Yuva Budget 2023 : ಯುವ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ: ಕೌಶಲ್ಯ ತರಬೇತಿಗೆ ಒತ್ತು
ಬೆಂಗಳೂರು, ಡಿ. 09: ಎಲ್ಲ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ 'ಕರ್ನಾಟಕ ಯುವ ನೀತಿ'ಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಹೆಚ್ಚುತ್ತಿರುವ ನಿರುದ್ಯೋಗವನ್ನು ಕಡಿಮೆಗೊಳಿಸಲು, ಯುವಕರಲ್ಲಿ ಅಪೌಷ್ಟಿಕತೆ, ಮಾನಸಿಕ ಆರೋಗ್ಯ ಮತ್ತು ವ್ಯಸನದ ಸಮಸ್ಯೆಗಳನ್ನು ನಿಭಾಯಿಸಲು ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡಲು ಈ ಯುವ ನೀತಿಯು ಒತ್ತು ನೀಡುತ್ತದೆ. ಪ್ರಥಮ ಬಾರಿಗೆ ಇಂತಹ ಸಮಗ್ರ ನೀತಿಯನ್ನು ರೂಪಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
"ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆಯೇ ಈ ನೀತಿ ಕೇಂದ್ರಿಕರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023ರಲ್ಲಿ ಯುವ ಬಜೆಟ್ ಮಂಡಿಸಲಿದ್ದಾರೆ. ತಾಲೂಕು ಮಟ್ಟದಲ್ಲಿ ಕಚೇರಿಗಳನ್ನು ತೆಗೆದು ಯುವಕರಿಗಾಗಿ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸುವಂತೆ ಈ ನೀತಿ ಶಿಫಾರಸು ಮಾಡಿದೆ" ಎಂದು ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ಕರ್ನಾಟಕ ಯುವ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರವು ಅಕ್ಟೋಬರ್ 2021 ರಲ್ಲಿ 13 ಸದಸ್ಯರಿರುವ ತಜ್ಞರ ಸಮಿತಿಯನ್ನು ರಚಿಸಿತ್ತು.
ಈ ಸಮಿತಿಯು ಶಿಕ್ಷಣ, ತರಬೇತಿ, ಉದ್ಯೋಗ, ಉದ್ಯಮಶೀಲತೆ, ಆರೋಗ್ಯ ಮತ್ತು ಯೋಗಕ್ಷೇಮ, ಕ್ರೀಡೆ ಮತ್ತು ಫಿಟ್ನೆಸ್, ಕಲೆ ಮತ್ತು ಸಂಸ್ಕೃತಿ ಹಾಗೂ ನಾಯಕತ್ವದ ಅಭಿವೃದ್ಧಿ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡು 15 ರಿಂದ 29 ರ ವಯೋಮಾನದ ಯುವಕರಿಗೆ ಒತ್ತು ನೀಡಿತ್ತು.

ಇಲಾಖೆ ಹಂಚಿಕೊಂಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 7.5 ಕೋಟಿ ಜನಸಂಖ್ಯೆಯಲ್ಲಿ ಶೇ.30ರಷ್ಟು (2.11 ಕೋಟಿ) ಯುವಕರು ಇದ್ದಾರೆ. ಶಿಕ್ಷಣ, ಕ್ರೀಡೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಮತ್ತು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಯುವಕರಿಗಾಗಿ 500 ಕ್ಕೂ ಹೆಚ್ಚು ಯೋಜನೆಗಳಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇನ್ನು, ರಾಜ್ಯದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆ ಬಿಡುವವರ ಪ್ರಮಾಣ ಹೆಚ್ಚಿದ್ದು, ಕೇವಲ ಶೇ 21ರಷ್ಟು ಯುವಕರು ಮಾತ್ರ ಪದವಿ ಮತ್ತು ಸ್ನಾತಕೋತ್ತರ ಹಂತ ತಲುಪುತ್ತಿದ್ದಾರೆ ಎಂದು ಇಲಾಖೆ ಹಂಚಿಕೊಂಡಿರುವ ದಾಖಲೆಗಳು ಹೇಳುತ್ತವೆ.












Click it and Unblock the Notifications