ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯಹಾರ: ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ
ಬೆಂಗಳೂರು, ಸೆಪ್ಟಂಬರ್ 14: ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆಯಲ್ಲಿ ನಡೆದಿದೆರುವ ಅವ್ಯವಹಾರ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಧಿವೇಶನದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ನ ಯಂತೀಂದ್ರ ಸಿದ್ದರಾಮಯ್ಯ ಅವರು ಗಂಗಾ ಕಲ್ಯಾಣ ಯೋಜನೆ ಕುರಿತು ಪ್ರಸ್ತಾಪಿಸಿ ತನಿಖೆ ಬಗ್ಗೆ ಪ್ರಶ್ನಿಸಿದರು. ಇದೇ ವಿಷಯದ ಮೇಲೆ ಕೆಲ ಹೊತ್ತು ದೀರ್ಘ ಚರ್ಚೆ ನಡೆಯಿತು. ಕಾಂಗ್ರೆಸ್ ಕೆಲವು ಸದಸ್ಯರು ಗಂಗಾ ಕಲ್ಯಾಣ ಯೋಜನೆ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ಆಗ್ರಹಿಸಿ ಧರಣಿ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆ ಅವ್ಯವಹಾರ ಸೇರಿದಂತೆ, ಗುತ್ತಿಗೆದಾರರಿಂದ ಸಲ್ಲಿಕೆಯಾದ ನಕಲಿ ಪ್ರಮಾಣ ಪತ್ರ, ಬೋರವೆಲ್ ಕೊರೆಯಲು ಸೂಚಿಸಿದ ದರದಲ್ಲಿನ ತಾರತಮ್ಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವಿಧಾನಸಭೆಗೆ ಅವರು ತಿಳಿಸಿದರು.
ಯೋಜನೆ ಅನುಷ್ಠಾನ ಬಗ್ಗೆ ತೀರ್ಮಾನ
ಅದಲ್ಲದೇ ಗಂಗಾಕಲ್ಯಾಣ ಯೋಜನೆಯನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಹೊಸದಾಗಿ ಅನುಷ್ಠಾನಗೊಳಿಸಬೇಕು, ಈ ಹಿಂದೆ ಬಾಕಿ ಇರುವ ಬೋರ್ವೆಲ್ಗಳನ್ನು ಸಂಪೂರ್ಣಗೊಳಿಸಲು ಏನು ಮಾಡಬೇಕು ಎಂಬ ಬಗ್ಗೆ ಶಾಸಕರ ಸಭೆ ಕರೆದು ನಿರ್ಧರಿಸಲಾಗುವುದು. ಆದರೆ ನೀವು ಧರಣಿ ಬಿಟ್ಟು ಏನು ಹೇಳಬೇಕೆಂದಿದ್ದಿರೋ ಅದನ್ನು ಸಭೆಯಲ್ಲಿ ಹೇಳಿ ಎಂದರು. ಬಳಿಕವೇ ಕಾಂಗ್ರೆಸ್ ಸದಸ್ಯರು ದರಣಿ ಹಿಂಪಡೆದರು.
ಪ್ರತಿ ಜಿಲ್ಲೆಯಲ್ಲೂ ಗುತ್ತಿಗೆದಾರರನ್ನು ನೇಮಿಸಿಕೊಂಡು
ಅವಧಿಯಲ್ಲಿ ಗಂಗಾಕಲ್ಯಾಣ ಯೋಜನೆಯ ಅನುಷ್ಠಾನದಲ್ಲಿ ಆದ ಲೋಪವಾಗಿದೆ. 2018ರ ಫಲಾನುಭವಿಗಳಿಗೆ ಬೋರ್ವೆಲ್ ಕೊರೆಸಿಲ್ಲ. ಇಡೀ ರಾಜ್ಯಕ್ಕೆ ಒಬ್ಬ ಗುತ್ತಿಗೆದಾರನಿಗೆ ಬೋರ್ವೆಲ್ ಕೊರೆಯಲು ಗುತ್ತಿಗೆ ನೀಡಲಾಗಿದೆ. ಹೀಗಾಗಿಯೇ ಯೋಜನೆ ವಿಳಂಬವಾಗುತ್ತಿದ್ದು, ಇದು ಸರಿಯಲ್ಲ. ಈ ಹಿಂದೆ ಇದ್ದಂತೆ ಪ್ರತಿ ಜಿಲ್ಲೆಗಳಿಗೂ ಗುತ್ತಿಗೆದಾರರನ್ನು ನೇಮಕಗೊಳಿಸಿ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರಿಯಾಂಕ್ ಖರ್ಗೆ ಸಹ ಬೋರ್ವೆಲ್ ಕೊರೆಸಲು ದರ ನಿಗದಿಮಾಡುವಲ್ಲಿ ತಾರತಮ್ಯ ಮಾಡಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ 84 ಸಾವಿರ ರೂ. ಗಳಿಗೆ ಹಾಗೂ ಎಸ್ಸಿಎಸ್ಟಿ ಇಲಾಖೆಯಲ್ಲಿ 1.24 ಲಕ್ಷ ರೂ.ಗೆ ಬೋರ್ವೆಲ್ ಕೊರೆಯಲು ದರ ನಿಗದಿ ಮಾಡಿದ್ದಾರೆ. ಈ ತಾರತಮ್ಯ ನೋಡಿದರೆ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿರುವುದು ಗೊತ್ತಾಗುತ್ತಿದೆ ಎಂದು ಅವರು ಆರೋಪಿಸಿದರು.
ಗುತ್ತಿಗೆದಾರರು ಕೋರ್ಟ್ಗೆ ಹೋಗಿದ್ದರಿಂದ ವಿಳಂಬ
ಗಂಗಾ ಕಲ್ಯಾಣ ಯೋಜನೆಯು ಒಟ್ಟು 431 ಕೋಟಿ ರೂ.ಯಷ್ಟಾಗಿದೆ. ನಕಲಿ ದಾಖಲಾತಿ ಸಲ್ಲಿಕೆ ಬಗ್ಗೆ ಚರ್ಚೆಯಾಗಿವೆ. ಸಚಿವರಿಗೆ ಅಧಿಕಾರಿಗಳು ಸರಿಯಾದ ಉತ್ತರ ಕೊಟ್ಟಿಲ್ಲ ಎಂದು ಕಾಂಗ್ರೆಸ್ನ ಹಲವು ಸದಸ್ಯರು ದ್ವನಿಗೂಡಿಸಿ ತನಿಖೆಗೆ ಒತ್ತಾಯಿಸಿದರು.
2018 ಮತ್ತು 2019ರಿಂದ ಫಲಾನುಭವಿಗಳಿಗೆ ಬೋರ್ವೆಲ್ ಕೊರೆಸಲಾಗುತ್ತಿದೆ. ಆದರೆ ಯೋಜನೆಯ ಸಂಬಂಧ ಕೆಲವು ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದಕ್ಕೆ ಅನುಷ್ಠಾನ ವಿಳಂಬವಾಯಿತು ಎಂದು ಮೀನುಗಾರಿಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಈ ವರ್ಷದಿಂದ ಯೋಜನೆ ಸರಳೀಕರಣ
ಪ್ರಸ್ತಕ ವರ್ಷದಿಂದ ಮುಖ್ಯಮಂತ್ರಿಗಳು ಯೋಜನೆಯನ್ನು ಸರಳೀಕರಣಗೊಳಿಸಿದ್ದಾರೆ. ಮುಂದೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಿ ಬೋರ್ವೆಲ್ ಕೊರೆಸುವ ವ್ಯವಸ್ಥೆಯನ್ನು ಜಾರಿ ಮಾಡಲಿದ್ದೇವೆ. ಇದರಿಂದ ಮುಂದೆ ಗುತ್ತಿಗೆ ಪ್ರಶ್ನೆಯೇ ಬರುವುದಿಲ್ಲ ಎಂದು ಅವರು ವಿವರಿಸಿದರು. ಇದಕ್ಕೂ ಜಗ್ಗದೇ ತನಿಖೆಗೆ ಆದೇಶಿಸಿ ಎಂದು ಮತ್ತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಕೊನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮನವಿಯಂತೆ ಗಂಗಾ ಕಲ್ಯಾಣ ಯೋಜನೆಯನ್ನು ತನಿಖೆ ನಡೆಸಲು ಆದೇಶಿಸಲಾಗುವುದು ಎಂದು ಭರವಸೆ ನೀಡಿ ಗಲಾಟೆಗೆ ತೆರೆ ಎಳೆದರು.