ಬಿಡಿಎ ಅಧ್ಯಕ್ಷರ ಮತ್ತು ಆಯುಕ್ತರ ನಡುವೆ ಶೀತಲ ಸಮರ !
ಬೆಂಗಳೂರು, ಫೆಬ್ರವರಿ 09 : ಭವಾನಿ ಹೌಸಿಂಗ್ ಸೊಸೈಟಿ ವಿವಾದ ಬಿಡಿಎ ಆಯುಕ್ತರು ಹಾಗೂ ಅಧ್ಯಕ್ಷರ ನಡುವೆ ಸಮರಕ್ಕೆ ನಾಂದಿ ಹಾಡಿದೆ. ಭವಾನಿ ಹೌಸಿಂಗ್ ಸೊಸೈಟಿಗೆ ನಿಯಮ ಬಾಹಿರವಾಗಿ ಭೂಮಿಯನ್ನು ನೀಡಲಾಗುತ್ತಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಡಿಎ ಅಧ್ಯಕ್ಷರು, ಭವಾನಿ ಹೌಸಿಂಗ್ ಸೊಸೈಟಿ ಭೂಮಿಯನ್ನು ಬಿಡಿಎ ವಶಪಡಿಸಿಕೊಂಡಿದೆ. ಆಗಲೇ 20 ಎಕರೆ ಜಮೀನನ್ನು ಬಿಡಿಎ ನಿಂದ ನೀಡಲಾಗಿದೆ. ಉಳಿಕೆ ಜಮೀನನ್ನು ಸಗಟು ರೀತಿಯಲ್ಲಿ ನೀಡಲಾಗುತ್ತಿದೆ. ಇದರಿಂದ ಬಿಡಿಎಗೆ ನೂರಾರು ಕೋಟಿ ನಷ್ಟವುಂಟಾಗಲಿದೆ. ಬಿಡಿಎ ಕಡತಗಳನ್ನು ನೋಡಲು ನನಗೆ ಕೊಡುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ ಎಂದು ಅವರು ಹೇಳಿದರು.
ಭವಾನಿ ಹೌಸಿಂಗ್ ಸೊಸೈಟಿ ವಿವಾದ:
ನ್ಯಾಯಾಲಯ ಈ ಕುರಿತು ಪರಿಶೀಲನೆ ಮಾಡುವಂತೆ ಹೇಳಿದೆ. ಎರಡು ಬಾರಿ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಕ್ರಮಬದ್ಧವಾಗಿ ವಿಲೇವಾರಿ ಮಾಡಲು ಸೂಚನೆ ನೀಡಿದ್ದಾರೆ. ಇದರ ಆಧಾರದ ಮೇಲೆ ಭವಾನಿ ಹೌಸಿಂಗ್ ಸೊಸೈಟಿಗೆ ಪ್ರತಿಷ್ಠಿತರ ಬಡಾವಣೆಗಳಲ್ಲಿ ಭೂಮಿ ಮಂಜೂರು ಮಾಡಲಾಗುತ್ತಿದೆ. ನಾನು ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಎಲ್ಲವನ್ನು ನನ್ನ ಗಮನಕ್ಕೆ ತಂದು ಮಾಡುವಂತೆ ಮುಖ್ಯಮಂತ್ರಿಗಳು ಎಲ್ಲದಕ್ಕೂ ತಡೆ ನೀಡಿದ್ದಾರೆ. ಭವಾನಿ ಹೌಸಿಂಗ್ ಸೊಸೈಟಿಗೆ ಭೂಮಿ ನೀಡುವ ಮುನ್ನ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಹೋಗಬೇಕಿದೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.
ಭವಾನಿ ಹೌಸಿಂಗ್ ಸೊಸೈಟಿಗೆ ನೀಡಲು ಉದ್ದೇಶಿಸಿದ್ದ ಭೂಮಿಯನ್ನು ಮಂಜೂರು ಮಾಡದಂತೆ ತಡೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ಇತರೆ ಏಳು ಹೌಸಿಂಗ್ ಸೊಸೈಟಿಗಳಿಗೆ ಸಗಟು ನಿವೇಶನ ಮಂಜೂರಾತಿ ಕುರಿತು ಎಸ್ಐಟಿ ತನಿಖೆಯಾಗಬೇಕಿದೆ. ಈ ಕರಿತು ಒಂದು ತಿಂಗಳ ಹಿಂದೆಯೇ ಮುಖ್ಯಮಂತ್ರಿಗಳು ಹೇಳಿದ್ದರು. ಆಯುಕ್ತರು ಎಸ್ಐಟಿ ತನಿಖೆ ಬಗ್ಗೆ ಈವರೆಗೂ ಶಿಫಾರಸು ಮಾಡಿಲ್ಲ. ಹೀಗಾಗಿ ಎಸ್ಐಟಿ ರಚನೆ ನನೆಗುದಿಗೆ ಬಿದ್ದಿದೆ ಎಂದು ವಿಶ್ವನಾಥ್ ಅಸಹಾಯಕತೆ ವ್ಯಕ್ತಪಡಿಸಿದರು.
ನಾನು ಅಸಹಾಯಕನಲ್ಲ:
ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲ ಎಂದರೆ, ನೀವು ಅಸಹಾಯರಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಗಟ್ಟಿಯಾಗಿದ್ದೇನೆ. ಮುಖ್ಯಮಂತ್ರಿಗಳು ನನ್ನ ನಂಬಿ ಬಿಡಿಎ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇರುವಷ್ಟು ದಿನ ಒಳ್ಳೆ ಕೆಲಸ ಮಾಡಿ ಹೋಗಬೇಕು ಎಂದುಕೊಂಡಿದ್ದೇನೆ. ನಾನು ಅಸಹಾಯಕನಲ್ಲ. ಎಸ್ಐಟಿ ರಚನೆ ವಿಚಾರ ಮಾತ್ರವಲ್ಲ, ಬಿಡಿಎ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಟಿ. ಸೋಮಶೇಖರ್ ಅವರೇ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ , ಯಾರೇ ತಪ್ಪು ಮಾಡಿದರೂ ಬಿಡಲ್ಲ. ಎಸ್.ಟಿ. ಸೋಮಶೇಖರ್ ಅವರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಬ್ರೋಕರ್ ಮುಕ್ತ ಮಾಡಿಸುವುದು ಉದ್ದೇಶ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇನೆ. ಆದರೆ ನನಗೆ ಆಯುಕ್ತರು ಯಾವುದೇ ಸಹಕಾರ ನೀಡುತ್ತಿಲ್ಲ. ಸೌಜನ್ಯಕ್ಕೂ ನಾನು ಕರೆದರೂ ನನ್ನ ಕಚೇರಿಗೆ ಬರಲ್ಲ. ನಾನೇ ಅವರ ಕಚೇರಿಗೆ ಹೋಗಿ ಮಾತನಾಡಿಸಲು ಹೋದರೆ ವಕೀಲರ ಬಳಿ ಮಾತನಾಡಿದ ಬಳಿಕ ನನ್ನ ಸಮೀಪ ಮಾತನಾಡಿದರು. ಆಯುಕ್ತರ ನಡೆ ನನಗೆ ಬೇಸರ ತಂದಿದೆ ಎಂದು ಅಸಮಾಧಾನ ಹೊರ ಹಾಕಿದರು.
ಅಧಿಕಾರಿಗಳ ಶಾಮೀಲು :
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಷ್ಟು ಬೇಕಾದರೂ ಕೆಲಸ ಮಾಡಬಹುದು. ಆದರೆ ಇಲ್ಲಿನ ಕೆಲವು ಅಕ್ರಮಗಳ ಬಗ್ಗೆ ತನಿಖೆಯಾಗಬೇಕಿದೆ. ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಿಡಿಎ ಕಾನೂನು ಕೋಶದಲ್ಲಿ ಕೆಲವು ವಕೀಲರು ಬ್ರೋಕರಿಂಗ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇರುವ ವಕೀಲರನ್ನು ಹೊರಗೆ ಕಳಿಸಿ ಅರ್ಹರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುವುದು. ನ್ಯಾಯಾಲಯದಲ್ಲಿ ಸಮರ್ಥ ವಾದ ಮಾಡುವ ವಕೀಲರನ್ನಷ್ಟೇ ಇಟ್ಟುಕೊಳ್ಳಲಾಗುವುದು. ಈ ಕುರಿತು ಅಡ್ವೋಕೇಟ್ ಜನರಲ್ ಹತ್ತಿರ ಮಾತನಾಡಿದ್ದು, 170 ವಕೀಲರ ಸಂಖ್ಯೆಯನ್ನು ಐವತ್ತಕ್ಕೆ ಇಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
Recommended Video
ಡಿಜಟಲೀಕರಣ:
ಬಿಡಿಎ ದಾಖಲೆಗಳನ್ನ ಡಿಜಟಲೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಹದಿನೆಂಟ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಡಿಜಟಲೀಕರಣದ ಬಳಿಕ ಎಲ್ಲಾ ದಾಖೆಗಳು ಸಾರ್ವಜನಿಕರಿಗ ಮುಕ್ತವಾಗಲಿ ಸಿಗಲಿದೆ. ಕೆಲಸ ಮಾಡಲಿಕ್ಕೆ ಬಿಡಿಎದಲ್ಲಿ ಸಾಕಷ್ಟು ಅವಕಾಶವಿದೆ. ಭೂಮಿ ನೀಡಿದ ರೈತರಿಗೆ ಮತ್ತು ಅರ್ಜಿದಾರರಿಗೆ ಇನ್ನೂ ಸಾಕಷ್ಟು ನಿವೇಶನ ನೀಡುವುದು ಬಾಕಿಯಿದೆ. ಎಲ್ಲಾ ರೈತರು ಅಲೆಯುತ್ತಿದ್ದಾರೆ. ಮುಖ್ಯಮಂತ್ರಿಗಳ ಆಧ್ಯತೆ ಮೇರೆಗೆ ರೈತರಿಗೆ ಮೊದಲು ಪರಿಹಾರ ನೀಡಲಾಗುವುದು ಎಂದರು.