ಇಂತಹ ಬೇವರ್ಸಿ ಸರಕಾರ ಬೇಕಾ? ಅಬ್ಬಬ್ಬಾ.. ಹಿಂದೆಂದೂ ಕೇಳದಂತಹ ಜಮೀರ್ ಮಾತಿನ ಬಿರುಗಾಳಿ
ಬೆಂಗಳೂರು, ಮೇ 2: "ಎರಡು ಲಕ್ಷ, ಮೂರು ಲಕ್ಷ ಜನ ಸೇರಿಸಿಕೊಂಡು ಆ ಮೋದಿ ರ್ಯಾಲಿ ಮಾಡುತ್ತಾರಲ್ಲಾ, ಇಂತಹ ಬೇವರ್ಸಿ ಸರಕಾರ ಬೇಕಾ ಎಂದು ನಾವಲ್ಲ, ಜನ ಕೇಳುತ್ತಾ ಇದ್ದಾರೆ"ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
"ಮೋದಿಗೆ ಬರೀ ಚುನಾವಣೆ ಬೇಕು, ಎಲ್ಲಾ ರಾಜ್ಯದಲ್ಲಿ ಬಿಜೆಪಿ ಬರಬೇಕು ಅಷ್ಟೇ.. ಜನ ಸತ್ತರೆ ಏನಂತೆ ಅವರಿಗೆ. ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲಾಂತ ರೋಗಿಗಳು ಹೊರಗೆ ಕಾಯುತ್ತಿದ್ದಾರೆ. ಜನ ನಿಮಗೆ ಶಾಪ ಹಾಕುತ್ತಿದ್ದಾರೆ"ಎಂದು ಜಮೀರ್ ಅಹ್ಮದ್ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಕೆಂಡಕಾರಿದ್ದಾರೆ.
"ಮೋದಿ..ಮೋದಿ ಎಂದು ಕೂಗುತ್ತಿದ್ದವರು ಈಗ ಚಪ್ಪಲಿ ತೆಗೆದುಕೊಂಡು ಹೊಡೀತಾ ಇದ್ದಾರೆ. ಕೊರೊನಾ ಎರಡನೇ ಅಲೆ ಬರುತ್ತದೆ ಎನ್ನುವುದು ಗೊತ್ತಿದ್ದರೂ ಚುನಾವಣೆ ನಡೆಯಿತು. ಚುನಾವಣೆಯನ್ನು ಮುಂದಕ್ಕೆ ಹಾಕುವುದು ಯಾರ ಜವಾಬ್ದಾರಿಯಾಗಿತ್ತು"ಎಂದು ಜಮೀರ್ ಪ್ರಶ್ನಿಸಿದ್ದಾರೆ.
"ಮಾನ್ಯ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕಾಗಿತ್ತು. ಅದೆಲ್ಲಾ ಯಾವುದೂ ಬಿಜೆಪಿಗೆ ಬೇಕಾಗಿಲ್ಲ. ಜನರ ಬಗ್ಗೆ ಚಿಂತೆಯಿಲ್ಲದ ಸರಕಾರವಿದು"ಎಂದು ಜಮೀರ್ ಅಹ್ಮದ್, ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದ್ದಾರೆ. ಜಮೀರ್ ಮಾತಿನ ಝಲಕ್ ಸ್ಲೈಡಿನಲ್ಲಿ..

ಲೋಕಲ್ ಬಾಡಿ ಚುನಾವಣೆಯಲ್ಲಿ ಹತ್ತರಲ್ಲಿ ಬರೀ ಒಂದರಲ್ಲಿ ಮಾತ್ರ ಬಿಜೆಪಿ
"ಲೋಕಲ್ ಬಾಡಿ ಚುನಾವಣೆಯಲ್ಲಿ ಜನರು ಬಿಜೆಪಿಗೆ ಪಾಠ ಕಲಿಸಿದ್ದಾರೆ. ಹತ್ತರಲ್ಲಿ ಬರೀ ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪರವಾಗಿ ಇಷ್ಟು ಉತ್ತಮ ಫಲಿತಾಂಶ ಬರುತ್ತದೆ ಎಂದು ನಾನೂ ನಿರೀಕ್ಷೆ ಇಟ್ಟು ಕೊಂಡಿರಲಿಲ್ಲ"ಎಂದು ಜಮೀರ್ ಹೇಳಿದ್ದಾರೆ.

ಬಹಳಷ್ಟು ರೋಗಿಗಳು ಆಸ್ಪತ್ರೆಗೆ ಹೋಗದೇನೇ ಸಾಯುತ್ತಿದ್ದಾರೆ, ಸಾವಿನ ಲೆಕ್ಕದಲ್ಲೂ ಮೋಸ
"ಬಹಳಷ್ಟು ರೋಗಿಗಳು ಆಸ್ಪತ್ರೆಗೆ ಹೋಗದೇನೇ ಸಾಯುತ್ತಿದ್ದಾರೆ. ಆ ಲೆಕ್ಕ ಸರಕಾರಕ್ಕೆ ಇಲ್ಲ, ಬಹಳಷ್ಟು ಬೀದಿ ಬೀದಿಯಲ್ಲಿ ಸಾಯುತ್ತಿದ್ದಾರೆ. ಜನರ ಈ ಶಾಪ ನಿಮ್ಮನ್ನು ಸುಮ್ಮನೆ ಬಿಡದು. ದಯಮಾಡಿ ಗಮನಕೊಡಿ"ಎಂದು ಜಮೀರ್ ಮನವಿ ಮಾಡಿದ್ದಾರೆ.

ನೋಡಿ ಸ್ವಾಮಿ ಮೋದಿ ಸಾಹೇಬ್ರೇ.. ಸಾಮಾಜಿಕ ತಾಣದಲ್ಲಿ ಹೇಗೆ ನಿಮಗೆ ಉಗೀತಾ ಇದ್ದಾರೆ
ಹೋದ ಸಲವಿದ್ದ ಹತ್ತು ಸಾವಿರ ಬೆಡ್ ಎಲ್ಲಿ ಹೋಯಿತು, ಹೆಣ್ಣು ಮಕ್ಕಳು ಇಷ್ಟು ದಿನ ಮಾತನಾಡುತ್ತಿರಲಿಲ್ಲ. ಈಗ, ನೋಡಿ ಸ್ವಾಮಿ ಮೋದಿ ಸಾಹೇಬ್ರೇ.. ಸಾಮಾಜಿಕ ತಾಣದಲ್ಲಿ ಹೇಗೆ ನಿಮಗೆ ಉಗೀತಾ ಇದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 750 ಬೆಡ್ ಇದೆ, ಅದರಲ್ಲಿ ವೆಂಟಿಲೇಟರ್ ಇರುವ ಬೆಡ್ ಬರೀ ಅರವತ್ತು ಮಾತ್ರ"ಎಂದು ಜಮೀರ್, ಸರಕಾರದ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.
Recommended Video

ವಿಕ್ಟೋರಿಯಾ ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ನೂರು ಬೆಡ್ ಹಾಕುತ್ತೇವೆ
"ವಿಕ್ಟೋರಿಯಾ ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ನೂರು ಬೆಡ್ ಹಾಕುತ್ತೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಹೇಳಿದ್ದಾರೆ. ಮೊದಲು ಆ ಕೆಲಸವನ್ನು ಮಾಡಿ, ಜನರಿಗೆ ಅನುಕೂಲವಾಗುತ್ತದೆ. ಬಡವರು ಬೀದಿ ಬೀದಿಯಲ್ಲಿ ಸಾಯುತ್ತಿದ್ದಾರೆ, ಅದನ್ನು ಕಣ್ಣಲ್ಲಿ ನೋಡೋಕೆ ಆಗುತ್ತಿಲ್ಲ, ಅವರನ್ನು ಉಳಿಸಿ ಪುಣ್ಯ ಕಟ್ಟಿಕೊಳ್ಳಿ"ಎಂದು ಜಮೀರ್ ಅಹ್ಮದ್, ಸರಕಾರಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications