ಬೆಂಗಳೂರಿನಲ್ಲಿ ಮತ್ತೆ ವರ್ಕ್ ಪ್ರಮ್ ಹೋಮ್ ಘೋಷಿಸಿದ ಕಂಪೆನಿಗಳು
ಬೆಂಗಳೂರು, ಸೆಪ್ಟೆಂಬರ್ 05: ಭಾರೀ ಮಳೆಯ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನ ಹಲವಾರು ಕಂಪನಿಗಳು ಮತ್ತು ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ.
ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಮೊಣಕಾಲಿನವರೆಗೆ ನೀರು ನಿಲ್ಲುವ ಸ್ಥಿತಿ ಬಂದಿದೆ. ಹಲವಾರು ಪ್ರದೇಶಗಳು ಜಲಾವೃತಗೊಂಡು ಕೆಲವು ಭಾಗಗಳಲ್ಲಿ ದೋಣಿಗಳು ಮತ್ತು ಟ್ರ್ಯಾಕ್ಟರ್ಗಳು ಜನರನ್ನು ಕರೆತರಲು ಮುಂದಾಗಿದ್ದವು. ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಭಾರೀ ಅಡ್ಡಿಯಾಯಿತು. ಸಂಚಾರ ಪೊಲೀಸರು ಕೆಲವು ಬಡಾವಣೆಗಳ ನಿವಾಸಿಗಳನ್ನು ಆಚೆ ಬಾರದಂತೆ ಸೂಚಿಸಿ ಮನೆಯೊಳಗೆ ಇರುವಂತೆ ಸೂಚನೆ ನೀಡಿದ್ದರು.
ಸ್ವಿಗ್ಗಿ ಮತ್ತು ಗೋಲ್ಡ್ಮನ್ ಸ್ಯಾಚ್ಸ್ ಸೇರಿದಂತೆ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತಮ್ಮ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಿವೆ. ಸಣ್ಣ ಸಣ್ಣ ಕಂಪನಿಗಳು ಮತ್ತು ಕಚೇರಿಗಳು ಕೂಡ ತಮ್ಮ ಸಿಬ್ಬಂದಿಯನ್ನು ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿವೆ ಎಂದು ಟೈಮ್ಸ್ ವರದಿ ಮಾಡಿದೆ.
ಮಾನ್ಸೂನ್ ಮಳೆಯು ಬೆಂಗಳೂರು ನಗರದ ಟ್ರಾಫಿಕ್ ಮತ್ತು ದುರ್ಬಲ ಮೂಲಸೌಕರ್ಯಗಳ ಮೇಲೆ ತನ್ನ ಗದಪ್ರಹಾರವನ್ನು ಮುಂದುವರೆಸುತ್ತಿರುವುದರಿಂದ, ನಾವು ಈ ವಾರ ಆನ್ಲೈನ್ ತರಗತಿಗಳಿಗೆ ನಡೆಸಲು ಮುಂದಾಗಿದ್ದೇವೆ. ಇಂಟರ್ನೆಟ್ ಮತ್ತು ವಿದ್ಯುತ್ ವ್ಯತ್ಯಯ, ಪ್ರಾಣಹಂತಕ ಗುಂಡಿಗಳಿಂದ ಕೂಡಿದ ರಸ್ತೆಗಳು ಮತ್ತು ನಂತರದ ಟ್ರಾಫಿಕ್ ಜಾಮ್ಗಳು ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮನೆಯಿಂದ ಆಚೆ ಬರಲು ಬಿಡುತ್ತಿಲ್ಲ ಎಂದು ವೈಟ್ಫೀಲ್ಡ್ನಲ್ಲಿರುವ ಇನ್ವೆಂಚರ್ ಅಕಾಡೆಮಿ ಹೇಳಿದೆ.

ಬೆಂಗಳೂರಿಗೆ ಸೆಪ್ಟೆಂಬರ್ 7 ರವರೆಗೂ ಹಳದಿ ಅಲರ್ಟ್
ಏತನ್ಮಧ್ಯೆ, ನಿರಂತರ ಮಳೆಯು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿಗೆ ಸೆಪ್ಟೆಂಬರ್ 7 ರವರೆಗೂ ಹಳದಿ ಅಲರ್ಟ್ ನೀಡಿದ್ದರಿಂದ ಅಧಿಕಾರಿಗಳು ತಮ್ಮ ಸೂಚನೆಗಳನ್ನು ಜನರಿಗೆ ನೀಡಿದ್ದಾರೆ. ಸೋಮವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರಿಂದ ಲಕ್ಷಾಂತರ ವಾಹನ ಸವಾರರು ಮತ್ತು ಚಾಲಕರು ಕಚೇರಿಗಳನ್ನು ತಲುಪಲು ತೊಂದರೆ ಅನುಭವಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ರಿಚ್ಮಂಡ್ ರಸ್ತೆಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಸಾಫ್ಟ್ವೇರ್ ವೃತ್ತಿಪರರ ಓಡಾಟಕ್ಕೆ ಅನಾನುಕೂಲ
ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಐಟಿ ಕಂಪನಿಗಳ ಕೇಂದ್ರವಾಗಿರುವ ಇಕೋಸ್ಪೇಸ್ ಕೂಡ ನೀರಿನಿಂದ ಜಲಾವೃತವಾಗಿದ್ದು, ಸಾಫ್ಟ್ವೇರ್ ವೃತ್ತಿಪರರ ಓಡಾಟಕ್ಕೆ ಅನಾನುಕೂಲವಾಗಿದೆ. ಇದಲ್ಲದೇ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್ ರಸ್ತೆಯೂ ನೀರಿನ ಸಮಸ್ಯೆ ಎದುರಿಸುತ್ತಿದೆ.

ಒಂದೇ ದಿನದಲ್ಲಿ 225 ಕೋಟಿ ನಷ್ಟ
ಈ ಮಧ್ಯೆ ಹೊರ ವರ್ತುಲ ರಸ್ತೆಯಲ್ಲಿ ನೆಲೆಗೊಂಡಿರುವ ಕಂಪೆನಿಗಳು ತಮಗೆ ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಮಳೆಯಿಂದ ಒಂದೇ ದಿನದಲ್ಲಿ 225 ಕೋಟಿ ನಷ್ಟ ಅನುಭವಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಈ ಖಾಸಗಿ ಕಂಪೆನಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಸಾರ್ವಜನಿಕರ ರಕ್ಷಣೆಗೆ ಎಸ್ಡಿಆರ್ಎಫ್ ತಂಡ
ಈಗಾಗಲೇ ಈ ಹೊರ ವರ್ತುಲ ರಸ್ತೆಯ ಕಂಪೆನಿಗಳ ಕೆಲವು ಮಂದಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಕಂಪೆನಿಗಳ ಸಿಬ್ಬಂದಿ ಶೇ. 30ರಷ್ಟು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 30ರಂದು ಸುರಿದ ಮಳೆಗೆ ಹೊರ ವರ್ತುಲ ರಸ್ತೆಯಲ್ಲಿ ಮಂಡಿಮಟ್ಟದ ನೀರು ನಿಂತು ಸವಾರರು ಪ್ರಯಾಸ ಪಟ್ಟಿದ್ದಾರೆ. ಅಲ್ಲದೆ ಬೆಂಗಳೂರಿನ ಹಲವು ವಾರ್ಡ್ಗಳಲ್ಲಿ ನೀರು ನಿಂತು ಸಾರ್ವಜನಿಕರ ರಕ್ಷಣೆಗೆ ಎಸ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ.












Click it and Unblock the Notifications