Breaking: ಎಡಿಜಿಪಿ ಅಮೃತ್ ಪೌಲ್ ಬಂಧನ: ಸರ್ಕಾರಕ್ಕೆ ಹಿನ್ನಡೆ ಹೇಗಾಗುತ್ತದೆ ಎಂದ ಸಿಎಂ
ಬೆಂಗಳೂರು ಜುಲೈ 04 : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಬಂಧನದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಕಬ್ಬನ್ ಪಾರ್ಕ್ನ ಸರ್ಕಾರಿ ಮತ್ಸ್ಯಾಲಯದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಿಸ್ಪಕ್ಷಪಾತವಾದ ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನು ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರದಂದು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದೆ. ಈಗಾಗಲೇ ಮೂದಲ ಸಲ ವಿಚಾರಣೆ ಎದುರಿಸಿದ್ದ ಅಮೃತ್ ಪಾಲ್ ಅವರು ಇಂದು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಅವರನ್ನು ಬಂಧಿಸಲಾಗಿದೆ.
ಎಡಿಜಿಪಿ ಬಂಧನ ಸರ್ಕಾರಕ್ಕೆ ಹಿನ್ನಡೆ ಹೇಗೆ ಆಗುತ್ತದೆ. ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತದೆ. ಇದೇ ಪ್ರಕಣರಣ ಹಿಂದಿನ ಸರ್ಕಾರದ ಅವಧಿಯಲ್ಲಾಗಿದ್ದರೆ ಮುಚ್ಚಿ ಹಾಕುತ್ತಿದ್ದರು. ಇದು ಸರ್ಕಾರದ ಉತ್ತಮ ಆಡಳಿತಕ್ಕೆ ಕನ್ನಡಿ ಎಂದರು.
ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶವನ್ನು ನೀಡಲಾಗಿದೆ. ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ ನಮ್ಮ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಗರಣದ ಕೂಗು ಕೇಳಿಬಂದಿದ್ದರೂ , ಯಾವುದೇ ತನಿಖೆ ನಡೆದಿರಲಿಲ್ಲ ಎಂದು ತಿಳಿಸಿದರು.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಸಿಐಡಿ ಪರ ವಾದವನ್ನು ಮಂಡಿಸಿದ ಸರ್ಕಾರಿ ಅಭಿಯೋಜಕರು ಆರೋಪಿತ ಎಡಿಜಿಪಿ ಅಮೃತ್ ಪೌಲ್ರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ವಾದಿಸಿದ್ದರು. ನ್ಯಾಯಾಧೀಶರು ಆಮೃತ್ ಪೌಲ್ರನ್ನು 10 ದಿನಗಳ ಕಾಲ ಪೊಲೀಸ್ (ಸಿಐಡಿ) ಕಸ್ಟಡಿಗೆ ನೀಡಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿದಂತೆ ಸಿಐಡಿ ಪೊಲೀಸರು ಮಹತ್ವದ ಅಂಶಗಳನ್ನು ಬಯಲಿಗೆ ಎಳೆದಿದ್ದಾರೆ. ಪಿಎಸ್ಐ ನೇಮಕಾತಿ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ ಸೋರಿಕೆಯಾಗಿದೆ ಎಂಬ ಸ್ಫೋಟಕ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪೊಲೀಸ್ ನೇಮಕಾತಿ ವಿಭಾಗದ ಕಚೇರಿ ಅಂದರೆ, ಅಮೃತ್ ಪಾಲ್ ಅವರ ಅಧಿಕೃತ ಕಚೇರಿಯಲ್ಲಿ ಒಎಂಆರ್ ಶೀಟ್ ತಿದ್ದಲಾಗಿದೆ ಎಂಬುದು ಇದೀಗ ಸಾಬೀತಾಗಿದ್ದು, ಈ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಬಂಧನ ಮಾಡಲಾಗಿದೆ.
Recommended Video