ಬೆಂಗಳೂರಿನಲ್ಲಿ ನಡೆಯಬೇಕಿದ್ದ ಹಾಸ್ಯ ಕಲಾವಿದ ವೀರ್ ದಾಸ್ ಕಾರ್ಯಕ್ರಮ ರದ್ದು
ಬೆಂಗಳೂರು, ನವೆಂಬರ್ 10: ಬಲಪಂಥೀಯ ಸಂಘಟನೆಗಳ ವಿರೋಧದ ಪರಿಣಾಮವಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ವೀರ್ ದಾಸ್ ಕಾರ್ಯಕ್ರಮ ರದ್ದಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಶೋ ರದ್ದಾದ ವಿಷಯವನ್ನು ಆಯೋಜಕರು ತಿಳಿಸಿದ್ದಾರೆ. "ಕೆಲವು ಅನಿವಾರ್ಯ ಕಾರಣಗಳಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮರುದಿನಾಂಕ ಹಾಗೂ ವಿವರಗಳನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಅಡಚಣೆಗಾಗಿ ಕ್ಷಮೆ ಕೇಳುತ್ತೇವೆ" ಎಂದು ತಿಳಿಸಿದ್ದಾರೆ.
ಬೆಂಗಳೂರು: ವೀರ್ ದಾಸ್ ಕಾಮಿಡಿ ಶೋ ರದ್ದು ಮಾಡಲು ಒತ್ತಾಯ
ಇನ್ನು ಶೋ ರದ್ದಾದ ಕಾರಣ ಬುಕ್ ಮೈ ಶೋ ಟಿಕೆಟ್ ಹಣವನ್ನು ಹಿಂದಿರುಗಿಸಲಿದೆ. ಟಿಕೆಟ್ ಬುಕ್ ಮಾಡಿರುವವರು ಆ ಹಣವನ್ನು ಹೊಸ ದಿನಾಂಕಕ್ಕೆ ವರ್ಗಾವಣೆಯನ್ನು ಮಾಡಿಕೊಳ್ಳುವ ಆಯ್ಕಯೂ ಇದೆ ಎಂದು ದಾಸ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ವೀರ್ ದಾಸ್ ಹಾಸ್ಯ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಈಗಾಗಲೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಗುರುವಾರವೂ ಕೂಡ ಬೆಳಗ್ಗೆಯಿಂದಲೇ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.
ವೀರ್ದಾಸ್ ಕಾರ್ಯಕ್ರಮವೊಂದರಲ್ಲಿ ಭಾರತ, ಮಹಿಳೆಯರು ಹಾಗೂ ಹಿಂದೂ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಹಾಗಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ದೂರು ನೀಡಿದ್ದೇವೆ. ಹಾಗೂ ಈ ಕಾರ್ಯಕ್ರಮವನ್ನು ಭಹಿಷ್ಕರಿಸುವಂತೆ ಜನರಿಗೂ ಮನವಿ ಮಾಡುತ್ತೇವೆ ಎಂದು ಹಿಂದೂ ಜನಜಾಗೃತಿ ವೇದಿಕೆಯ ವಕ್ತಾರ ಮೋಹನ್ ಗೌಡ ಹೇಳಿದ್ದಾರೆ.
ಕರ್ನಾಟಕ ಈಗಾಗಲೇ ಕೋಮು ಘಟನೆಗಳ ಕಾರಣ ಅನೇಕ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸುವ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಅವರು ಆಗ್ರಹಿಸಿದ್ದಾರೆ.
ವೀರ್ ದಾಸ್ ವಿರೋಧಕ್ಕೆ ಕಾರಣ?
ಕಳೆದ ವರ್ಷಅಮೆರಿಕದ ವಾಷಿಂಗ್ಟನ್ನ ಕಾರ್ಯಕ್ರಮದಲ್ಲಿ ವೀರ್ದಾಸ್ "ಭಾರತದಲ್ಲಿ ನಾವು ಮಹಿಳೆಯರನ್ನು ಬೆಳಗ್ಗೆ ಪೂಜೆ ಮಾಡುತ್ತೇವೆ ಮತ್ತು ರಾತ್ರಿ ಅವರ ಮೇಲೆ ಅತ್ಯಾಚಾರ ಮಾಡುತ್ತೇವೆ" ಎಂದು ದೇಶದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಅಪಹಾಸ್ಯ ಮಾಡಿದ್ದ. ಈ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತಲ್ಲದೆ, ಈ ಕುರಿತು ಮುಂಬೈ ಪೊಲೀಸ್ ದೂರು ದಾಖಲಿಸಿದ್ದರು.