ಬೆಂಗಳೂರು: ಕಾಮಿಡಿಯನ್ ಮುನಾವರ್ ಫರೂಕಿ ಕಾರ್ಯಕ್ರಮ ರದ್ದು
ಬೆಂಗಳೂರು, ನವೆಂಬರ್ 28: ಖ್ಯಾತ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫರೂಕಿ ಅವರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್-ಅಪ್ ಕಾಮಿಡಿ ಶೋಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಇಂದು ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ನಡೆಯಬೇಕಿದ್ದ ಫರೂಕಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಆಯೋಜಕರಿಗೆ ಪೊಲೀಸರು ಪತ್ರ ಬರೆದಿದ್ದಾರೆ. ಬೆಂಗಳೂರಿನ ಅಶೋಕ್ ನಗರದಲ್ಲಿರುವ ಗುಡ್ ಶೇಫರ್ಟ್ ಸಭಾಂಗಣದಲ್ಲಿ ಇಂದು ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಕಾನೂನು ಮತ್ತು ಸುವವ್ಯಸ್ಥೆ ಸಮಸ್ಯೆಗಳಿರುವ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪೊಲೀಸರು ಸಂಘಟಕರಿಗೆ ಸೂಚಿಸಿದ್ದಾರೆ. ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರು. ಫರೂಕಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ." ನಫ್ರತ್ ಜೀತ್ ಗಯೀ ಆರ್ಟಿಸ್ಟ್ ಹಾರ್ ಗಯಾ(ದ್ವೇಷ ಗೆದ್ದಿದೆ ಕಲಾವಿದ ಸೋತ) ಇದು ಅನ್ಯಾಯ" ಎಂದು ಬರೆದಿದ್ದಾರೆ. ಅಷ್ಟಕ್ಕೂ ಹಾಸ್ಯನಟ ಮುನಾವರ್ ಫರೂಕಿ ಕಾರ್ಯಕ್ರಮ ರದ್ದಾಗಿರುವುದು ಇದೇ ಮೊದಲ ಬಾರಿಗೆ ಅಲ್ಲ. ಈ ಹಿಂದೆ ಹಲವಾರು ಬಾರಿ ಫರೂಕ್ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.
ಈ ವರ್ಷದ ಆರಂಭದಲ್ಲಿ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ," ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ್ದಾರೆ" ಎಂದು ಆರೋಪ ಮಾಡಲಾಗಿತ್ತು. ಈ ಆರೋಪದ ಮೇಲೆ ಫರೂಕಿ ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸುವಂತಾಯಿತು. ಬಲಪಂಥೀಯ ಗುಂಪುಗಳ ಬೆದರಿಕೆಗಳಿಂದಾಗಿ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 12 ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಬೇಸರಗೊಂಡ ಫರೂಕಿ ಇನ್ನುಮುಂದೆ ಯಾವುದೇ ಪ್ರದರ್ಶನಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಶನಿವಾರ ಕಾರ್ಯಕ್ರಮದ ಆಯೋಜಕರಾದ ಕರ್ಟನ್ ಕಾಲ್ಗೆ ಭಾನುವಾರ ಕರ್ನಾಟಕದ ರಾಜಧಾನಿಯಲ್ಲಿ ನಡೆಯಬೇಕಿದ್ದ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪತ್ರ ಬರೆದ ಪೊಲೀಸರು ಫರೂಕಿ ಅವರನ್ನು 'ವಿವಾದಾತ್ಮಕ ವ್ಯಕ್ತಿ' ಎಂದು ಕರೆದಿದ್ದಾರೆ. ಜೊತೆಗೆ "ಮುನಾವರ್ ಫರೂಕಿ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಹಲವಾರು ಸಂಸ್ಥೆಗಳು ಈ ಸ್ಟ್ಯಾಂಡ್ಅಪ್ ಕಾಮಿಡಿ ಶೋವನ್ನು ವಿರೋಧಿಸುತ್ತವೆ. ಇದು ಅವ್ಯವಸ್ಥೆಯನ್ನು ಉಂಟುಮಾಡಬಹುದು ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲರ್ಹವಾದ ಮಾಹಿತಿಯಿದೆ. ಮುನಾವರ್ ಫರೂಕಿ ವಿವಾದಾತ್ಮಕ ವ್ಯಕ್ತಿ ಮತ್ತು ಅನೇಕ ರಾಜ್ಯಗಳು ಅವರ ಪ್ರದರ್ಶನಗಳನ್ನು ನಿಷೇಧಿಸಿವೆ. ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ನಿಷೇಧಿಸಲಾಗಿದೆ. ಆಯೋಜಕರು ನವೆಂಬರ್ 15 ರಂದು ಪ್ರದರ್ಶನಕ್ಕಾಗಿ ಪೊಲೀಸ್ ರಕ್ಷಣೆ ಕೋರಿ ಪತ್ರವನ್ನು ನೀಡಿದರು ನಾವು ಅದನ್ನು ರದ್ದುಗೊಳಿಸಿದ್ದೇವೆ" ಎಂದು ಪತ್ರದಲ್ಲಿ ಹೇಳಿದೆ.
ಅನೇಕ ರಾಜ್ಯಗಳು ಅವರ ಪ್ರದರ್ಶನಗಳನ್ನು ನಿಷೇಧಿಸಿವೆ. ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ನೀಷೇಧಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ನಲ್ಲಿನ ತುಕೊಗಂಜ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಬಯಕೆಯ ಉದ್ದೇಶಪೂರ್ವಕ ಹಾಗೂ ಕೇಡಿನ ಉದ್ದೇಶದ ಕೃತ್ಯದ ಪ್ರಕರಣವನ್ನು ದಾಖಲಿಸಲಾಗಿದೆ. ಇನ್ನೂ ಅನೇಕ ರಾಜ್ಯಗಳಲ್ಲಿ ಅವರ ವಿರುದ್ಧ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ.
Recommended Video
ಇಂದು ಸಂಜೆ ನಡೆಸಿಕೊಡಲಿದ್ದ ಕಾರ್ಯಕ್ರಮಕ್ಕೆ ಸುಮಾರು 700 ಟಿಕೆಟ್ ಗಳು ಮಾರಾಟಗೊಂಡಿದ್ದವು ಎನ್ನಲಾಗಿದೆ. ಕಾರ್ಯಕ್ರಮ ರದ್ದಾದ ಹಿನ್ನಲೆಯನ್ನು ಟಿಕೆಟ್ ಕೆಲ ಕಾರ್ಯಕರ್ತರು ಬೇಸರ ವ್ಯಕ್ತಪಡಿಸದ್ದಾರೆ. ಎಲ್ಲಾ ಸರಿಯಾಗಿದಿದ್ದರೆ ಮುನಾವರ್ ಫರೂಕಿ ಅವರು ಗುಡ್ ಶೆಫರ್ಡ್ ಸಭಾಂಗಣದಲ್ಲಿ ಇಂದು ಸಂಜೆ 5 ಗಂಟೆಗೆ 'ಡೋಂಗ್ರಿ ಟು ನೋವೇರ್ ಎಂಬ ಶೀರ್ಷಿಕೆಯೊಂದಿಗೆ ಪ್ರದರ್ಶನ ನೀಡಬೇಕಿತ್ತು. ಆದರೆ ಪೊಲೀಸರ ಒತ್ತಾಯಕ್ಕೆ ಮಣಿದು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.