂ ಬೀಳಬಹುದು, ಆಗ ಮತ್ತೆ ಚುನಾವಣೆ ಮುಂದಕ್ಕೆ ಹೋಗಲಿದೆ. ಕೋರ್ಟ್ ತಡೆ ನೀಡಿದ್ದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಇದರಿಂದ ನಿರಾಳವಾಗಲಿದೆಯಾ, ಈಗ ಬಿಜೆಪಿಗೆ ಚುನಾವಣೆ ಬೇಕಾಗಿಲ್ಲವಾ? ಕೋರ್ಟ್ ಮೆಟ್ಟಲೇರಲಿ ಎನ್ನುವ ಕಾರಣಕ್ಕಾಗಿಯೇ ಮೀಸಲಾತಿಯ ಅಧಿಸೂಚನೆ ಹೊರಡಿಸಲಾಗಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ದಿನಾಂಕ ಘೋಷಿಸುವ ಮುನ್ನವೇ ಕಾಂಗ್ರೆಸ್ಸಿಗೆ ಸೋಲಿನ ಭೀತಿ
ಆಕ್ಷೇಪಣೆಯಿದ್ದರೆ ಕೋರ್ಟಿಗೆ ಹೋಗಲಿ, ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನವೇ ಕಾಂಗ್ರೆಸ್ಸಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಬಿಜೆಪಿ ನಾಯಕರೋನೋ ಆರೋಪಿಸುತ್ತಿದ್ದಾರೆ. ಆದರೆ, ಈಗಿನ ಸರಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಹೋದರೆ, ಬಿಜೆಪಿಗೆ ಲಾಭವಾಗಲಿದೆಯಾ? ಕಾಂಗ್ರೆಸ್ಸಿಗಿಂತ ಬಿಜೆಪಿಗೇ ಸೋಲಿನ ಭೀತಿ ಕಾಡುತ್ತಿದೆಯಾ ಎನ್ನುವುದಕ್ಕೆ ಮತದಾರ ಮಾತ್ರ ಉತ್ತರಿಸಬಲ್ಲ.












Click it and Unblock the Notifications